Yogi Adityanath: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ; ಫೇಸ್​ಬುಕ್​ನಲ್ಲಿ ಶಿರಚ್ಛೇದದ ಪೋಸ್ಟ್​

ಉತ್ತರ ಪ್ರದೇಶದ ನಾಗರಿಕ ಆತ್ಮಪ್ರಕಾಶ್​ ಪಂಡಿತ್ ಎಂಬಾತನ ಫೇಸ್​ಬುಕ್ ಖಾತೆಯಲ್ಲಿ ಪ್ರಕಟವಾಗಿರುವ ಪೋಸ್ಟ್ ಒಂದು ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ.

Yogi Adityanath: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ; ಫೇಸ್​ಬುಕ್​ನಲ್ಲಿ ಶಿರಚ್ಛೇದದ ಪೋಸ್ಟ್​
ಯೋಗಿ ಆದಿತ್ಯನಾಥ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 21, 2022 | 7:39 AM

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh CM Yogi Adityanath Accused) ಅವರನ್ನು ದೇಶದಲ್ಲೆಡೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದುತ್ವ ಪರ ಹೋರಾಟಗಾರರು ಆದರ್ಶ ಎಂದು ಭಾವಿಸುತ್ತಾರೆ. ಕರ್ನಾಟಕದಲ್ಲಿಯೂ ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ನಂತರದ ಪ್ರತಿಭಟನಾ ಮೆರವಣಿಗೆಯಲ್ಲಿ ‘ಯೋಗಿ, ಯೋಗಿ’ ಎಂದು ಘೋಷಣೆ ಕೂಗಿದ್ದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಸಿ.ಟಿ.ರವಿ ಸಹ ಉತ್ತರ ಪ್ರದೇಶ ಮಾದರಿಯನ್ನು ಕೊಂಡಾಡಿದ್ದರು. ಯೋಗಿ ಆದಿತ್ಯನಾಥ್ ಅವರ ವ್ಯಕ್ತಿತ್ವ ಹಾಗೂ ಆಡಳಿತ ವೈಖರಿಗೆ ಹಿಂದುತ್ವವಾದಿಗಳ ಮೆಚ್ಚುಗೆ ಇರುವುದನ್ನು ಈ ಬೆಳವಣಿಗೆಗಳು ಸಾರಿ ಹೇಳಿದ್ದವು. ಯೋಗಿ ಆದಿತ್ಯನಾಥ್ ಅವರಿಗೆ ಸಂಬಂಧಿಸಿದ ಯಾವುದೇ ಬೆಳವಣಿಗೆ ದೇಶದ ಗಮನ ಸೆಳೆಯುತ್ತದೆ.

ಉತ್ತರ ಪ್ರದೇಶದ ನಾಗರಿಕ ಆತ್ಮಪ್ರಕಾಶ್​ ಪಂಡಿತ್ ಎಂಬಾತನ ಫೇಸ್​ಬುಕ್ ಖಾತೆಯಲ್ಲಿ ಪ್ರಕಟವಾಗಿರುವ ಪೋಸ್ಟ್ ಒಂದು ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಈ ಪೋಸ್ಟ್​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ‘ತನ್ನ ಫೇಸ್​ಬುಕ್ ಖಾತೆ ದುರ್ಬಳಕೆ ಆಗಿದೆ’ ಎಂದು ತನಿಖೆ ವೇಳೆ ಅವರು ಸೈಬರ್​ ​ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನೆ

ಉತ್ತರ ಪ್ರದೇಶ ಪೊಲೀಸರು ಆರಂಭಿಸಿರುವ ಸಹಾಯವಾಣಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ವಾಟ್ಸ್ಯಾಪ್ ಸಂದೇಶವೊಂದು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಇತ್ತೀಚೆಗಷ್ಟೇ ಪ್ರಕರಣ ದಾಖಲಿಸಿದ್ದರು. ಉತ್ತರ ಪ್ರದೇಶದಲ್ಲಿ ಜನರಿಗೆ ಪೊಲೀಸರು ಸಂಪರ್ಕಿಸುವುದು ಸುಲಭವಾಗಲಿ ಎನ್ನುವ ಕಾರಣಕ್ಕಾಗಿ ‘ಡಯಲ್-112’ ಸಹಾಯವಾಣಿ ಆರಂಭಿಸಲಾಗಿದೆ. ಇದು ವಾಟ್ಸ್ಯಾಪ್ ಸಂಪರ್ಕವನ್ನೂ ಹೊಂದಿದೆ. ಈ ಸಂಖ್ಯೆಗೆ ಶಾಹಿದ್ ಎಂಬ ವ್ಯಕ್ತಿಯಿಂದ ಸಂದೇಶ ಬಂದಿತ್ತು. ಈತ ಮುಖ್ಯಮಂತ್ರಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವುದಾಗಿ ಎಚ್ಚರಿಸಿದ್ದ.

ಪ್ರಕರಣ ಸಂಬಂಧ ಲಖನೌನ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಹಲವು ತಂಡಗಳನ್ನು ರಚಿಸಿರುವ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.

Published On - 7:38 am, Sun, 21 August 22