‘ಸರ್ ದಯವಿಟ್ಟು ಮಧ್ಯಪ್ರವೇಶ ಮಾಡಿ’: ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಕಿರಣ್ ಬೇಡಿ

ದೆಹಲಿಯಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಹೆಚ್ಚಾಗಿರುವುದರಿಂದ, ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ನೆರೆಯ ರಾಜ್ಯಗಳ ಸಹಕಾರದೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಬೇಡಿ ಮನವಿ ಮಾಡಿದ್ದಾರೆ. ಇದು ದೆಹಲಿಯ ವಾಯು ಗುಣಮಟ್ಟ ಸುಧಾರಿಸಲು ನಿರ್ಣಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ ದಯವಿಟ್ಟು ಮಧ್ಯಪ್ರವೇಶ ಮಾಡಿ:  ದೆಹಲಿ ವಾಯು ಮಾಲಿನ್ಯದ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದ ಕಿರಣ್ ಬೇಡಿ
ಪ್ರಧಾನಿ ಮೋದಿ ಮತ್ತು ಕಿರಣ್ ಬೇಡಿ

Updated on: Nov 29, 2025 | 12:52 PM

ದೆಹಲಿ, ನ.29: ದೆಹಲಿಯಲ್ಲಿ ವಾಯು ಮಾಲಿನ್ಯ (Delhi air pollution) ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಈ ಬಗ್ಗೆ ಮಾಜಿ ಐಪಿಎಸ್​​​ ಅಧಿಕಾರಿ ಕಿರಣ್ ಬೇಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 369 ರಷ್ಟು ದಾಖಲಾಗಿದೆ. ಗಾಳಿ ಮಟ್ಟವು ತುಂಬಾ ಕಳಪೆಯಾಗಿದೆ. ಈ ಕಾರಣದಿಂದ ಇದರ ಪರಿಹಾರಕ್ಕೆ ಕೇಂದ್ರವೇ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಕಿರಣ್ ಬೇಡಿ ಅವರು ತಮ್ಮ ಎಕ್ಸ್​​​​ ಖಾತೆಯಲ್ಲಿ ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರು ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ ಈ ವಿಷಯ ಬಗ್ಗೆ ಮಾತನಾಡಬೇಕು. ಇನ್ನು ತಾವು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಮೋದಿ ಅವರು ಜೂಮ್ ಸೆಷನ್‌ ಮೂಲಕ ನಡೆಸಿದ “ಪರಿಣಾಮಕಾರಿ” ಎಂಬ ಅಭಿಯಾನದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಎಕ್ಸ್​​ನಲ್ಲಿ ಕಿರಣ್ ಬೇಡಿ ಹೀಗೆ ಬರೆದುಕೊಂಡಿದ್ದಾರೆ.. “ಸರ್, ದಯವಿಟ್ಟು ಮತ್ತೊಮ್ಮೆ ಬೇಡಿಕೊಂಡಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ನಾನು ಪುದುಚೇರಿಯಲ್ಲಿದ್ದಾಗ ನೀವು ನಡೆಸಿದ “ಪರಿಣಾಮಕಾರಿ” ಎಂಬ ಅಭಿಯಾನ ತುಂಬಾ ಉತ್ತಮವಾಗಿತ್ತು. ಇದರಿಂದ ಆ ರಾಜ್ಯದ ಜನರಿಗೆ ತುಂಬಾ ಒಳ್ಳೆಯದಾಗಿದೆ. ದಯವಿಟ್ಟು ಈಗ ದೆಹಲಿಯ ಮಾಲಿನ್ಯ ವಿಚಾರದಲ್ಲಿ ನೀವು ಮಧ್ಯಪ್ರವೇಶ ಮಾಡಬೇಕು. ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಯಲು ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸಬೇಕು. ಇದು ನಮಗೆ ಭರವಸೆ ನೀಡುತ್ತದೆ. ನಿಮ್ಮ ಮೇಲ್ವಿಚಾರಣೆಯಲ್ಲಿ ನಡೆದರೆ ಖಂಡಿತ ಇದಕ್ಕೆ ಪರಿಹಾರ ಸಿಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನ ಮುಗಿಸಿಕೊಂಡು ಬರುತ್ತಿದ್ದ ಕೋಲಾರದ ಐವರು ದುರ್ಮರಣ

ಎಲ್ಲಾ ವಯೋಮಾನದವರಿಗೂ ಅನುಕೂಲವಾಗುವಂತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಅವರು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಅವರಿಗೆ ಅರ್ಥಮಾಡಿಕೊಳ್ಳಲು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕೆಂದು ಕಿರಣ್ ಬೇಡಿ ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಇದೊಂದು ಒಳ್ಳೆಯ ಅವಕಾಶ ಏಕೆಂದರೆ ದೆಹಲಿಯಲ್ಲಿ ಡಬಲ್​​ ಇಂಜಿನ್​​​​ ಸರ್ಕಾರ ಇದೆ. ಈ ವಿಚಾರದಲ್ಲಿ ಅಕ್ಕ-ಪಕ್ಕದ ರಾಜ್ಯಗಳು ಹಾಗೂ ಅಧಿಕಾರಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ