AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಸ್‌ಟೇಬಲ್ ಹಣೆಬರಹ ಬದಲಾಯಿಸಿಬಿಟ್ಟ 6 ರೂಪಾಯಿ ಲಾಟರಿ ಟಿಕೆಟ್!

Nagaland Jackpot Lottery: ತಮ್ಮ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಕಾನ್ಸ್ ಟೇಬಲ್ ಕುಲದೀಪ್, ಲಾಟರಿ ಖರೀದಿಸುವುದನ್ನು ಮುಂದುವರಿಸುತ್ತೇನೆ ಮತ್ತು ಗೆದ್ದ ಮೊತ್ತವನ್ನು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತೇನೆ ಎಂದು ಹೇಳಿದ್ದಾರೆ.

ಕಾನ್ಸ್‌ಟೇಬಲ್ ಹಣೆಬರಹ ಬದಲಾಯಿಸಿಬಿಟ್ಟ 6 ರೂಪಾಯಿ ಲಾಟರಿ ಟಿಕೆಟ್!
ಕಾನ್ಸ್‌ಟೇಬಲ್ ಹಣೆಬರಹ ಬದಲಾಯಿಸಿಬಿಟ್ಟ 6 ರೂಪಾಯಿ ಲಾಟರಿ ಟಿಕೆಟ್!
TV9 Web
| Updated By: ಸಾಧು ಶ್ರೀನಾಥ್​|

Updated on: Aug 05, 2022 | 5:37 PM

Share

ಕುಲದೀಪ್ ಸಿಂಗ್ ಕಾನ್ಸ್ ಟೇಬಲ್ ಆಗಿದ್ದರಿಂದ ಕೆಲಸದ ನಿಮಿತ್ತ ಲೂಧಿಯಾನಕ್ಕೆ ಹೋದಾಗಲೆಲ್ಲ ಅಲ್ಲಿನ ರೈಲ್ವೇ ನಿಲ್ದಾಣದ ಬಳಿ ಇರುವ ಲಾಟರಿ ಏಜೆಂಟ್ ನಿಂದ ನಾಗಾಲ್ಯಾಂಡ್ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಈಗಿನ ಪ್ರಕರಣದಲ್ಲಿ ಕಾನ್ಸ್ ಟೇಬಲ್ ಅವರ ತಾಯಿ ಆತನಿಗೆ ಲಾಟರಿ ಟಿಕೆಟ್ ಖರೀದಿಸಲು ಆಜ್ಞಾಪಿಸಿದ್ದರು.

ಆತನೊಬ್ಬ ಸಾಮಾನ್ಯ ಕಾನ್ಸ್ ಟೇಬಲ್..

ಆವರೊಬ್ಬ ಸಾಮಾನ್ಯ ಕಾನ್ಸ್ ಟೇಬಲ್.. ಪಂಜಾಬ್‌ನ ಫಿರೋಜ್‌ಪುರದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹುಟ್ಟೂರು ರಾಜಸ್ಥಾನದ ಶ್ರೀಗಂಗಾನಗರ. ಆರು ತಿಂಗಳ ಹಿಂದೆ ಅಮ್ಮನ ಮಾತು ಕೇಳಿದ್ದಕ್ಕೆ ಆತನಿಗೆ ಅದೃಷ್ಟ ಒಲಿದು ಬಂದಿತ್ತು. ನೋಡನೋಡುತ್ತಿದ್ದಂತೆ ಸಾಮಾನ್ಯ ಕಾನ್ಸ್ ಟೇಬಲ್ ಅಸಮಾನ್ಯ ಮಿಲಿಯನೇರ್ ಆಗಿ ಬದಲಾಗಿದ್ದರು. ಅದೂ ಕೇವಲ ಆರು ರೂಪಾಯಿಗೆ ಅದೃಷ್ಟ ಒಲಿದುಬಂದಿತ್ತು.. ನಂಬಲಾಗುತ್ತಿಲ್ಲವಾದರೂ.. ಇದು ಸತ್ಯ. ಕುಲದೀಪ್ ಸಿಂಗ್ ಕಾನ್ಸ್ ಟೇಬಲ್ ಆಗಿದ್ದರಿಂದ ಕೆಲಸದ ನಿಮಿತ್ತ ಲೂಧಿಯಾನಕ್ಕೆ ಹೋದಾಗಲೆಲ್ಲ ಅಲ್ಲಿನ ರೈಲ್ವೇ ನಿಲ್ದಾಣದ ಬಳಿ ಇರುವ ಏಜೆಂಟ್ ನಿಂದ ನಾಗಾಲ್ಯಾಂಡ್ ಲಾಟರಿ ಕಾರ್ಪೊರೇಷನ್ ಗೆ ಸೇರಿದ ಲಾಟರಿ ಟಿಕೆಟ್ ಖರೀದಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದರು.

ಆರು ತಿಂಗಳ ಹಿಂದೆ, ಕಾನ್ಸ್ ಟೇಬಲ್ ಕುಲದೀಪ್ ಸಿಂಗ್ ಅವರ ತಾಯಿ ಅತನಿಗೆ ಆಗಾಗ ಲಾಟರಿ ಟಿಕೆಟ್ ಖರೀದಿಸಲು ಹೇಳಿದರು. ಮತ್ತು ಅಂದಿನಿಂದ ಕುಲದೀಪ್ ಸಿಂಗ್ ತನ್ನ ಅದೃಷ್ಟವನ್ನು ಪರೀಕ್ಷಿಸಲು ಪ್ರಾರಂಭಿಸಿದನು. ಲುಧಿಯಾನಕ್ಕೆ ಹೋದಾಗಲೆಲ್ಲ ತನಗೆ ಜಾಕ್‌ಪಾಟ್‌ ಬೀಳುತ್ತದೆ ಎಂದು ಕನಸುಕಾಣುತ್ತಾ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಈ ಹಿಂದೆ ಒಮ್ಮೆ ಇದೇ ಲಾಟರಿಯಲ್ಲಿ 6 ಸಾವಿರ ರೂ. ಬಹುಮಾನ ಅವರಿಗೆ ಒಲಿದಿತ್ತು. ಮುಂದೆ… ದೊಡ್ಡ ಮೊತ್ತದ ಹಣವನ್ನು ಗೆಲ್ಲುವ ಭರವಸೆಯೊಂದಿಗೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಲೇ ಬಂದಿದ್ದರು.

ಲಾಟರಿ ಟಿಕೆಟ್ ಬೆಲೆ ಅಗ್ಗವಾಗಿದ್ದ ಕಾರಣ ಕಳೆದ ಮಂಗಳವಾರ ಲೂಧಿಯಾನಕ್ಕೆ ಹೋದಾಗ ಕಾನ್ಸ್ ಟೇಬಲ್ ಕುಲದೀಪ್ ಸಿಂಗ್ 6 ರೂಪಾಯಿ ದರದಲ್ಲಿ, 150 ರೂಪಾಯಿ ಕೊಟ್ಟು ಒಟ್ಟು 25 ಟಿಕೆಟ್ ಖರೀದಿಸಿದ್ದರು. ಅದೇ ದಿನ ಸಂಜೆ ಗಾಂಧಿ ಟ್ರೇಡರ್ಸ್‌ನಿಂದ ಬಂದ ಫೋನ್‌ ಕರೆಯನ್ನು ಕೈಗೆತ್ತಿಕೊಂಡಾಗ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿರುವ ಸುದ್ದಿ ಕೇಳುವ ಸರದಿ ಅವರದ್ದಾಗಿತ್ತು.

ಮುಂದೆಯೂ ಲಾಟರಿ ಟಿಕೆಟ್ ಖರೀದಿಸುವೆ, ಆದರೆ ಗೆದ್ದ ಹಣವನ್ನು…

ಲಾಟರಿಯಲ್ಲಿ ಕೋಟ್ಯಾಂತರ ರೂಪಾಯಿ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಾನ್ಸ್ ಟೇಬಲ್ ಕುಲದೀಪ್ ಸಿಂಗ್, ತಾನು ಗೆದ್ದ ಲಾಟರಿ ಹಣವನ್ನು ಎಂಟು ವರ್ಷದ ಮಗನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಗುರುದ್ವಾರಗಳಿಗೆ ಒಂದಿಷ್ಟು ದೇಣಿಗೆ ನೀಡುವುದಾಗಿ ಹೇಳಿದ್ದಾರೆ. ಕೋಟ್ಯಂತರ ರೂಪಾಯಿ ಗೆದ್ದರೂ ಸರಳ ಜೀವನ ನಡೆಸುತ್ತೇನೆ ಎಂದ ಅವರು, ಅವರ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಲಾಟರಿ ಖರೀದಿಸುವುದನ್ನು ಮುಂದುವರಿಸುತ್ತೇನೆ ಮತ್ತು ಗೆದ್ದ ಮೊತ್ತವನ್ನು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಬಡ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತೇನೆ ಎಂದು ಕಾನ್ಸ್ ಟೇಬಲ್ ಕುಲದೀಪ್ ಹೇಳಿದರು.

ನಾಗಾಲ್ಯಾಂಡ್ ಮೂಲದ ಲಾಟರಿ ಕಂಪನಿ ಪ್ರತಿ ಟಿಕೆಟ್ ಅನ್ನು 6 ರೂಪಾಯಿಗೆ ಮಾರಾಟ ಮಾಡುತ್ತದೆ. ಪ್ರತಿ ದಿನ ಮಧ್ಯಾಹ್ನ 1, ಸಂಜೆ 6 ಮತ್ತು ರಾತ್ರಿ 8 ಗಂಟೆಗೆ ಮೂರು ಬಾರಿ ಫಲಿತಾಂಶ ಪ್ರಕಟಿಸುತ್ತದೆ. ಡ್ರಾ ಸಮಯದಲ್ಲಿ ಮೂವರು ವಿಜೇತರನ್ನು ಘೋಷಿಸುತ್ತದೆ. ಮೊದಲ ಬಹುಮಾನ ಒಂದು ಕೋಟಿ ರೂಪಾಯಿಯಾದರೆ, ಎರಡನೇ ಬಹುಮಾನ ಕೇವಲ 9 ಸಾವಿರ ಮತ್ತು ಮೂರನೇ ಬಹುಮಾನ ಕೇವಲ 475 ರೂಪಾಯಿಯಷ್ಟಿದೆ. ಟಿಕೆಟ್ ದರ ಕಡಿಮೆ ಇರುವುದರಿಂದ ಹೆಚ್ಚಿನ ಜನರು ಇ-ಟಿಕೆಟ್ ಖರೀದಿಸುತ್ತಾರೆ. ಆದರೆ ಲಾಟರಿ ಎಂದರೇನೆ ಅದೃಷ್ಟದ ಆಟ ಅಲ್ಲವಾ!?