ಕೇರಳದಲ್ಲಿ ಸಿಎಎ ಅನುಷ್ಠಾನ ಮಾಡಲ್ಲ: ಸಿಎಂ ಪಿಣರಾಯಿ ವಿಜಯನ್

|

Updated on: Mar 14, 2024 | 8:51 PM

ಸಿಎಎ ಬಗ್ಗೆ ಕೇರಳ ತಲೆಬಾಗುವುದಿಲ್ಲ ಅಥವಾ ಮೌನ ವಹಿಸುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.ಮಾರ್ಚ್ 11 ರಂದು ಕೇಂದ್ರ ಸರ್ಕಾರ ಸಿಎಎಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ವಿಜಯನ್ ಅದನ್ನು ಖಂಡಿಸಿ ಹೇಳಿಕೆ ನೀಡಿದ್ದರು . "ಕೇರಳವು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ವಿಧಾನಸಭೆಯಾಗಿದೆ.

ಕೇರಳದಲ್ಲಿ ಸಿಎಎ ಅನುಷ್ಠಾನ ಮಾಡಲ್ಲ: ಸಿಎಂ ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
Follow us on

ತಿರುವನಂತಪುರಂ ಮಾರ್ಚ್ 14: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) 2019 ಅನ್ನು ಕೇರಳ (Kerala) ಜಾರಿಗೆ ತರುವುದಿಲ್ಲ ಎಂದು ಪುನರುಚ್ಚರಿಸಿದ್ದು, ಈ ವಿಷಯದ ಬಗ್ಗೆ ಕಾಂಗ್ರೆಸ್ ಮೌನವಹಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಸಿಪಿಎಂ ಇಂಡಿಯಾ ಮೈತ್ರಿಕೂಟದಲ್ಲಿ ಮಿತ್ರ ಪಕ್ಷವಾಗಿದೆ. ಆದರೆ ಈ ವಿಷಯದ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇನ್ನೂ ಮಾತನಾಡದ ಕಾರಣ ಸಿಎಎ ಅಧಿಸೂಚನೆಯ ನಂತರ ಕಾಂಗ್ರೆಸ್ ತೆಗೆದುಕೊಂಡ ನಿಲುವನ್ನು ವಿಜಯನ್ ಟೀಕಿಸಿದ್ದಾರೆ. ಸಿಎಎ ಬಗ್ಗೆ ಕೇರಳ ತಲೆಬಾಗುವುದಿಲ್ಲ ಅಥವಾ ಮೌನ ವಹಿಸುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.

ಪೌರತ್ವ ಕೇಂದ್ರ ವಿಷಯವಾಗಿರುವುದರಿಂದ ಸಿಎಎ ಅನುಷ್ಠಾನದಲ್ಲಿ ರಾಜ್ಯಗಳಿಗೆ ಯಾವುದೇ ಆಯ್ಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ ನಂತರ ಪಿಣರಾಯಿ ವಿಜಯನ್ ಅವರ ಈ ಹೇಳಿಕೆ ಬಂದಿದೆ. ಸಿಎಎ ಭಾರತದಲ್ಲಿ ಎಲ್ಲೆಡೆ ಅನ್ವಯಿಸುತ್ತದೆ. ವಿಜಯನ್ ಅವರು ಭಾರತದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಾಗ್ದಾಳಿ ನಡೆಸಿದೆ.

ಸಿಎಎ ಭಾರತದ ಕಲ್ಪನೆಗೆ ಸವಾಲನ್ನು ಒಡ್ಡುತ್ತದೆ ಮತ್ತು ಧಾರ್ಮಿಕ ತಾರತಮ್ಯಕ್ಕೆ ಮಾನ್ಯತೆಯನ್ನು ನೀಡುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿಎಎ ವಿರುದ್ಧ ದನಿಯೆತ್ತಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಅವರು ಸಿಎಎ ಅನ್ನು ಮೋದಿ ಸರ್ಕಾರ ತಂದಿದೆ. ಅದನ್ನು ರದ್ದು ಮಾಡುವುದು ಅಸಾಧ್ಯ. ಅದನ್ನು ನಿರಾಕರಿಸುವ ಹಕ್ಕು ರಾಜ್ಯಗಳಿಗೆ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಸಂವಿಧಾನದಲ್ಲಿ, ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಹಕ್ಕನ್ನು ಸಂಸತ್ತಿಗೆ ಮಾತ್ರ ನೀಡಲಾಗಿದೆ. ಕಾನೂನು ಮತ್ತು ಅದರ ಅನುಷ್ಠಾನ ಎರಡೂ ಕೇಂದ್ರದ ವಿಷಯ, ರಾಜ್ಯಗಳದ್ದು ಅಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ, 2019, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದಿಂದ ಓಡಿಹೋಗಿ ಡಿಸೆಂಬರ್ 31, 2014 ರ ಮೊದಲು ಭಾರತದಲ್ಲಿ ಆಶ್ರಯ ಪಡೆದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ನೀಡಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ:ಪಾರ್ಸಿಗಳು, ಕ್ರೈಸ್ತರು ಸಿಎಎಗೆ ಅರ್ಹರು ಆದರೆ ಮುಸ್ಲಿಮರು ಅಲ್ಲ; ಅಮಿತ್ ಶಾ ನೀಡಿದ ಉತ್ತರ ಹೀಗಿದೆ

ಮಾರ್ಚ್ 11 ರಂದು ಕೇಂದ್ರ ಸರ್ಕಾರ ಸಿಎಎಗೆ ಅಧಿಸೂಚನೆ ಹೊರಡಿಸುತ್ತಿದ್ದಂತೆ ವಿಜಯನ್ ಅದನ್ನು ಖಂಡಿಸಿ ಹೇಳಿಕೆ ನೀಡಿದ್ದರು . “ಕೇರಳವು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ವಿಧಾನಸಭೆಯಾಗಿದೆ. ಕೇರಳ ಸರ್ಕಾರವು ರಾಜ್ಯದಲ್ಲಿ ಎನ್‌ಪಿಆರ್ ಅನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿತ್ತು. ಅಸಂವಿಧಾನಿಕ ಕ್ರಮದ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಯಿತು.ಎಲ್‌ಡಿಎಫ್ ಸರ್ಕಾರವು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸುವ CAA ಅನ್ನು ಕೇರಳದಲ್ಲಿ ಜಾರಿಗೆ ತರುವುದಿಲ್ಲ ಎಂದು ಹಲವಾರು ಬಾರಿ ಪುನರುಚ್ಚರಿಸಿದೆ. ನಾವು ಆ ನಿಲುವಿನಲ್ಲಿ ಬದ್ಧರಾಗಿದ್ದೇವೆ. ಈ ಕೋಮುವಾದ ಮತ್ತು ವಿಭಜಕ ಕಾನೂನನ್ನು ವಿರೋಧಿಸಲು ಕೇರಳವು ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ