ಜಾಮೀನು ತೀರ್ಪಿನಲ್ಲಾದ ದೋಷ ಸರಿಪಡಿಸಿದ ಕೋರ್ಟ್​; ಇಂದು ಜೈಲಿನಿಂದ ಬಿಡುಗಡೆಯಾದ ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾ

ಕೋರ್ಟ್​ ತೀರ್ಪು ನೀಡುವಲ್ಲಿ ಸ್ವಲ್ಪ ಅಚಾತುರ್ಯ ಆಗಿದ್ದ ಕಾರಣ ಜೈಲು ಅಧಿಕಾರಿಗಳು ಆಶೀಶ್​ ಮಿಶ್ರಾರನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಆಶೀಶ್​ ಮಿಶ್ರಾ ಶುಕ್ರವಾರ (ಫೆ.11) ಮತ್ತೆ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ತೀರ್ಪಿನಲ್ಲಾದ ದೋಷ ಸರಿಪಡಿಸಿದ ಕೋರ್ಟ್​; ಇಂದು ಜೈಲಿನಿಂದ ಬಿಡುಗಡೆಯಾದ ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾ
ಆಶೀಶ್ ಮಿಶ್ರಾ
Edited By:

Updated on: Feb 15, 2022 | 6:11 PM

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ (Lakhimpur Kheri Violence) ಜೈಲು ಸೇರಿದ್ದ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಪುತ್ರ ಆಶೀಶ್​ ಮಿಶ್ರಾರಿಗೆ (Ashish Mishra) ಜಾಮೀನು ಸಿಕ್ಕ ಬೆನ್ನಲ್ಲೇ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಫೆ.10ರಂದು ಅಲಹಾಬಾದ್​ ಹೈಕೋರ್ಟ್​​ನ ಲಖನೌ ಪೀಠ ಆಶೀಶ್​ ಮಿಶ್ರಾರಿಗೆ ಜಾಮೀನು ನೀಡಿತ್ತು.  ಆದರೆ ಕೋರ್ಟ್​ ತೀರ್ಪು ನೀಡುವಲ್ಲಿ ಸ್ವಲ್ಪ ಅಚಾತುರ್ಯ ಆಗಿದ್ದ ಕಾರಣ ಜೈಲು ಅಧಿಕಾರಿಗಳು ಆಶೀಶ್​ ಮಿಶ್ರಾರನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಆಶೀಶ್​ ಮಿಶ್ರಾ ಶುಕ್ರವಾರ (ಫೆ.11) ಮತ್ತೆ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ತೀರ್ಪಿನಲ್ಲಿ ಹೈಕೋರ್ಟ್​, ಸೆಕ್ಷನ್​ 302(ಕೊಲೆ) ಮತ್ತು ಸೆಕ್ಷನ್​ 120 ಬಿ (ಕ್ರಿಮಿನಲ್​ ಪಿತೂರಿ) ಗಳಡಿ ದಾಖಲಾದ ಪ್ರಕರಣದಲ್ಲೂ ಆರೋಪಿಗೆ ಬೇಲ್​ ನೀಡಲಾಗಿದೆ ಎಂಬುದನ್ನು ಉಲ್ಲೇಖಿಸಿರಲಿಲ್ಲ. ಈ ಲೋಪದ ಕಾರಣದಿಂದ ಜೈಲಾಧಿಕಾರಿಗಳು ನನ್ನನ್ನು ಬಿಡುಗಡೆ ಮಾಡುತ್ತಿಲ್ಲ.  ಜಾಮೀನು ತೀರ್ಪನ್ನು ಓದುವಾಗ ನ್ಯಾಯಾಧೀಶರು ಈ ಎರಡೂ ಸೆಕ್ಷನ್​​ಗಳಡಿಯ ಪ್ರಕರಣದಲ್ಲೂ ಬೇಲ್​ ನೀಡಿದ್ದಾಗಿ ಹೇಳಿದ್ದಾರೆ. ಆದರೆ ಆದೇಶ ಪತ್ರ ಟೈಪಿಸುವಾಗ ಅದನ್ನು ಸೇರಿಸಿಲ್ಲ. ಇದು ಒಂದು ಮುದ್ರಣ ದೋಷ. ಆದರೆ ಅದೇ ನನ್ನ ಬಿಡುಗಡೆಗೆ ತೊಂದರೆ ಕೊಡುತ್ತಿದೆ. ಹಾಗಾಗಿ ಲಿಖಿತ ಆದೇಶದಲ್ಲೂ ಇವೆರಡೂ ಸೆಕ್ಷನ್​ಗಳ ಉಲ್ಲೇಖ ಮಾಡಿಕೊಡಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.  ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಸೋಮವಾರ (ಫೆ.14) ತೀರ್ಪನ್ನು ಸರಿಪಡಿಸಿದೆ. ಅದರ ಬೆನ್ನಲ್ಲೇ ಆಶೀಶ್​ ಮಿಶ್ರಾ ಬಿಡುಗಡೆಯಾಗಿದ್ದಾರೆ.

ಅಕ್ಟೋಬರ್​ 3ರಂದು ಲಖಿಂಪುರ ಖೇರಿಗೆ ಬಿಜೆಪಿ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ ಭೇಟಿಕೊಟ್ಟಿದ್ದರು. ಈ ವೇಳೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದಿತ್ತು. ಈ ಘಟನೆ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪತ್ರಕರ್ತನೊಬ್ಬ, ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು.  ರೈತರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಇದ್ದಿದ್ದನ್ನು ಕಣ್ಣಾರೆ ನೋಡಿದ್ದೇವೆ. ಇವರೆಲ್ಲ ಕಾರನ್ನು ಹರಿಸಿದ್ದಲ್ಲದೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದರು.  ವೈರಲ್ ಆದ ವಿಡಿಯೋದಲ್ಲಿ ಒಬ್ಬರು ಕಾರಿನಿಂದ ಇಳಿದು ಓಡಿದ ದೃಶ್ಯ ಕಂಡುಬಂದಿತ್ತು. ಅದಯ ಆಶಿಶ್​ ಮಿಶ್ರಾ ಎಂದೇ ರೈತರು ಪ್ರತಿಪಾದಿಸಿದ್ದರು. ಬಳಿಕ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಎಸ್​ಐಟಿಯನ್ನೂ ರಚಿಸಿತ್ತು.

ಆಶೀಶ್​ ಮಿಶ್ರಾ ತಮ್ಮ ವಿರುದ್ಧದ ಆರೋಪ ಅಲ್ಲಗಳೆದಿದ್ದರು. ನಾನು ಘಟನೆ ನಡೆದಾಗ ಬನ್ವೀರ್​ಪುರದಲ್ಲಿ ಇದ್ದೆ. ಉಪಮುಖ್ಯಮಂತ್ರಿಯನ್ನು ಕರೆದುಕೊಂಡು ಬರಲು ನಮ್ಮ ಮೂರು ವಾಹನಗಳು ಹೋಗಿದ್ದವು. ಆದರೆ ಅವುಗಳ ಮೇಲೆ ರೈತರು ಕಲ್ಲು ಎಸೆದು, ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕಾರಿಗೆ ಬೆಂಕಿಯನ್ನೂ ಹಚ್ಚಿದ್ದಾರೆ. ಮೂರ್ನಾಲ್ಕು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಅವರು ಆರೋಪಿಸಿದ್ದರು.  ಆದರೆ ಆಶೀಶ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದರು. ಆದರೆ ಅವರು ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಅಕ್ಟೋಬರ್​ 9ರಂದು ಅರೆಸ್ಟ್ ಮಾಡಿದ್ದಾಗಿ ಸಹರಾನ್ಪುರ ಡಿಐಜಿ ಉಪೇಂದ್ರ ಅಗರ್​ವಾಲ್​ ತಿಳಿಸಿದ್ದರು.

ಈ ಮಧ್ಯೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಲು ತಡ ಮಾಡುತ್ತಿರುವುದು ಯಾಕೆ? ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧ ಕೊಲೆ ಆರೋಪ ದಾಖಲಾದರೆ ಇಷ್ಟೇ ವಿಳಂಬ ಮಾಡುತ್ತೀರಾ ಎನ್ನುವ ಮೂಲಕ, ಆಶೀಶ್​ ಮಿಶ್ರಾ ವಿರುದ್ಧ ಹತ್ಯೆ ದೂರು ದಾಖಲಾಗಿದ್ದರೂ, ಅವರನ್ಯಾಕೆ ಅರೆಸ್ಟ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿತ್ತು. ಇಷ್ಟರ ಮಧ್ಯೆ ಅಕ್ಟೋಬರ್​ 3ರಂದು ರೈತರ ಮೇಲೆ ಗುಂಡು ಹಾರಿದ್ದು, ಅಂಕಿತ್ ದಾಸ್​ ಮತ್ತು ಆಶೀಶ್​ ಮಿಶ್ರಾರ ಬಂದೂಕುಗಳಿಂದ. ಪರವಾನಗಿ ಹೊಂದಿರುವ ಬಂದೂಕುಗಳು ಇವು ಎಂದು ನವೆಂಬರ್​ 9ರಂದು ವಿಧಿ ವಿಜ್ಞಾನ ಪ್ರಯೋಗಾಲಯ ದೃಢಪಡಿಸಿತ್ತು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್​ ವ್ಯವಸ್ಥೆ ಸುಧಾರಣೆಗೆ ಬೇಡಿಕೆ