AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LK Advani Hospitalised: ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು

ಬಿಜೆಪಿ ಹಿರಿಯ ನಾಯಕ ಲಾಲ್​​ಕೃಷ್ಣ ಅಡ್ವಾಣಿ ಬುಧವಾರ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 96 ವರ್ಷ ವಯಸ್ಸಿನ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಸದ್ಯದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಎಮ್ಸ್ ಪ್ರಕಟಣೆ ಹೊರಡಿಸಿದೆ. ಆ ಮಾಹಿತಿ ಇಲ್ಲಿದೆ.

LK Advani Hospitalised: ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
ಮಾಜಿ ಉಪ ಪ್ರಧಾನಿ ಎಲ್​​ ಕೆ ಅಡ್ವಾಣಿ (ಸಂಗ್ರಹ ಚಿತ್ರ)
Ganapathi Sharma
|

Updated on:Jun 27, 2024 | 6:59 AM

Share

ನವದೆಹಲಿ, ಜೂನ್ 27: ಮಾಜಿ ಉಪ ಪ್ರಧಾನಿ, ಭಾರತ ರತ್ನ ಎಲ್‌ಕೆ ಅಡ್ವಾಣಿ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಏಮ್ಸ್​​ಗೆ ಬುಧವಾರ ರಾತ್ರಿ ದಾಖಲಿಸಲಾಗಿದೆ. ಈ ಕುರಿತು ಏಮ್ಸ್ ಪ್ರಕಟಣೆ ಹೊರಡಿಸಿದೆ. ಅಡ್ವಾಣಿ ಆರೋಗ್ಯ ಸ್ಥಿರವಾಗಿದೆ ಮತ್ತು ಸದ್ಯ ಅಬ್ಸರ್ವೇಷನ್​ನಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 96 ವರ್ಷ ವಯಸ್ಸಿನ ಅಡ್ವಾಣಿ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅವರ ಆರೋಗ್ಯ ಸ್ಥಿತಿಯ ಕುರಿತು ಆಸ್ಪತ್ರೆಯು ಹೆಚ್ಚಿನ ವಿವರ ನೀಡಿಲ್ಲ.

ಬುಧವಾರ ಸಂಜೆಯೇ ಅಡ್ವಾಣಿ ತುಸು ಅಸ್ವಸ್ಥರಾಗಿದ್ದಾರೆ. ಸಾಮಾನ್ಯವಾಗಿ ಅವರ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮನೆಯಲ್ಲಿಯೇ ಮಾಡಲಾಗುತ್ತದೆ. ಆದರೆ ಬುಧವಾರ ಸಂಜೆ, ಅವರು ಸ್ವಲ್ಪ ಅಸ್ವಸ್ಥರಾದರು. ನಂತರ ಅವರನ್ನು ಏಮ್ಸ್​​ಗೆ ಕರೆದುಕೊಂಡು ಹೋಗಿ, ಅಲ್ಲಿನ ವೃದ್ಧಾಪ್ಯ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಅಡ್ವಾಣಿ ರಾಜಕೀಯ ಜೀವನ: ಸಂಕ್ಷಿಪ್ತ ಹಿನ್ನೋಟ

ಅಡ್ವಾಣಿ 2014ರಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಡ್ವಾಣಿ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದಿದ್ದರು. 1927 ರ ನವೆಂಬರ್ 8 ರಂದು ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ಸಿಂಧಿ ಕುಟುಂಬದಲ್ಲಿ ಜನಿಸಿದ ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಕಳೆದ ಬಾರಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಿದೆ. 2015 ರಲ್ಲಿ, ಅಡ್ವಾಣಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿ ಭೂಷಣಕ್ಕೆ ಭಾಜನರಾಗಿದ್ದರು.

ಇದನ್ನೂ ಓದಿ: ಎಲ್ ಕೆ ಅಡ್ವಾಣಿ ಮನೆಗೆ ತೆರಳಿ ಗುರುವಿಗೆ ನಮನ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಅವರು 1998 ಮತ್ತು 2004 ರ ನಡುವೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರದಲ್ಲಿ (ಎನ್​ಡಿಎ) ಗೃಹ ಸಚಿವರಾಗಿದ್ದರು. ಲಾಲ್ ಕೃಷ್ಣ ಅಡ್ವಾಣಿ 2002 ಮತ್ತು 2004 ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಭಾರತದ ಉಪಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. 10 ಮತ್ತು 14ನೇ ಲೋಕಸಭೆಯ ಅವಧಿಯಲ್ಲಿ ಪ್ರತಿಪಕ್ಷ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.

2009ರಲ್ಲಿ ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ

2009 ರ ಲೋಕಸಭೆ ಚುನಾವಣೆಯ ಮೊದಲು ವಿರೋಧ ಪಕ್ಷದ ನಾಯಕರಾಗಿದ್ದ ಅಡ್ವಾಣಿ ಅವರನ್ನು 2009 ರ ಮೇ 16 ರಂದು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. 2007 ರ ಡಿಸೆಂಬರ್ 10 ರಂದು, ಬಿಜೆಪಿಯ ಸಂಸದೀಯ ಮಂಡಳಿಯು 2009 ರ ಲೋಕಸಭೆ ಚುನಾವಣೆಗೆ ಅಡ್ವಾಣಿಯವರನ್ನು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಔಪಚಾರಿಕವಾಗಿ ಘೋಷಿಸಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಾಗ ಸುಷ್ಮಾ ಸ್ವರಾಜ್ ನಾಯಕರಾಗಲು ಅಡ್ವಾಣಿ ದಾರಿ ಮಾಡಿಕೊಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 am, Thu, 27 June 24