
ಹಾಪುರ್, ಜುಲೈ 12: ಆಭರಣ(Jewellery) ಖರೀದಿಗೆಂದು ಜ್ಯುವೆಲ್ಲರಿ ಶಾಪ್ಗೆ ಬಂದಿದ್ದ ಮಹಿಳೆ ಬಾಯಾರಿಕೆ ಎಂದು ಬಾಟಲಿಯನ್ನು ತೆಗೆದು ಬಾಯಿಗಿಟ್ಟರೆ ಅದರಲ್ಲಿ ಇದ್ದಿದ್ದು ನೀರಲ್ಲ, ಅದು ಆ್ಯಸಿಡ್ ಆಗಿತ್ತು. ಈ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಅರ್ಜುನ್ ನಗರ ಪ್ರದೇಶದ ನಿವಾಸಿಯಾದ ಮಹಿಳೆಯೊಬ್ಬರು ಶುಕ್ರವಾರ ಸಂಜೆ ಒಡವೆಗಳನ್ನು ಖರೀದಿಸಲು ಸ್ಥಳೀಯ ಆಭರಣದ ಅಂಗಡಿಯೊಂದಕ್ಕೆ ಹೋಗಿದ್ದರು. ಒಡವೆಗಳನ್ನು ನೋಡುತ್ತಿದ್ದಾಗ ಆಕೆಗೆ ತೀವ್ರ ಬಾಯಾರಿಕೆಯಾಗಿ ಗಂಟಲು ಒಣಗಿದಂತಾಗಿದೆ. ತಕ್ಷಣ ಆಕೆ ಅಂಗಡಿಯವರ ಬಳಿ ಕುಡಿಯಲು ನೀರು ಕೇಳಿದ್ದಾರೆ.
ಗ್ರಾಹಕರಿಗೆ ನೀರು ತರಲು ಆಭರಣ ಅಂಗಡಿಯ ಸಿಬ್ಬಂದಿ ಹತ್ತಿರದಲ್ಲೇ ಇದ್ದ ಸಿಹಿ ತಿನಿಸುಗಳ ಅಂಗಡಿಗೆ ಓಡಿದ್ದಾರೆ. ಅಲ್ಲಿನ ಅಂಗಡಿಯವರು ಫ್ರಿಡ್ಜ್ನಲ್ಲಿದ್ದ ಸಂಪೂರ್ಣ ಸೀಲ್ ಆಗಿದ್ದ ನೀರಿನ ಬಾಟಲಿಯೊಂದನ್ನು ಕೊಟ್ಟಿದ್ದಾರೆ. ನೌಕರ ಅದನ್ನು ತಂದು ಜ್ಯೂವೆಲ್ಲರಿ ಶಾಪ್ನಲ್ಲಿದ್ದ ಮಹಿಳೆಗೆ ಕೊಟ್ಟಿದ್ದಾರೆ.
ಒಂದು ಸಿಪ್ ಕುಡಿಯುತ್ತಿದ್ದಂತೆ ನರಕಯಾತನೆ
ಬಾಟಲಿಯ ಒಳಗೆ ಏನಿದೆ ಎಂಬ ಸಣ್ಣ ಅರಿವೂ ಇಲ್ಲದ ಆ ಮಹಿಳೆ, ಬಾಟಲಿಯ ಸೀಲ್ ಒಡೆದು ತಕ್ಷಣ ಒಂದು ಸಿಪ್ ಕುಡಿದಿದ್ದಾರೆ. ಆ್ಯಸಿಡ್ ಗಂಟಲಿಗೆ ಇಳಿಯುತ್ತಿದ್ದಂತೆ ತೀವ್ರ ಉರಿ ಹಾಗೂ ನೋವಿನಿಂದ ಕಿರುಚಾಡಿದ ಮಹಿಳೆ, ತಕ್ಷಣವೇ ಅಂಗಡಿಯಿಂದ ಹೊರಗೆ ಓಡಿಬಂದು ಅದನ್ನು ಉಗುಳಿದ್ದಾರೆ.
ಆಸಿಡ್ನ ತೀವ್ರತೆಗೆ ಆಕೆಯ ಬಾಯಿ ಮತ್ತು ಗಂಟಲಿನ ಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತಷ್ಟು ಓದಿ: CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಸಿಬ್ಬಂದಿ
ತನಿಖೆ ಚುರುಕು: ಪೊಲೀಸರ ವಶದಲ್ಲಿ ಅಂಗಡಿ ಮಾಲೀಕ
ಘಟನೆಯ ನಂತರ ಕಾರ್ಯಪ್ರವೃತ್ತರಾಗಿರುವ ಹಾಪುರ್ ಪೊಲೀಸರು ಸಿಹಿ ತಿನಿಸುಗಳ ಅಂಗಡಿಯ ಮಾಲೀಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆತನ ಅಂಗಡಿಯಿಂದ ಕೆಲವು ಆ್ಯಸಿಡ್ ಬಾಟಲಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಆಭರಣ ಅಂಗಡಿಯ ಮಾಲೀಕ ಡೇನು, ‘‘ನಮಗೆ ತಿಳಿದ ಮಟ್ಟಿಗೆ ಆ ಬಾಟಲಿ ಸಂಪೂರ್ಣವಾಗಿ ಸೀಲ್ ಆಗಿತ್ತು. ಸ್ವೀಟ್ ಸ್ಟಾಲ್ನವನು ಫ್ರಿಡ್ಜ್ನಿಂದ ಹೇಗೆ ತೆಗೆದುಕೊಟ್ಟನೋ, ನಾವು ಹಾಗೆಯೇ ತಂದು ಗ್ರಾಹಕರಿಗೆ ನೀಡಿದ್ದೆವು” ಎಂದು ಹೇಳಿದ್ದಾನೆ. ಫ್ರಿಡ್ಜ್ನಲ್ಲಿ ನೀರಿನ ಬಾಟಲಿಗಳ ಪಕ್ಕದಲ್ಲೇ ಆಸಿಡ್ ಬಾಟಲಿಯನ್ನು ಇಡಲಾಗಿತ್ತೇ ಅಥವಾ ಕಂಪನಿಯಿಂದಲೇ ಪ್ಯಾಕಿಂಗ್ನಲ್ಲಿ ಅದಲುಬದಲಾಗಿದೆಯೇ ಎಂಬ ಕೋನದಲ್ಲಿ ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿಗಳನ್ನು ನೋಡದೆ ಕಣ್ಣು ಮುಚ್ಚಿ ಇಂತಹ ವಸ್ತುಗಳನ್ನು ಬಳಸುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ