ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

ರಾಜ್ಯಸಭೆಯಲ್ಲಿ ನಿವೃತ್ತ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ರಾಜಕೀಯ ಮೈತ್ರಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಸ್ಯಭರಿತವಾಗಿ ಮಾತನಾಡಿದ್ದು ಗಮನ ಸೆಳೆಯಿತು. ‘ದೇವೇಗೌಡರು ನಮ್ಮನ್ನು ಪ್ರೀತಿಸಿದರು, ಆದರೆ ಮೋದಿ ಜತೆ ವಿವಾಹವಾದರು’ ಎಂಬ ಖರ್ಗೆಯವರ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲಿತು. ಖರ್ಗೆ ಹೇಳಿಕೆ, ಅದಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಡಿಯೋ ಹಾಗೂ ಮಾಹಿತಿ ಇಲ್ಲಿದೆ.

ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ
ರಾಜ್ಯಸಭೆಯಲ್ಲಿ ದೇವೇಗೌಡರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತು
Image Credit source: tv9

Updated on: Mar 18, 2026 | 2:29 PM

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ (Rajya Sabha) ಬುಧವಾರ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ಹಾಸ್ಯಮಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ (HD Deve Gowda) ಶುಭ ಹಾರೈಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ಅವರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ, ವ್ಯಂಗ್ಯಭರಿತ ಮಾತನ್ನಾಡಿದ್ದು, ಸದನವನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು ಪ್ರಧಾನಿಯಾಗಿದ್ದರು ಮತ್ತು ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

‘ನಾನು ಅವರನ್ನು (ದೇವೇಗೌಡ) 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು’ ಎಂದು ಮಲ್ಲಿಕಾರ್ಜು ಖರ್ಗೆ ಹೇಳಿದರು. ಆಗ ಸದನದಾದ್ಯಂತ ನಗು ಮೂಡಿತು. ರಾಜ್ಯಸಭೆಯಲ್ಲಿ ಹಾಜರಿದ್ದ ಪ್ರಧಾನಿ ಮೋದಿಯೂ ನಗುತ್ತಿರುವುದು ಕಂಡುಬಂದಿತು.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಮತ್ತು ಮೋದಿ ನಗುತ್ತಿರುವ ವಿಡಿಯೋ


ರಾಜಕೀಯದಲ್ಲಿರುವವರು, ಸಾರ್ವಜನಿಕ ಜೀವನದಲ್ಲಿ ಇರುವವರು ದೇಶ ಸೇವೆ ಮಾಡುವ ಉತ್ಸಾಹದಿಂದ ಸುಸ್ತಾಗುವುದಿಲ್ಲ ಅಥವಾ ನಿವೃತ್ತರಾಗುವುದಿಲ್ಲ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಹೇಳಿದ್ದೇನು?

ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸಂಸದರಿಗೆ ಅವರು ನೀಡಿದ ಕೊಡುಗೆಗೆಳಿಗಾಗಿ ಧನ್ಯವಾದ ಅರ್ಪಿಸಿದರು. ಅವರ ಭವಿಷ್ಯದ ರಾಜಕೀಯ ಪ್ರಯತ್ನಗಳಿಗೆ ಶುಭ ಹಾರೈಸಿದರು. ಮೋದಿ ಸಹ ‘ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ’ ಎಂದು ಒತ್ತಿ ಹೇಳಿದರು.

ಸದನದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತವೆ ಮತ್ತು ಪ್ರತಿಯೊಬ್ಬ ಸದಸ್ಯರು ಅವುಗಳಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಪಕ್ಷದ ಗಡಿಯನ್ನು ಮೀರಿ ಗೌರವದ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರುತ್ತದೆ. ಅಧಿಕಾರಾವಧಿಯ ನಂತರ ಸದನವನ್ನು ತೊರೆಯುತ್ತಿರುವ ನಾಯಕರಿಗೆ, ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಭವಿಷ್ಯವು ನಿಮಗಾಗಿ ಕಾಯುತ್ತಿದೆ. ನಿಮ್ಮ ಅನುಭವ ಮತ್ತು ಕೊಡುಗೆಯನ್ನು ಯಾವಾಗಲೂ ಸ್ಮರಣೀಯವಾಗಿಡಲಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: “ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ”: ನಿವೃತ್ತಿ ಹೊಂದುತ್ತಿರುವ ಸಂಸದರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಹೊಸದಾಗಿ ಆಯ್ಕೆಯಾದ ಸಂಸದರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸದಲ್ಲಿ ಕಳೆದಿರುವ ಹೆಚ್‌ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್ ಅವರಂತಹ ಅನುಭವಿಗಳಿಂದ ಕಲಿಯಬೇಕೆಂದು ಮೋದಿ ಸಲಹೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us