ವಾರಾಣಸಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವಿಫಲ, ಕಾರಣವೇನು?

| Updated By: ನಯನಾ ರಾಜೀವ್

Updated on: May 08, 2022 | 11:50 AM

ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಸಮೀಪವಿರುವ ಜ್ಞಾನವಾಪಿ ಮಸೀದಿ ವಿವಾದ ಮತ್ತಷ್ಟು ಜಟಿಲವಾಗಿದ್ದು, ಕೋರ್ಟ್ ಕಮಿಷನರ್​ಗಳಿಗೆ ಸಮೀಕ್ಷೆ ನಡೆಸಲು ಸ್ಥಳೀಯರು ಅವಕಾಶ ನೀಡದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಮಸೀದಿಯ ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯ ನೇಮಿಸಿದ ವಕೀಲ ಅಜಯ್ ಕುಮಾರ್ ಹಾಗೂ ತಂಡ ವಿಫಲವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಾರಾಣಸಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವಿಫಲ, ಕಾರಣವೇನು?
ಜ್ಞಾನವಾಪಿ ಮಸೀದಿ
Follow us on

ವಾರಾಣಸಿ: ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಸಮೀಪವಿರುವ ಜ್ಞಾನವಾಪಿ ಮಸೀದಿ ವಿವಾದ ಮತ್ತಷ್ಟು ಜಟಿಲವಾಗಿದ್ದು, ಕೋರ್ಟ್ ಕಮಿಷನರ್​ಗಳಿಗೆ ಸಮೀಕ್ಷೆ ನಡೆಸಲು ಸ್ಥಳೀಯರು ಅವಕಾಶ ನೀಡದೆ ಪ್ರತಿಭಟನೆ ಮುಂದುವರೆಸಿದ್ದಾರೆ. ಮಸೀದಿಯ ಸಮೀಕ್ಷೆ ನಡೆಸಲು ಸ್ಥಳೀಯ ನ್ಯಾಯಾಲಯ ನೇಮಿಸಿದ ವಕೀಲ ಅಜಯ್ ಕುಮಾರ್ ಹಾಗೂ ತಂಡ ವಿಫಲವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಕೆಂದರೆ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರು ನ್ಯಾಯಾಲಯದ ಆದೇಶವನ್ನು ವಿರೋಧಿಸಿದ್ದಾರೆ. ಸಮೀಕ್ಷೆ ಮಾಡಲು ಅಜಯ್ ಕುಮಾರ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿ ಸಮಿತಿಯು ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದೆ.

ಸ್ಥಳೀಯ ಕೋರ್ಟ್ ಆದೇಶದಂತೆ ಮೇ 6 ಹಾಗೂ 7 ರಂದು ಈ ಮಸೀದಿಯಲ್ಲಿ ವಿಡಿಯೋ ಸಮೀಕ್ಷೆ ನಡೆಸಬೇಕಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ ಎರಡೂ ದಿನ ಸಮೀಕ್ಷೆ ಕಾರ್ಯ ನಡೆಸಲು ಸಾಧ್ಯವಾಗಿಲ್ಲ ಎಂಬುದು ತಿಳಿದುಬಂದಿದೆ. ದಿನದಾರಂಭದಲ್ಲೇ ವಾರಾಣಸಿ ಹೈಕೋರ್ಟ್ ಶನಿವಾರವೇ ವಿಡಿಯೋಗ್ರಫಿ ಮತ್ತು ಸಮೀಕ್ಷೆ ಮುಗಿಸಿ ಎಂದು ವಕೀಲರಿಗೆ ಸೂಚನೆ ನೀಡಿತ್ತು.

ಇದರಿಂದಾಗಿ ಭಾರಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ವಲೀಕರ ತಂಡ ಮಸೀದಿ ಬಳಿ ತೆರಳಿ ಸಮೀಕ್ಷೆಗೆ ಮುಂದಾಗಿತ್ತು. ಆದರೆ, ಸ್ಥಳೀಯರು ತೀವ್ರ ಪ್ರತಿರೋಧ ಉಂಟು ಮಾಡಿದ್ದರಿಂದ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಜ್ಞಾನವಾಪಿ ಮಸೀದಿಯ ಎರಡೂ ನೆಲಮಾಳಿಗೆಗಳನ್ನು ಸಹ ಸಮೀಕ್ಷೆ ನಡೆಸಲಾಗುವುದು, ಅದರಲ್ಲಿ ಒಂದು ನೆಲಮಾಳಿಗೆಯ ಕೀ ಆಡಳಿತದ ಬಳಿ ಮತ್ತು ಇನ್ನೊಂದರ ಕೀ ಮಸೀದಿಯ ನಿರ್ವಹಣೆಯಲ್ಲಿದೆ ಎಂದು ಹೇಳಲಾಗಿತ್ತು.

ಸಮೀಕ್ಷೆಗೆಂದು ಮಸೀದಿ ಸುತ್ತಮುತ್ತ ಬಿಗಿ ಭದ್ರತೆ ಜೊತೆಗೆ ಭದ್ರತಾ ಸಮಸ್ಯೆ ಹಿನ್ನಲೆ ಜ್ಞಾನವಾಪಿ ಸಂಕೀರ್ಣವನ್ನು ಹೋರ್ಡಿಂಗ್​​ಗಳಿಂದ ಮುಚ್ಚಲಾಗಿತ್ತು. ಈ ವಿಚಾರ ಮತ್ತೆ ನ್ಯಾಯಾಲಯದ ಮುಂದಿಟ್ಟಾಗ ನ್ಯಾಯಾಲಯವು ಮೇ 9 ರಂದು ತಮ್ಮ ವಾದವನ್ನು ಮಂಡಿಸಲು ಫಿರ್ಯಾದಿದಾರರು ಮತ್ತು ವಕೀಲ ಕಮಿಷನರ್‌ಗೆ ಸೂಚಿಸಿದೆ. ಹೀಗಾಗಿ ಸ್ಥಳ ಪರಿಶೀಲನೆ ಸದ್ಯಕ್ಕೆ ನಿಲ್ಲಿಸಲಾಗಿದೆ.

ಏನಿದು ಜ್ಞಾನವಾಪಿ ಮಸೀದಿ ವಿವಾದ
ಜ್ಞಾನವಾಪಿ ಮಸೀದಿಯು ಹಿಂದೆ ಹಿಂದೂ ದೇಗುಲವಾಗಿದ್ದು, ಇಲ್ಲಿ ಶೃಂಗಾರ ಗೌರಿ ಪೂಜೆಗೆ ಅವಕಾಶ ನೀಡಬೇಕು ಎಂದು ವಾರಾಣಸಿ ಕೋರ್ಟ್​ನಲ್ಲಿ ಅರ್ಜಿ ದಾಖಲಾಗಿದೆ. 1998ರಲ್ಲಿಯೇ ಈ ಕುರಿತು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ವಿವಾದ ಮುಂದುವರೆಯುತ್ತಲೇ ಇತ್ತು.

ಇತ್ತೀಚೆಗಷ್ಟೇ ವಾರಾಣಸಿ ದೇಗುಲ ಸಂಕೀರ್ಣ ನಿರ್ಮಾಣವಾಗಿದ್ದು, ಈ ವೇಳೆ ಮಸೀದಿಯ ಹಿಂಬದಿ ಎಲ್ಲರ ಕಣ್ಣಿಗೆ ಬಿದ್ದಿತ್ತು, ಮಸೀದಿಯ ಹಿಂದಿನ ಗೋಡೆ ದೇಗುಲದಂತೆಯೇ ಇದ್ದು, ಹೀಗಾಗಿ ಇಲ್ಲಿ ಶೃಂಗಾರ ಗೌರಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲದೆ ಈ ಮಸೀದಿಯು ವಾರಾಣಸಿ ದೇಗುಲ ಸಂಕೀರ್ಣಕ್ಕೆ ಹೊಂದಿಕೊಂಡಂತೆಯೇ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ