ಜಾರ್ಖಂಡ್ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿ ಚಂಪೈ ಸೊರೆನ್ ಪತ್ರ

ಜಾರ್ಖಂಡ್​​ನ ನೂತನ ಮುಖ್ಯಮಂತ್ರಿ ಆದಿ ಜೆಎಂಎಂ ಪಕ್ಷ ಘೋಷಣೆ ಮಾಡಿರುವ ಚಂಪೈ ಸೊರೆನ್ ರಾಜ್ಯಪಾಲರ ಭೇಟಿ ಕೋರಿ ಪತ್ರ ಬರೆದಿದ್ದಾರೆ. ಏತನ್ಮಧ್ಯೆ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ನಿಗಾ ಇಲಾಖೆಯು ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೆನ್ ರಾಜೀನಾಮೆ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಜನವರಿ 31ರ ರಾತ್ರಿಯಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆ ಪತ್ರವನ್ನು ಇಲಾಖೆ ಅಂಗೀಕರಿಸಿದೆ

ಜಾರ್ಖಂಡ್ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿ ಚಂಪೈ ಸೊರೆನ್ ಪತ್ರ
ಚಂಪೈ ಸೊರೆನ್

Updated on: Feb 01, 2024 | 4:03 PM

ರಾಂಚಿ ಫೆಬ್ರವರಿ 01: ಜಾರ್ಖಂಡ್​​ನಲ್ಲಿ (Jharkhand) ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆಯೇ ಚಂಪೈ ಸೊರೆನ್ (Champai Soren) ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರನ್ನು (Governor) ಭೇಟಿ ಮಾಡಲು ಮಧ್ಯಾಹ್ನ 3 ಗಂಟೆಗೆ ಅವಕಾಶ ನೀಡಬೇಕೆಂದು  ಅವರು ಪತ್ರದಲ್ಲಿ ಕೇಳಿದ್ದಾರೆ. ನಿನ್ನೆ ಕೂಡ ಮಾಜಿ ಸಚಿವರು 45 ಶಾಸಕರೊಂದಿಗೆ ರಾಜಭವನಕ್ಕೆ ಆಗಮಿಸಿದ್ದರು. ಆದರೆ ಇದುವರೆಗೂ ರಾಜಭವನದಿಂದ ಪ್ರಮಾಣ ವಚನ ಸ್ವೀಕಾರಕ್ಕೆ ಕರೆ ಬಂದಿಲ್ಲ.

ಏತನ್ಮಧ್ಯೆ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ನಿಗಾ ಇಲಾಖೆಯು ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೆನ್ ರಾಜೀನಾಮೆ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಜನವರಿ 31ರ ರಾತ್ರಿಯಿಂದ ಜಾರಿಗೆ ಬರುವಂತೆ ಅವರ ರಾಜೀನಾಮೆ ಪತ್ರವನ್ನು ಇಲಾಖೆ ಅಂಗೀಕರಿಸಿದೆ. ರಾತ್ರಿ 8.45ರಿಂದ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಇಡಿ ಅಧಿಕಾರಿಗಳು ಮಾಜಿ ಸಿಎಂ ಹೇಮಂತ್ ಸೊರೇನ್ ಅವರೊಂದಿಗೆ ಭೂ ಹಗರಣ ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಭಾರೀ ಭದ್ರತೆಯ ನಡುವೆ ಇಡಿ ತಂಡ ಹೇಮಂತ್ ಸೊರೆನ್ ಅವರೊಂದಿಗೆ ಪಿಎಂಎಲ್‌ಎ ನ್ಯಾಯಾಲಯವನ್ನು ತಲುಪಿದೆ. ಹೇಮಂತ್ ಸೊರೆನ್ ನ್ಯಾಯಾಲಯದ ಮುಂದೆ ತಲೆಬಾಗಿ ನಮಸ್ಕರಿಸಿದರು. ಹಸ್ತಲಾಘವದ ಮೂಲಕ ಜನರ ಶುಭಾಶಯಗಳನ್ನು ಸ್ವೀಕರಿಸಿದರು. ನ್ಯಾಯಾಲಯದಲ್ಲಿ ಹೇಮಂತ್ ಸೊರೇನ್ ಜಿಂದಾಬಾದ್ ಎಂಬ ಘೋಷಣೆಗಳು ಮೊಳಗಿದವು.

ಇದನ್ನೂ ಓದಿ: 23 ವರ್ಷಗಳಲ್ಲಿ 12 ಮುಖ್ಯಮಂತ್ರಿಗಳನ್ನು ಕಂಡ ಹೊಸ ರಾಜ್ಯ ಜಾರ್ಖಂಡ್​

ಮೂಲಗಳ ಪ್ರಕಾರ ಇಡಿ ಹೇಮಂತ್ ಸೊರೆನ್‌ಗೆ 7 ದಿನಗಳ ರಿಮಾಂಡ್ ಕೇಳಬಹುದು. ಅದೇ ಸಮಯದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ, ರಾಜ್ಯದ 150 ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಗಲಾಟೆ ಭೀತಿಯ ಹಿನ್ನೆಲೆಯಲ್ಲಿ ಪಡೆ ನಿಯೋಜಿಸಲಾಗಿದೆ. ಇತ್ತ, ಜಾರ್ಖಂಡ್‌ನಲ್ಲಿ ರಾಜಕೀಯ ಗೊಂದಲ ಹೆಚ್ಚಿದೆ. ರಾಂಚಿ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿರುವ ಜೆಎಂಎಂ ಶಾಸಕರನ್ನು ಕರೆದುಕೊಂಡು ಹೋಗಲು ಬಸ್‌ ಬಂದಿದ್ದು ,ಅವರನ್ನು ಹೈದರಾಬಾದ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ