AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಪ್ರಧಾನಿ ಸ್ವಾಗತಿಸಲು ಬಾರದ ತೆಲಂಗಾಣ ಸಿಎಂ ಕೆಸಿಆರ್‌, ಇದು 6 ತಿಂಗಳಲ್ಲಿ 3 ಬಾರಿ! ಯಾಕೆ ಈ ಅಸಮಾಧಾನ?

PM Modi Hyderabad Visit: ತೆಲಂಗಾಣದಲ್ಲಿ ಕಾಂಗ್ರೆಸ್, ವೈಎಸ್‌ಆರ್ ಪಕ್ಷಗಳೆಲ್ಲಾ ದುರ್ಬಲವಾಗಿವೆ. ದಿನೇ ದಿನೇ ಬಿಜೆಪಿ ಪ್ರಬಲವಾಗುತ್ತಿದೆ. ಹೀಗಾಗಿ ಮೋದಿ ಕಂಡರೇ ಕೆಸಿಆರ್‌ ಗೆ ಕೋಪ, ಅಸಮಾಧಾನ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ತೃತೀಯ ರಂಗ ಕಟ್ಟುವ ಮಾತುಗಳನ್ನು ಆಗ್ಗಾಗ್ಗೆ ಕೆಸಿಆರ್ ಆಡುತ್ತಿರುತ್ತಾರೆ ಎಂಬ ಮಾತುಗಳಿವೆ.

ಮೋದಿ ಪ್ರಧಾನಿ ಸ್ವಾಗತಿಸಲು ಬಾರದ ತೆಲಂಗಾಣ ಸಿಎಂ ಕೆಸಿಆರ್‌, ಇದು 6 ತಿಂಗಳಲ್ಲಿ 3 ಬಾರಿ! ಯಾಕೆ ಈ ಅಸಮಾಧಾನ?
ಮೋದಿ ಪ್ರಧಾನಿ ಸ್ವಾಗತಿಸಲು ಬಾರದ ತೆಲಂಗಾಣ ಸಿಎಂ ಕೆಸಿಆರ್‌, ಇದು 6 ತಿಂಗಳಲ್ಲಿ 3 ಬಾರಿ! ಯಾಕೆ ಈ ಅಸಮಾಧಾನ?
S Chandramohan
| Edited By: |

Updated on:Jul 02, 2022 | 6:08 PM

Share

ಯಾವುದೇ ರಾಜ್ಯಕ್ಕಾಗಲೀ ದೇಶದ ಪ್ರಧಾನಿ ಭೇಟಿ ನೀಡಿದರೇ ಆ ರಾಜ್ಯದ ಮುಖ್ಯಮಂತ್ರಿಯೇ ವಿಮಾನ ನಿಲ್ದಾಣಕ್ಕೆ ಬಂದು ದೇಶದ ಪ್ರಧಾನಿಯನ್ನ ತಮ್ಮ ರಾಜ್ಯಕ್ಕೆ ಸ್ವಾಗತಿಸುವುದು ಶಿಷ್ಟಾಚಾರ. ಇದು ನಮ್ಮ ದೇಶದಲ್ಲಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಆದರೆ, ತೆಲಂಗಾಣ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರೆ (PM Modi Hyderabad Visit), ತೆಲಂಗಾಣ ಸಿಎಂ ಮಾತ್ರ ಶಿಷ್ಟಾಚಾರದ ಪ್ರಕಾರ, ಪ್ರಧಾನಿಯನ್ನು ಸ್ವಾಗತಿಸಲು ಬರಲ್ಲ. ಸೌಜನ್ಯಕ್ಕೂ ಪ್ರಧಾನಿಯನ್ನು ಭೇಟಿಯಾಗಲ್ಲ. ಕಳೆದ 6 ತಿಂಗಳ ಅವಧಿಯಲ್ಲಿ 3 ಬಾರಿ ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಬಂದೇ ಇಲ್ಲ.

ಮೋದಿ ಸ್ವಾಗತಿಸಲು ಬಾರದ ತೆಲಂಗಾಣ ಸಿಎಂ ಕೆಸಿಆರ್‌, 6 ತಿಂಗಳಲ್ಲಿ 3 ಬಾರಿಯೂ ಪ್ರಧಾನಿ ಮೋದಿ ಸ್ವಾಗತಿಸದ ಕೆಸಿಆರ್‌

ಪಕ್ಷ ಯಾವುದೇ ಇರಲಿ, ಸೈದ್ದಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ. ನರೇಂದ್ರ ಮೋದಿ ಇಡೀ ದೇಶಕ್ಕೆ ಪ್ರಧಾನಿ. ಪ್ರಧಾನ ಮಂತ್ರಿ ಹುದ್ದೆಯಲ್ಲಿರುವವರು ದೇಶದಲ್ಲಿ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದರೂ ಆ ರಾಜ್ಯದ ಸಿಎಂ ವಿಮಾನ ನಿಲ್ದಾಣಕ್ಕೆ ಬಂದು ದೇಶದ ಪ್ರಧಾನಿಯನ್ನು ತಮ್ಮ ರಾಜ್ಯಕ್ಕೆ ಸ್ವಾಗತಿಸುವುದು ನಮ್ಮ ದೇಶದಲ್ಲಿ ಶಿಷ್ಟಾಚಾರವಾಗಿ ಬೆಳೆದು ಬಂದಿದೆ. ದೇಶದಲ್ಲಿ ಪ್ರಧಾನಿಯನ್ನು ರಾಜ್ಯಗಳ ಸಿಎಂಗಳು ಸ್ವಾಗತಿಸುವುದು ಸಂಪ್ರದಾಯವೂ ಆಗಿದೆ. ಆದರೇ, ಈ ಶಿಷ್ಟಾಚಾರ, ಸಂಪ್ರದಾಯವನ್ನು ತೆಲಂಗಾಣ ಸಿಎಂ ಕೆಸಿಆರ್ ಮಾತ್ರ ಪಾಲಿಸಲ್ಲ. ದೇಶದ ಪ್ರಧಾನಿಯೇ ತಮ್ಮ ರಾಜ್ಯವಾದ ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಬಂದರೂ, ಸಿಎಂ ಕೆಸಿಆರ್ ಏರ್ ಪೋರ್ಟ್ ನತ್ತ ತಲೆಯೂ ಹಾಕಲ್ಲ. ಪ್ರಧಾನಿಯನ್ನು ಶಿಷ್ಟಾಚಾರದ ಪ್ರಕಾರ, ತಾವು ಸ್ವಾಗತಿಸುವ ಬದಲು ತಮ್ಮ ಕ್ಯಾಬಿನೆಟ್ ನ ಸಚಿವರೊಬ್ಬರನ್ನು ಪ್ರಧಾನಿ ಸ್ವಾಗತಕ್ಕೆ ಕಳಿಸಿ ಕೈ ತೊಳೆದುಕೊಂಡು ಬಿಡ್ತಾರೆ. ಕಳೆದ 6 ತಿಂಗಳ ಅವಧಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಮೂರು ಬಾರಿ ಭೇಟಿ ಕೊಟ್ಟಿದ್ದಾರೆ. ಮೂರು ಬಾರಿಯೂ ತೆಲಂಗಾಣ ಸಿಎಂ ಕೆಸಿಆರ್, ಪ್ರಧಾನಿ ಮೋದಿ ಸ್ವಾಗತಿಸಲು ಏರ್ ಪೋರ್ಟ್ ಗೆ ಹೋಗಿಲ್ಲ. ಆ ಮೂರು ಘಟನೆಗಳನ್ನು ಇಲ್ಲಿ ಒಂದೊಂದಾಗಿ ಹೇಳಲಾಗಿದೆ.

ಫೆಬ್ರವರಿ 5, 2022ರಂದು ಹೈದರಾಬಾದ್‌ಗೆ ಮೋದಿ ಭೇಟಿ -ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಮೋದಿ ಭೇಟಿ:

ಈ ವರ್ಷದ ಫೆಬ್ರವರಿ 5 ರಂದು ಹೈದರಾಬಾದ್ ಹೊರವಲಯದಲ್ಲಿ ಚಿನ್ನಜೀಯರ್ ಸ್ವಾಮೀಜಿ ನಿರ್ಮಿಸಿದ್ದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಮೋದಿ ಹೈದರಾಬಾದ್‌ಗೆ ಬಂದಿದ್ದರು. ಅಂದು ಕೂಡ ತೆಲಂಗಾಣ ಸಿಎಂ ಕೆಸಿಆರ್, ಏರ್ ಪೋರ್ಟ್ ಗೆ ಬಂದು ಪ್ರಧಾನಿ ಮೋದಿರನ್ನು ಸ್ವಾಗತಿಸಲಿಲ್ಲ. ಮೋದಿ ಜೊತೆಗೆ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿಲ್ಲ. ಮೋದಿ ಭೇಟಿಗಿಂತ ಒಂದೆರೆಡು ದಿನ ಮುಂಚಿತವಾಗಿಯೇ ರಾಮಾನುಜಾಚಾರ್ಯರ ಪ್ರತಿಮೆ ಸ್ಥಳಕ್ಕೆ ಕೆಸಿಆರ್‌ ಭೇಟಿ ನೀಡಿದ್ದರು

ಮೇ, 26, 2022ರಂದು ಹೈದರಾಬಾದ್‌ಗೆ ಮೋದಿ ಭೇಟಿ – ಅಂದೇ, ಬೆಂಗಳೂರಿನಲ್ಲಿ ದೇವೇಗೌಡ ಭೇಟಿಯಾಗಿದ್ದ ಕೆಸಿಆರ್‌!

ಮೇ 26ರಂದು ಪ್ರಧಾನಿ ಮೋದಿ, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ನ ಗ್ರಾಜ್ಯುಯೇಷನ್ ಡೇನಲ್ಲಿ ಭಾಗಿಯಾಗಲು ಭೇಟಿ ನೀಡಿದ್ದರು. ಆಗಲೂ ತೆಲಂಗಾಣ ಸಿಎಂ ಕೆಸಿಆರ್‌ ಪ್ರಧಾನಿ ಮೋದಿ ಸ್ವಾಗತಿಸಲು ಏರ್ ಪೋರ್ಟ್ ಗೆ ಹೋಗಿರಲಿಲ್ಲ. ಬದಲಿಗೆ ಅಂದು ಬೆಳಿಗ್ಗೆಯೇ ಹೈದರಾಬಾದ್‌ನಿಂದ ಸೀದಾ ಬೆಂಗಳೂರಿಗೆ ಬಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದರು. ದೇವೇಗೌಡ, ಕುಮಾರಸ್ವಾಮಿ ಜೊತೆಗೆ ರಾಷ್ಟ್ರ ಮತ್ತು ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿದ್ದರು. ಮೂರು ನಾಲ್ಕು ಗಂಟೆ ಸಮಯವನ್ನು ದೇವೇಗೌಡರ ಮನೆಯಲ್ಲಿ ಕಳೆದು ಭೋಜನ ಸೇವಿಸಿ ಹೈದರಾಬಾದ್‌ಗೆ ವಾಪಸಾಗಿದ್ದರು. ದಸರಾ ನಂತರ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ, ಅದನ್ನ ಯಾರೂ ಕೂಡ ತಡೆಯಲು ಸಾಧ್ಯವಿಲ್ಲ ಎಂದು ಅಂದು ಕೆ.ಚಂದ್ರಶೇಖರ್ ರಾವ್, ತೆಲಂಗಾಣ ಸಿಎಂ, ಬೆಂಗಳೂರಿನಲ್ಲಿ ಹೇಳಿದ್ದರು.

ಇಂದು ಪ್ರಧಾನಿ ಬಿಟ್ಟು ಯಶವಂತ್ ಸಿನ್ಹಾ ಸ್ವಾಗತಿಸಿದ ಕೆಸಿಆರ್‌!

ಇಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ. ಆದರೇ, ಈ ಬಾರಿಯೂ ಹೈದರಾಬಾದ್ ನಲ್ಲೇ ಇದ್ದರೂ, ಪ್ರಧಾನಿ ಸ್ವಾಗತಕ್ಕೆ ಸಿ.ಎಂ.ಕೆಸಿಆರ್ ಬಂದಿಲ್ಲ. ತೆಲಂಗಾಣದ ಪಶುಸಂಗೋಪನಾ ಸಚಿವ ಶ್ರೀನಿವಾಸ್ ಯಾದವ್ ರನ್ನು ಪ್ರಧಾನಿ ಮೋದಿ ಸ್ವಾಗತಕ್ಕೆ ಕಳಿಸಿದ್ದರು. ಪ್ರಧಾನಿ ಆಗಮನಕ್ಕೂ ಕೆಲ ಗಂಟೆಗಳ ಮುನ್ನ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷದ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಹೈದರಾಬಾದ್‌ಗೆ ಆಗಮಿಸಿದ್ದರು. ಯಶವಂತ್ ಸಿನ್ಹಾರನ್ನು ಬೇಗಂಪೇಟ್ ಏರ್ ಪೋರ್ಟ್ ನಲ್ಲಿ ಖುದ್ದಾಗಿ ಸಿಎಂ ಕೆಸಿಆರ್ ಆಗಮಿಸಿ ಸ್ವಾಗತಿಸಿ, ಬರಮಾಡಿಕೊಂಡಿದ್ದಾರೆ. ಬಳಿಕ ಬೇಗಂಪೇಟ್ ಏರ್ ಪೋರ್ಟ್ ನಿಂದ ಐಟಿಸಿ ಕಾಕತೀಯಾ ಹೋಟೇಲ್‌ವರೆಗೂ ಟಿಆರ್‌.ಎಸ್. ಪಕ್ಷದಿಂದ ಬೈಕ್ ಱಲಿ ನಡೆಸಿ ಸ್ವಾಗತಿಸಿದ್ದಾರೆ. ಯಶವಂತ್ ಸಿನ್ಹಾ ರಾಷ್ಟ್ರಪತಿಯಾಗಿ ಆಯ್ಕೆಯಾದರೇ, ದೇಶದ ಘನತೆ, ಗೌರವ, ಮರ್ಯಾದೆ ಹೆಚ್ಚಾಗುತ್ತದೆ ಎಂದು ಸಭೆಯಲ್ಲಿ ಕೆಸಿಆರ್ ಹೇಳಿದ್ದಾರೆ.

ಮೋದಿ-ಕೆಸಿಆರ್ ನಡುವೆ ರಾಜಕೀಯ ವೈರತ್ವ – ಹೀಗಾಗಿ ಮೋದಿ ಸ್ವಾಗತಕ್ಕೆ ಬಾರದ ಸಿಎಂ ಕೆಸಿಆರ್‌

ಆದರೇ, ಬೇರೆ ರಾಜ್ಯಗಳಿಗೆ ಪ್ರಧಾನಿ ಭೇಟಿ ಕೊಟ್ಟಾಗ ಆ ರಾಜ್ಯದ ಸಿಎಂಗಳೇ ಸ್ವಾಗತಿಸುತ್ತಾರೆ. ಈ ಹಿಂದೆ ಮೋದಿ ಕರ್ನಾಟಕಕ್ಕೆ ಬಂದಾಗ, ಸಿಎಂ ಆಗಿದ್ದ ಸಿದ್ದರಾಮಯ್ಯ ಏರ್ ಪೋರ್ಟ್ ಗೆ ಹೋಗಿ ಪ್ರಧಾನಿ ಮೋದಿ ಸ್ವಾಗತಿಸಿದ್ದರು. ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್ ಪ್ರಧಾನಿ ಮೋದಿರನ್ನು ಸ್ವಾಗತಿಸಿದ್ದಾರೆ. ಆದರೆ, ತೆಲಂಗಾಣ ಸಿಎಂ ಮಾತ್ರ ಪಿಎಂ ಬಂದರೂ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಪ್ರಧಾನಿ ಮೋದಿ ಹಾಗೂ ತೆಲಂಗಾಣ ಸಿ.ಎಂ. ಕೆಸಿಆರ್ ನಡುವೆ ರಾಜಕೀಯ ವೈರತ್ವ ಇದೆ. ತೆಲಂಗಾಣದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಕೂಡ ಯತ್ನಿಸುತ್ತಿದೆ. ಟಿಆರ್‌ಎಸ್‌ ಪಕ್ಷಕ್ಕೆ ಪ್ರಬಲ ವಿರೋಧ ಪಕ್ಷವಾಗಲು ಹಾಗೂ ಬಲವಾಗಿ ಬಿಜೆಪಿ ಸಂಘಟಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ. ತಮ್ಮ ಅಧಿಕಾರದ ಗದ್ದುಗೆಗೆ ಕುತ್ತು ತರಲು ಬಿಜೆಪಿ ಯತ್ನಿಸುತ್ತಿರುವುದರಿಂದ ಬಿಜೆಪಿ ನಾಯಕ ಮೋದಿ ಬಗ್ಗೆ ಕೆಸಿಆರ್ ಗೆ ತೀವ್ರ ಅಸಮಾಧಾನ ಇದೆ.

ತೆಲಂಗಾಣದಲ್ಲಿ ಕಾಂಗ್ರೆಸ್, ವೈಎಸ್‌ಆರ್ ಪಕ್ಷಗಳೆಲ್ಲಾ ದುರ್ಬಲವಾಗಿವೆ. ದಿನೇ ದಿನೇ ಬಿಜೆಪಿ ಪ್ರಬಲವಾಗುತ್ತಿದೆ. ಹೀಗಾಗಿ ಮೋದಿ ಕಂಡರೇ ಕೆಸಿಆರ್‌ ಗೆ ಕೋಪ, ಅಸಮಾಧಾನ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ತೃತೀಯ ರಂಗ ಕಟ್ಟುವ ಮಾತುಗಳನ್ನು ಆಗ್ಗಾಗ್ಗೆ ಕೆಸಿಆರ್ ಆಡುತ್ತಿರುತ್ತಾರೆ ಎಂಬ ಮಾತುಗಳಿವೆ.

ಆದರೆ, ಪ್ರಧಾನಿ ಮೋದಿರನ್ನು ಸಿಎಂ ಕೆಸಿಆರ್ ಭೇಟಿಯಾಗಿ ಪ್ರಶ್ನಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿದ್ದಾರೆ. ಮೋದಿಯಿಂದ ತೆಲಂಗಾಣಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಸಿಗಬೇಕಾದ ಪಾಲನ್ನು ನೀಡುವಂತೆ ಸಿಎಂ ಕೆಸಿಆರ್ ಪ್ರಧಾನಿಯನ್ನು ಕೇಳುತ್ತಿಲ್ಲ. ಕೆಸಿಆರ್ ಏಕೆ ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳಲ್ಲ, ಕೊಲೆಗಳಾಗುತ್ತಿವೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

Published On - 6:08 pm, Sat, 2 July 22