ಏಟಿಗೆ ಎದುರೇಟು; ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಪೇಪರ್ ನಿಲ್ಲಿಸಿದ ಭಾರತ

ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ ಇಸ್ಲಮಾಬಾದ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೀರು, ಗ್ಯಾಸ್, ನ್ಯೂಸ್ ಪೇಪರ್ ಅನ್ನು ಸ್ಥಗಿತಗೊಳಿಸಿತ್ತು. ಅದಕ್ಕೆ ತಿರುಗೇಟು ನೀಡಿರುವ ಭಾರತ ಕೂಡ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ನ್ಯೂಸ್ ಪೇಪರ್ ಪೂರೈಕೆಯನ್ನು ನಿಲ್ಲಿಸಿದೆ. ಭಾರತದ ಆಪರೇಷನ್ ಸಿಂಧೂರ್ ನಂತರ ಪ್ರತೀಕಾರದ ಕ್ರಮವಾಗಿ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿತ್ತು.

ಏಟಿಗೆ ಎದುರೇಟು; ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಪೇಪರ್ ನಿಲ್ಲಿಸಿದ ಭಾರತ
India Pakistan

Updated on: Aug 12, 2025 | 7:30 PM

ನವದೆಹಲಿ, ಆಗಸ್ಟ್ 12: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಹೊಸ ಬೆಳವಣಿಗೆಯೊಂದು ನಡೆದಿದೆ. ಪಾಕಿಸ್ತಾನದ ಕೀಳು ಮಟ್ಟದ ಪ್ರತೀಕಾರಕ್ಕೆ ತಿರುಗೇಟು ನೀಡಿರುವ ಭಾರತ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಪತ್ರಿಕೆಗಳ ಪೂರೈಕೆಯನ್ನು ನಿಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ, ಭಾರತವೂ ಈ ಕ್ರಮ ತೆಗೆದುಕೊಂಡಿದೆ.

ಉನ್ನತ ಮೂಲಗಳ ಪ್ರಕಾರ, ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತ ಪಾಕಿಸ್ತಾನದಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದ ಸ್ಥಳೀಯ ಅಧಿಕಾರಿಗಳು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ನ್ಯೂಸ್ ಪೇಪರ್ ಪೂರೈಕೆಯನ್ನು ನಿಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಪತ್ರಿಕೆಗಳ ಪೂರೈಕೆಯನ್ನು ನಿಲ್ಲಿಸಲು ಭಾರತ ನಿರ್ಧರಿಸಿದೆ.

ಇದನ್ನೂ ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ

ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ಗೆ ಪೈಪ್ ಮೂಲಕ ಗ್ಯಾಸ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ರಾಜತಾಂತ್ರಿಕರು ಸ್ಥಳೀಯ ಮಾರುಕಟ್ಟೆಗಳಿಂದ ಹೆಚ್ಚಿನ ಬೆಲೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸುವಂತಾಗಿದೆ. ಹಾಗೇ, ಕುಡಿಯುವ ನೀರಿನ ಪೂರೈಕೆಯ ಗಂಭೀರ ಸಮಸ್ಯೆ ಕೂಡ ಎದುರಾಗಿದೆ. ಭಾರತೀಯ ಅಧಿಕಾರಿಗಳ ನಿವಾಸಗಳಿಗೆ ಸ್ಥಳೀಯ ಪತ್ರಿಕೆಗಳ ವಿತರಣೆಯನ್ನು ಸಹ ನಿಲ್ಲಿಸಲಾಗಿದೆ. ಈ ಕ್ರಮಗಳನ್ನು ಭಾರತೀಯ ರಾಜತಾಂತ್ರಿಕರನ್ನು ಕಿರುಕುಳ ನೀಡುವ ಉದ್ದೇಶಪೂರ್ವಕ ಕ್ರಮಗಳೆಂದು ಪರಿಗಣಿಸಲಾಗುತ್ತಿದೆ. ಇದು ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಾನದಂಡಗಳನ್ನು ಉಲ್ಲಂಘಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್‌, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ

ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ನಾಮ ಮಾಡಿದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳವನ್ನು ತೀವ್ರಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭಾರತೀಯ ರಾಜತಾಂತ್ರಿಕರು ಗ್ಯಾಸ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಪಾಕಿಸ್ತಾನದ ಅಧಿಕಾರಿಗಳು ಸ್ಥಳೀಯ ಮಾರಾಟಗಾರರಿಗೆ ಭಾರತೀಯ ಅಧಿಕಾರಿಗಳೊಂದಿಗೆ ಸಹಕರಿಸಬಾರದು, ಅವರಿಗೆ ವಸ್ತುಗಳನ್ನು ಪೂರೈಸಬಾರದು ಎಂದು ನಿರ್ದೇಶಿಸಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳು ಸ್ಥಳೀಯ ಅನಿಲ ಸಿಲಿಂಡರ್ ಮಾರಾಟಗಾರರಿಗೆ ಭಾರತೀಯ ಸಿಬ್ಬಂದಿಗೆ ಸರಬರಾಜು ಮಾಡದಂತೆ ತಿಳಿಸಿದ್ದಾರೆ. ಪಾಕಿಸ್ತಾನದ ಈ ನಡವಳಿಕೆಯು ರಾಜತಾಂತ್ರಿಕ ಸಂಬಂಧಗಳ ಕುರಿತಾದ ವಿಯೆನ್ನಾ ಸಮಾವೇಶದ ಗಂಭೀರ ಉಲ್ಲಂಘನೆಯಾಗಬಹುದು ಎಂದು ರಾಜತಾಂತ್ರಿಕ ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us