New Parliament: ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಲಿದ್ದಾರೆ ಮಧುರೈ ಅಧೀನಂ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ

|

Updated on: May 25, 2023 | 8:29 PM

ಪ್ರಧಾನಿ ನರೇಂದ್ರ ಮೋದಿ ಅವರು ಮೇ 28ರ ಭಾನುವಾರ ದೇಶದ ಸಂಸತ್​​ನ ಭವನದ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ತಮಿಳುನಾಡಿನ ಮಧುರೈ ಅಧೀನಂ ಮಠದ ಪ್ರಧಾನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮಿಗಳು ಸೆಂಗೋಲ್ (ರಾಜದಂಡ ಅಥವಾ ನ್ಯಾಯದಂಡ) ಅನ್ನು ಪ್ರಧಾನಿಯವರಿಗೆ ಪ್ರದಾನ ಮಾಡಲಿದ್ದಾರೆ.

New Parliament: ಪ್ರಧಾನಿ ಮೋದಿಗೆ ಸೆಂಗೋಲ್ ಹಸ್ತಾಂತರಿಸಲಿದ್ದಾರೆ ಮಧುರೈ ಅಧೀನಂ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ
ಮಧುರೈ ಅಧೀನಂ ಪೀಠಾದಿಪತಿ ಹರಿಹರ ದೇಶಿಕ ಸ್ವಾಮೀಜಿ
Image Credit source: ANI
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 28ರ ಭಾನುವಾರ ದೇಶದ ಸಂಸತ್​​ನ ಭವನದ ನೂತನ ಕಟ್ಟಡವನ್ನು (New Parliament) ಉದ್ಘಾಟಿಸಲಿದ್ದಾರೆ. ಈ ವೇಳೆ ತಮಿಳುನಾಡಿನ ಮಧುರೈ ಅಧೀನಂ ಮಠದ ಪ್ರಧಾನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮಿಗಳು ಸೆಂಗೋಲ್ (ರಾಜದಂಡ ಅಥವಾ ನ್ಯಾಯದಂಡ) ಅನ್ನು ಪ್ರಧಾನಿಯವರಿಗೆ ಪ್ರದಾನ ಮಾಡಲಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಮೌಂಟ್ ಬ್ಯಾಟನ್ ಹಸ್ತಾಂತರಿಸಿದ ಅದೇ ಸೆಂಗೋಲ್ ಅನ್ನು ಅವರು ಮೋದಿಗೆ ನೀಡಲಿದ್ದಾರೆ. ಹರಿಹರ ದೇಶಿಕ ಸ್ವಾಮಿಗಳು ಅಧೀನಂ ಮಠದ 293ನೇ ಪೀಠಾಧಿಪತಿಯಾಗಿದ್ದಾರೆ.

ಹರಿಹರ ದೇಶಿಕ ಸ್ವಾಮಿಗಳು ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ‘ಸೆಂಗೋಲ್’ ಪ್ರದಾನ ಮಾಡುವುದಾಗಿ ಗುರುವಾರ ಹೇಳಿದ್ದಾರೆ. ಸೆಂಗೋಲ್​​ನ ಮಹತ್ವ ಮತ್ತು ಇತಿಹಾಸದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವನ್ನು ಪ್ರತಿನಿಧಿಸಲು ಐತಿಹಾಸಿಕ ರಾಜದಂಡ ‘ಸೆಂಗೋಲ್’ ಅನ್ನು 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಸ್ವೀಕರಿಸಿದ್ದರು.

ಹರಿಹರ ದೇಶಿಕ ಸ್ವಾಮಿಗಳು ಅಧೀನಂ ಮಠದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕಿರಿಯ ಮಠಾಧೀಶರನ್ನಾಗಿ ಅಧೀನಂ ಮಠದ 292 ನೇ ಪ್ರಧಾನ ಅರ್ಚಕರಾದ ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು 2019 ರಲ್ಲಿ ಘೋಷಿಸಿದ್ದರು.

ಇದನ್ನೂ ಓದಿ: Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?

ಅರುಣಗಿರಿನಾಥ ದೇಶಿಕ ಪರಮಾಚಾರ್ಯ ಸ್ವಾಮಿಗಳು 2020 ರ ಆಗಸ್ಟ್ 13 ರಂದು, ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾದರು. ಅವರು ದೀರ್ಘಕಾಲದವರೆಗೆ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಆಗಸ್ಟ್ 9 ರಂದು ಅವರ ಸಾವಿಗೆ 8 ದಿನಗಳ ಮೊದಲು, ನಿತ್ಯಾನಂದ (ಈಗಿನ ಕೈಲಾಸದ ಮುಖ್ಯಸ್ಥ ಎಂದು ಹೇಳಿಕೊಂಡಿರುವ ನಿತ್ಯಾನಂದ ಸ್ವಾಮೀಜಿ) ಅವರು ಮಧುರೈ ಅಧೀನಂನ 293 ನೇ ಮಠಾಧೀಶರಾಗಿ ಅಧಿಕಾರ ವಹಿಸಿಕೊಂಡಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಆದರೆ, ಅವರ ಹಕ್ಕನ್ನು ತಿರಸ್ಕರಿಸಿ ಹರಿಹರ ದೇಶಿಕರನ್ನು ಮಠಾಧೀಶರನ್ನಾಗಿ ನೇಮಕ ಮಾಡಲಾಯಿತು.


ಅಧೀನಂ ಪಂಥದ 20 ಪುರೋಹಿತರು ಸಂಸತ್​ ಭವನದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಸಂಸತ್ತಿನ ಸ್ಪೀಕರ್ ಆಸನದ ಬಳಿ ಸೆಂಗೋಲ್ ಅನ್ನು ಸ್ಥಾಪಿಸಲಾಗುವುದು, ಏಕೆಂದರೆ ಇದು ಸಂಸ್ಕೃತಿ ಸಂಪ್ರದಾಯಗಳನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನೂತನ ಸಂಸತ್ತಿನಲ್ಲಿ ರಾಜದಂಡ ಸ್ಥಾಪನೆಯಿಂದ ಜನರು ಇದರ ಐತಿಹಾಸಿಕ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:58 pm, Thu, 25 May 23