BJP ಸರ್ಕಾರ ವಿತರಿಸುವ ಕೊರೊನಾ ಲಸಿಕೆಯನ್ನು ನಾನಂತೂ ಪಡೆಯುವುದಿಲ್ಲ: ಅಖಿಲೇಶ್ ಯಾದವ್

ಕೊರೊನಾ ಲಸಿಕೆ ಇದೀಗ ರಾಜಕೀಯ ಕೆಸರೆರೆಚಾಟಗಳಿಗೆ ಕಾರಣವಾಗುತ್ತಿದೆ. ಬಿಜೆಪಿಯ ಮೇಲೆ ನಂಬಿಕೆಯಿಲ್ಲದ ಕಾರಣ ಕೊರೊನಾ ಲಸಿಕೆಯನ್ನು ಸದ್ಯ ಪಡೆಯುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

BJP ಸರ್ಕಾರ ವಿತರಿಸುವ ಕೊರೊನಾ ಲಸಿಕೆಯನ್ನು ನಾನಂತೂ ಪಡೆಯುವುದಿಲ್ಲ: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Edited By: ಸಾಧು ಶ್ರೀನಾಥ್​

Updated on: Jan 02, 2021 | 4:02 PM

ಲಖನೌ: ನಾನಂತೂ ಈಗ ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನು ನಂಬುವುದಾದರೂ ಹೇಗೆ ಎಂದು ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ವಿತರಣೆ ಯೋಜನೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯ ಮಾಡಿದ್ದಾರೆ.

ನನಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿತರಿಸಲಿರುವ ಕೊರೊನಾ ಲಸಿಕೆಯ ಮೇಲೆ ವಿಶ್ವಾಸವಿಲ್ಲ. ಹೀಗಾಗಿ, ಸರ್ಕಾರ ಲಸಿಕೆ ವಿತರಿಸಿದರೂ ಸಹ ನಾನು ಈಗಲೇ ಕೊರೊನಾ ಲಸಿಕೆ ಪಡೆಯುವುದಿಲ್ಲ ಎಂದಿರುವ ಅವರು, ಒಂದು ವೇಳೆ ನಮ್ಮ ಪಕ್ಷ ಸರ್ಕಾರ ರಚಿಸಿದರೆ ಎಲ್ಲರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

ಬೆಳಗ್ಗೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಕೊರೊನಾ ಲಸಿಕೆಯನ್ನು ದೇಶದ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುವುದೆಂದು ಹೇಳಿಕೆ ನೀಡಿದ್ದರು. ಆದರೆ ತಮ್ಮ ಹೇಳಿಕೆಯನ್ನು ಟ್ವಿಟ್ಟರ್​ನಲ್ಲಿ ಹಂಚಿ ಸ್ಪಷ್ಟನೆ ನೀಡಿದ್ದ ಅವರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು 2 ಕೋಟಿ ಕೊರೊನಾ ವಾರಿಯರ್​ಗಳಿಗೆ ಮಾತ್ರ ಉಚಿತ ಲಸಿಕೆ ನೀಡಲಾಗುವುದು. ಉಚಿತ ಲಸಿಕೆ ಪಡೆಯಲಿರುವ ಉಳಿದ 27 ಕೋಟಿ ಜನರನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ. ಒಮ್ಮೆ ಎಲ್ಲ ದೇಶವಾಸಿಗಳಿಗೂ ಉಚಿತ ಲಸಿಕೆ ಒದಗಿಸುವ ಹೇಳಿಕೆ ನೀಡಿ, ನಂತರ 30 ಕೋಟಿ ಜನರಿಗೆ ಒದಗಿಸುತ್ತೇವೆ ಎಂಬ ಕೇಂದ್ರ ಸಚಿವರ ದ್ವಂದ್ವದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ತಿರುಗೇಟು ನೀಡಿದ್ದಾರೆ.

 

ಇಂದು ನಡೆಯುತ್ತಿರೋದು ತಾಲೀಮು ಪ್ರಕ್ರಿಯೆ.. ಕೊರೊನಾ ಲಸಿಕೆ ವಿತರಣೆ ಅಲ್ಲ.. ಅಲ್ಲ.. ಅಲ್ಲ

Published On - 3:54 pm, Sat, 2 January 21

guruganesh bhat
Follow Us