ಕನಿಮೊಳಿಗೆ ಟಿಕೆಟ್‌ ವಿವಾದ; ಕೆಲಸ ಕಳೆದುಕೊಂಡ ತಮಿಳುನಾಡಿನ ಬಸ್ ಚಾಲಕಿಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ತಮ್ಮ ವಯಸ್ಸಿನ ಮಹಿಳೆಯರಿಗೆ ಉತ್ತಮ ಮಾದರಿಯಾಗಿರುವ ಶರ್ಮಿಳಾ ಅವರ ಬಗ್ಗೆ ಕೇಳಿದಾಗ ನನಗೆ ತುಂಬಾ ದುಃಖವಾಯಿತು. ಶರ್ಮಿಳಾ ಕೇವಲ ಚಾಲಕಿಯಾಗದೆ ಸಾವಿರಾರು ಶರ್ಮಿಳಾರನ್ನು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕನಿಮೊಳಿಗೆ ಟಿಕೆಟ್‌ ವಿವಾದ; ಕೆಲಸ ಕಳೆದುಕೊಂಡ ತಮಿಳುನಾಡಿನ ಬಸ್ ಚಾಲಕಿಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
ಚೆಕ್ ಹಸ್ತಾಂತರಿಸಿದ ಕಮಲ್ ಹಾಸನ್
ರಶ್ಮಿ ಕಲ್ಲಕಟ್ಟ

Updated on: Jun 26, 2023 | 3:59 PM

ಚೆನ್ನೈ: ಡಿಎಂಕೆ ಸಂಸದೆ ಕನಿಮೊಳಿ (DMK MP Kanimozhi) ಅವರಿಗೆ ಬಸ್ ಟಿಕೆಟ್ ನೀಡುವ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ಇತ್ತೀಚೆಗೆ ಕೆಲಸ ಕಳೆದುಕೊಂಡ ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರಿಗೆ ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಂ (Makkal Needhi Maiam-MNM) ಮುಖ್ಯಸ್ಥ ಕಮಲ್ ಹಾಸನ್ (Kamal Haasan)ಸೋಮವಾರ ಹೊಸ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಹಾಸನ್ ಅವರು ಶರ್ಮಿಳಾ ಅವರನ್ನು ಅವರ ಕುಟುಂಬದೊಂದಿಗೆ ಸೋಮವಾರ ಬೆಳಿಗ್ಗೆ ಅಲ್ವಾರ್‌ಪೇಟ್‌ನಲ್ಲಿರುವ ಅವರ ಚೆನ್ನೈ ಕಚೇರಿಗೆ ಆಹ್ವಾನಿಸಿ, ಹೊಸ ಕಾರು ಖರೀದಿಗೆ ಮತ್ತು ಉದ್ಯಮಿಯಾಗಿ ಅವರ ಪ್ರಯಾಣವನ್ನು ಮುಂದುವರಿಸಲು ಚೆಕ್ ಅನ್ನು ಹಸ್ತಾಂತರಿಸಿದರು.

“ತಮ್ಮ ವಯಸ್ಸಿನ ಮಹಿಳೆಯರಿಗೆ ಉತ್ತಮ ಮಾದರಿಯಾಗಿರುವ ಶರ್ಮಿಳಾ ಅವರ ಬಗ್ಗೆ ಕೇಳಿದಾಗ ನನಗೆ ತುಂಬಾ ದುಃಖವಾಯಿತು. ಶರ್ಮಿಳಾ ಕೇವಲ ಚಾಲಕಿಯಾಗದೆ ಸಾವಿರಾರು ಶರ್ಮಿಳಾರನ್ನು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ. ಕಮಲ್ ಕಲ್ಚರಲ್ ಸೆಂಟರ್ ಶರ್ಮಿಳಾ ಅವರಿಗೆ ಉದ್ಯಮಿಯಾಗಿ ತಮ್ಮ ಪ್ರಯಾಣವನ್ನು ಪುನರಾರಂಭಿಸಲು ಹೊಸ ಕಾರನ್ನು ಉಡುಗೊರೆಯಾಗಿ ನೀಡಿತು ಎಂದು ಕಮಲ್ ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ?

ಜೀವನೋಪಾಯಕ್ಕಾಗಿ ಬಸ್ ಓಡಿಸುತ್ತಿದ್ದ ಶರ್ಮಿಳಾ ಅವರು ಕನಿಮೊಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದ್ದರು. ಇದಕ್ಕಾಗಿ ಮಹಿಳಾ ಬಸ್ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ಕಾರಣದಿಂದಾ ಆಕೆಯನ್ನು ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದರು. ಶರ್ಮಿಳಾ ಅವರನ್ನು ವಜಾಗೊಳಿಸಿರುವ ಕುರಿತು ತಿಳಿದ ಬಳಿಕ ಆಕೆಗೆ ದೂರವಾಣಿ ಕರೆ ಮಾಡಿದ ಕನಿಮೋಳಿ, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ, ವೃತ್ತಿ ಜೀವನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಡಿಎಂಕೆ ಸಂಸದೆಗೆ ಬಸ್​​ನಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟದ್ದಕ್ಕೆ ತಮಿಳುನಾಡಿನ ಮೊದಲ ಬಸ್ ಚಾಲಕಿಯ ಉದ್ಯೋಗಕ್ಕೇ ಕುತ್ತು

ಕನಿಮೊಳಿ ಅವರನ್ನು ಸತ್ಕರಿಸಿ ಬಸ್ಸಿನಲ್ಲಿ ಉಚಿತವಾಗಿ ಕರೆದೊಯ್ದ ಸ್ವಲ್ಪ ಸಮಯದ ನಂತರ ಶರ್ಮಿಳಾಳನ್ನು ಖಾಸಗಿ ಸಾರಿಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.ಕನಿಮೋಳಿ ಅವರನ್ನು ಬಸ್ಸಿನಲ್ಲಿ ಕರೆದೊಯ್ಯುವ ಬಗ್ಗೆ ಚಾಲಕಿ, ನಿರ್ವಾಹಕಿ ಮಧ್ಯೆ ವಾಗ್ವಾದವೂ ನಡೆದಿತ್ತು ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us