ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್​ ಬೆದರಿಕೆ

ನೆರೆ ರಾಜ್ಯ ತಮಿಳುನಾಡಿನಲ್ಲಿ ಹುಸಿ ಬಾಂಬ್​ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ನಟ, ಟಿವಿಕೆ ಅಧ್ಯಕ್ಷ ವಿಜಯ್​ ಮನೆ ಬಳಿಕ ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಅವರ ಚೆನ್ನೈ ನಿವಾಸಕ್ಕೆ ಹುಸಿಬಾಂಬ್​ ಬೆದರಿಕೆ ಹಾಕಲಾಗಿದೆ. ವಾರದ ಹಿಂದೆ ಇಂತಹುದೆ ಪ್ರಕರಣ ತಮಿಳುನಾಡಿನ ಮದುರವೋಯಲ್​ನಲ್ಲಿ ವರದಿಯಾಗಿತ್ತು. ಪಾರ್ಕ್​ ಮತ್ತು ದೇಗುಲದಲ್ಲಿ ಬಾಂಬ್​ ಇಟ್ಟಿರೋದಾಗಿ ಬೆದರಿಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದರು.

ಉಪ ರಾಷ್ಟ್ರಪತಿ ರಾಧಾಕೃಷ್ಣನ್​ ಚೆನ್ನೈ ನಿವಾಸಕ್ಕೆ ಹುಸಿ ಬಾಂಬ್​ ಬೆದರಿಕೆ
ಉಪ ರಾಷ್ಟ್ರಪತಿ ರಾಧಾಕೃಷ್ಣನ್​

Updated on: Oct 17, 2025 | 11:09 AM

ಚೆನ್ನೈ, ಅಕ್ಟೋಬರ್​ 17: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈನಲ್ಲಿರುವ (Chennai) ನಿವಾಸಕ್ಕೆ ಬಾಂಬ್​ ಬೆದರಿಕೆ ಹಾಕಲಾಗಿದೆ. ಮನೆಯಲ್ಲಿ ಬಾಂಬ್​ ಇಟ್ಟಿರೋದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ಆಗಮಿಸಿ ಮನೆ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಕಾರಣ, ಇದು ಹುಸಿ ಬಾಂಬ್​ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಇತ್ತೀಚೆಗೆ ಹುಸಿ ಬಾಂಬ್​ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ನಟ, ಟಿವಿಕೆ ಅಧ್ಯಕ್ಷ ವಿಜಯ್​ ಮನೆಯಲ್ಲಿಯೂ ಬಾಂಬ್​ ಇಟ್ಟಿರೋದಾಗಿ ವ್ಯಕ್ತಿಯೋರ್ವ ಪೊಲೀಸ್​ ಕಂಟ್ರೋಲ್​ ರೂಂಗೆ ಕರೆ ಮಾಡಿ ತಿಳಿಸಿದ್ದ. ಮಾಹಿತಿ ಆಧರಿಸಿ ವಿಜಯ್​ ಮನೆಯಲ್ಲಿ ಪರಿಶೀಲಿಸಿದಾಗ ಇದು ಹುಸಿಬಾಂಬ್​ ಕರೆ ಎಂಬುದು ಗೊತ್ತಾಗಿತ್ತು. ಘಟನೆ ಸಂಬಂಧ 38 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣ: ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಬಂಧನ

ವಾರದ ಹಿಂದೆಯೂ ಇಂತಹುದೆ ಪ್ರಕರಣ ತಮಿಳುನಾಡಿನ ಮದುರವೋಯಲ್​ನಲ್ಲಿ ವರದಿಯಾಗಿತ್ತು. ಪೊಲೀಸ್​ ಕಂಟ್ರೋಲ್​ ರೂಂಗೆ ಕರೆಮಾಡಿದ್ದ ಅನಾಮಧೇಯ ವ್ಯಕ್ತಿ, ಪಲ್ಲವನ್​ ನಗರ ಪಾರ್ಕ್​ ಮತ್ತು ಹತ್ತಿರದ ದೇವಸ್ಥಾನದಲ್ಲಿ ಬಾಂಬ್​ ಇಟ್ಟಿರೋದಾಗಿ ಹೇಳಿದ್ದ. ಮಾಹಿತಿ ಆಧರಿಸಿ ಬಾಂಬ್​ ನಿಷ್ಕ್ರಿಯ ದಳ ಮತ್ತು ಒಶ್ವಾನ ದಳದ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಬಾಂಬ್​ ಅಥವಾ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಹುಸಿ ಬಾಂಬ್​ ಕರೆ ಮಾಡಿದ್ದ ವಿಲ್ಲುಪುರಮ್​ ಜಿಲ್ಲೆಯ 43 ವರ್ಷದ ಭೂಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.