370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಐಎಎಸ್ ಅಧಿಕಾರಿ, ಜೆಎನ್​​ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕಿ

|

Updated on: Jul 11, 2023 | 2:47 PM

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಶೆಹ್ಲಾ ರಶೀದ್, 2016 ರಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾದ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಾಲಿದ್ ಸೇರಿದಂತೆ ಹಲವಾರು ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.

370ನೇ ವಿಧಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಐಎಎಸ್ ಅಧಿಕಾರಿ, ಜೆಎನ್​​ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕಿ
ಶಾ ಫೈಸಲ್ - ಶೆಹ್ಲಾ ರಶೀದ್
Follow us on

ದೆಹಲಿ: ಐಎಎಸ್ ಅಧಿಕಾರಿ ಶಾ ಫೈಸಲ್ (Shah Faesal) ಮತ್ತು ಜೆಎನ್​​ಯುನ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕಿ ಶೆಹ್ಲಾ ರಶೀದ್ ಶೋರಾ (Shehla Rashid Shora) ಅವರು 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳನ್ನು ಹಿಂಪಡೆದಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಂಗಳವಾರ ಫೈಸಲ್ ಮತ್ತು ಶೋರಾ ಅವರ ಅರ್ಜಿಗಳನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಅರ್ಜಿದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸುವಂತೆ ಸೂಚಿಸಿದೆ.

ಫೈಸಲ್ ಅವರು 2009 ರಲ್ಲಿ ನಾಗರಿಕ ಸೇವೆಗಳ ಪ್ರವೇಶ ಪರೀಕ್ಷೆ UPSC ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಮೊದಲ ಬಾರಿ ಸುದ್ದಿಯಾಗಿದ್ದರು. ಹೀಗೆ ಟಾಪರ್ ಆದ ಮೊದಲ ಕಾಶ್ಮೀರಿ ಇವರಾಗಿದ್ದಾರೆ. ಹಲವಾರು ಸರ್ಕಾರಿ ಹುದ್ದೆಗಳ ನಂತರ ಅವರು 2019 ರಲ್ಲಿ ಕಾಶ್ಮೀರದಲ್ಲಿ ನಿರಂತರ ಹತ್ಯೆಗಳನ್ನು ಖಂಡಿಸಿ ಸೇವೆಗೆ ರಾಜೀನಾಮೆ ನೀಡಿದರು. ಈ ಬಗ್ಗೆ ಫೇಸ್‌ಬುಕ್​​ನಲ್ಲಿ ಪೋಸ್ಟ್ ಮಾಡಿದ ಅವರು, ಕೇಂದ್ರವು ಭಾರತೀಯ ಮುಸ್ಲಿಮರನ್ನು ಅಂಚಿಗೆ ತಳ್ಳುತ್ತಿದೆ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನಂತರ ಅವರು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಶೆಹ್ಲಾ ರಶೀದ್, 2016 ರಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾದ ಕನ್ಹಯ್ಯಾ ಕುಮಾರ್ ಮತ್ತು ಉಮರ್ ಖಾಲಿದ್ ಸೇರಿದಂತೆ ಹಲವಾರು ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಅಂದಹಾಗೆ ಕನ್ಹಯ್ಯಾ ಕುಮಾರ್ ಈಗ ಕಾಂಗ್ರೆಸ್ ನಾಯಕ. ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಖಾಲಿದ್ ಜೈಲಿನಲ್ಲಿದ್ದಾರೆ. ಶೆಹ್ಲಾ ರಶೀದ್ ನಂತರ ಶಾ ಫೈಸಲ್ ಅವರ ಪಕ್ಷಕ್ಕೆ ಸೇರ್ಪಡೆ ಆಗಿದ್ದರು.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಬಂಧಿಸಲ್ಪಟ್ಟ ಕಾಶ್ಮೀರ ನಾಯಕರಲ್ಲಿ ಫೈಸಲ್ ಕೂಡ ಒಬ್ಬರು. ಆಗಸ್ಟ್ 2020 ರಲ್ಲಿ  ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್, ಫೈಸಲ್ ಅವರ ಕೋರಿಕೆಯ ಮೇರೆಗೆ ಪಕ್ಷದ ಸದಸ್ಯರಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಘೋಷಿಸಿತು. ಶೆಹ್ಲಾ ರಶೀದ್ ಕೂಡ ಪಕ್ಷ ತೊರೆದಿದ್ದಾರೆ.

ಇದನ್ನೂ ಓದಿ: Bengal Panchayat Poll Counting: ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಸ್ಫೋಟ

ಕಳೆದ ವರ್ಷ, ಅವರು ಸರ್ಕಾರಿ ಸೇವೆಯಲ್ಲಿ ಮರುಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ರಾಜೀನಾಮೆಯನ್ನು ಹಿಂಪಡೆಯಲು ಮುಂದಾದರು. ಅವರ ಅರ್ಜಿಯನ್ನು ಸ್ವೀಕರಿಸಲಾಯಿತು. ಇತ್ತೀಚಿನ ಟ್ವಿಟರ್ ಪೋಸ್ಟ್‌ನಲ್ಲಿ, ಫೈಸಲ್ ಅವರು ಆರ್ಟಿಕಲ್ 370 ಈಗ ಹಿಂದಿನ ವಿಷಯ ಎಂದು ಹೇಳಿದ್ದಾರೆ.

370, ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಹಳೇ ಸಂಗತಿ. ಜೀಲಂ ಮತ್ತು ಗಂಗಾ ಹಿಂದೂ ಮಹಾಸಾಗರದಲ್ಲಿ ಒಳ್ಳೆಯದಕ್ಕಾಗಿ ವಿಲೀನಗೊಂಡಿದೆ. ಹಿಂದೆ ಸರಿಯುವುದಿಲ್ಲ. ಮುಂದೆ ಸಾಗುವುದು ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ