Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆ ನೋಡಲು ತೆರಳಿದ್ದಾಗ ಬಂದೆರಗಿದ ಸಿಡಿಲು; ಸುಮಾರು 20 ಮಂದಿ ಸಾವು, 17 ಜನರಿಗೆ ಗಾಯ

ಅಮೆರ್​ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರಿಗೆ ಏಕಾಏಕಿ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಅನೇಕರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೋಟೆ ನೋಡಲು ತೆರಳಿದ್ದಾಗ ಬಂದೆರಗಿದ ಸಿಡಿಲು; ಸುಮಾರು 20 ಮಂದಿ ಸಾವು, 17 ಜನರಿಗೆ ಗಾಯ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Jul 12, 2021 | 7:12 AM

ಜೈಪುರ: ರಾಜಸ್ಥಾನದಲ್ಲಿ ನಿನ್ನೆ (ಜುಲೈ 11, ಭಾನುವಾರ) ಸಿಡಿಲು ಬಡಿದು (Thunderstorm) ಸುಮಾರು 20 ಜನ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ. ಜೈಪುರ, ಝಲವಾರ್, ಧೋಲ್‌ಪುರ ಜಿಲ್ಲೆಗಳಲ್ಲಿ‌ ದುರ್ಘಟನೆ ಸಂಭವಿಸಿದ್ದು, ಸಿಡಿಲಿಗೆ ಮೂವರು ಮಕ್ಕಳು ಸೇರಿದಂತೆ ಸುಮಾರು 20 ಜನ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಂಡಿಯಾ ಟುಡೇ ವರದಿ ಪ್ರಕಾರ ಮೃತಪಟ್ಟವರಲ್ಲಿ ಏಳು ಜನ ಮಕ್ಕಳಿದ್ದು ನಾಲ್ವರು ಕೋಟಾ ಜಿಲ್ಲೆಯವರು ಹಾಗೂ ಇನ್ನು ಮೂವರು ಧೋಲ್​ಪುರ್ ಜಿಲ್ಲೆಯ ಬಡಿ ಪ್ರದೇಶದವರು ಎಂದು ಹೇಳಲಾಗಿದೆ.

ಸುಮಾರು 20 ಸಾವಿನ ಪೈಕಿ ಹೆಚ್ಚಿನವು ಜೈಪುರದ ಹೊರವಲಯದಲ್ಲಿರುವ ಅಮೆರ್ ಕೋಟೆ (Amer Fort) ವೀಕ್ಷಣೆಗಾಗಿ ಸಂಜೆ ವೇಳೆ ಪ್ರವಾಸಿಗರು ಬಂದಿದ್ದಾಗ ವೇಳೆ ಸಂಭವಿಸಿದೆ ಎನ್ನಲಾಗಿದೆ. ಅಮೆರ್​ ಕೋಟೆಯ ವೀಕ್ಷಣಾಗೋಪುರದ ಬಳಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರಿಗೆ ಏಕಾಏಕಿ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ಅನೇಕರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಒಟ್ಟು 17 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನೆಲ್ಲಾ ರಕ್ಷಣಾ ಪಡೆಯವರು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಜೈಪುರದ ಸವಾಯಿ ಮನ್ ಸಿಂಗ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆ ಬಳಿಕ ಮೃತಪಟ್ಟವರ ಕುಟುಂಬ ಹಾಗೂ ಗಾಯಾಳುಗಳ ನೆರವಿಗೆ ಧಾವಿಸಿರುವ ರಾಜಸ್ಥಾನ ಸರ್ಕಾರ ಎಲ್ಲಾ ರೀತಿಯ ಸಲಹೆ, ಸಹಾಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿ ಅಂತರ್ ಸಿಂಗ್ ಕೂಡಾ ಅಮೆರ್ ಕೋಟೆಗೆ ತೆರಳಿ ಅವಘಡ ಸಂಭವಿಸಿದ ಸ್ಥಳವನ್ನು ಪರಿಶೀಲಿಸಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​, ಮೃತಪಟ್ಟ ದುರ್ದೈವಿಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ನಿನ್ನೆ ಸಂಜೆ ಸಿಡಿಲು ತಗುಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ಇಂದು ತುರ್ತು ಸಭೆಯನ್ನೂ ಕರೆದಿದ್ದು, ಈ ರೀತಿಯ ದುರ್ಘಟನೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಹ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಿಮಾಚಲ ಪ್ರದೇಶದ ಮಹಾದೇವ ದೇವಾಲಯಕ್ಕೆ ಬಂದೆರಗಿದ ಸಿಡಿಲು! ವಿಡಿಯೋ ನೋಡಿ 

ಪಶ್ಚಿಮಬಂಗಾಳದಲ್ಲಿ ಸಿಡಿಲು ದುರಂತಕ್ಕೆ 20 ಮಂದಿ ಸಾವು; ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಪರಿಹಾರ