ಲಿಫ್ಟ್ ಕೊಡ್ತೀನಿ ಎಂದು ಕಾರು ಹತ್ತಿಸಿಕೊಂಡು ಕೊಂದೇ ಬಿಟ್ಟ, ದೇಹ ಒಳಗಿಟ್ಟು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ್ರೂ ಸಿಕ್ಕಿಬಿದ್ದ
ಗಣೇಶ್ ಚೌಹಾಣ್ ಎಂಬ ಬ್ಯಾಂಕ್ ಏಜೆಂಟ್ 1 ಕೋಟಿ ರೂ. ವಿಮಾ ಹಣಕ್ಕಾಗಿ ತನ್ನ ಸಾವಿನ ನಾಟಕವಾಡಿದ್ದಾನೆ. ಅಮಾಯಕನಿಗೆ ಲಿಫ್ಟ್ ಕೊಟ್ಟು ಕೊಂದು, ಆ ದೇಹವನ್ನು ತನ್ನ ಕಾರಿನಲ್ಲಿಟ್ಟು ಸುಟ್ಟುಹಾಕಿದ್ದ. ಆದರೆ, ಪೊಲೀಸರ ತನಿಖೆಯಿಂದ ಆತನ ನಕಲಿ ಸಾವು ಬಯಲಿಗೆ ಬಿದ್ದಿದ್ದು, ಪ್ರಿಯತಮೆಗೆ ಸಂದೇಶ ಕಳುಹಿಸಿ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದಲ್ಲಿ ನಡೆದ ಈ ವಿಮಾ ವಂಚನೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ.

ಮುಂಬೈ, ಡಿಸೆಂಬರ್ 16: ಮಹಾರಾಷ್ಟ್ರದ ಲಾತೂರಿನಲ್ಲಿ ಕಾರೊಂದು ಸುಟ್ಟುಕರಕಲಾದ ರೀತಿಯಲ್ಲಿ ಪತ್ತೆಯಾಗಿತ್ತು, ಅದರಲ್ಲಿ ಗೋಣಿಚೀಲದಲ್ಲಿದ್ದ ಶವ(Dead Body) ಕೂಡ ಬೆಂದು ಹೋಗಿತ್ತು. ಈ ಕಾರು ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚೌಹಾಣ್ನದ್ದು ಆದ ಕಾರಣ ಆತನೇ ಸಾವನ್ನಪ್ಪಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ನಡೆದಿರುವ ಘಟನೆಯೇ ಬೇರೆ, ಈ ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವನಿಗೆ ಲಿಫ್ಟ್ ಕೊಡುತ್ತೀನಿ ಎಂದು ಹತ್ತಿಸಿಕೊಂಡು ಕೊಂದೇ ಬಿಟ್ಟಿದ್ದ. ಬಳಿಕ ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಆದರೆ ಗಣೇಶ್ಗೆ ಮತ್ತೊಬ್ಬನನ್ನು ಕೊಲ್ಲುವ ಉದ್ದೇಶವಿರಲಿಲ್ಲ, ಒಟ್ಟಿನಲ್ಲಿ ತಾನು ಸತ್ತಿದ್ದೇನೆಂದು ಎಲ್ಲರೂ ತಿಳಿದುಕೊಳ್ಳಬೇಕೆಂಬ ಉದ್ದೇಶವಿದ್ದಿದ್ದು ಸ್ಪಷ್ಟವಾಗಿದೆ. ಕಾರಿನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಅವರು ಅದನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿರುವುದು ಕಂಡುಬಂದಿತ್ತು. ಆ ವ್ಯಕ್ತಿ ಸಂಬಂಧಿ ಗಣೇಶ್ ಚೌಹಾಣ್ ಸಂಪರ್ಕಿಸಲು ಮುಂದಾದಾಗ ಆತ ಮನೆಗೆ ಬಂದಿಲ್ಲ, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು.
ಈ ಎಲ್ಲಾ ಸಂಗತಿಗಳ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಗಣೇಶ್ ಎಂಬುದು ಆರಂಭಿಕ ಊಹೆಯಾಗಿತ್ತು. ಆದರೆ ಪೊಲೀಸರ ತನಿಖೆ ಮುಂದುವರೆದಂತೆ ಪೊಲೀಸರಿಗೆ ಹಲವು ಅಂಶಗಳು ಮನವರಿಕೆಯಾಗುತ್ತಾ ಹೋಗಿತ್ತು. ಆತನಿಗೆ ಓರ್ವ ಯುವತಿ ಜತೆ ಪ್ರೀತಿ ಇದೆ ಎಂಬುದು ತಿಳಿದುಬಂದಿತ್ತು.
ಮತ್ತಷ್ಟು ಓದಿ: ಮಹಾರಾಷ್ಟ್ರ: ವ್ಯಕ್ತಿಯನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಆಕೆಯನ್ನು ಸಂಪರ್ಕಿಸಿದಾಗ ಈ ಘಟನೆಯ ಬಳಿಕ ಗಣೇಶ್ ಬೇರೊಂದು ನಂಬರ್ ಬಳಸಿ ಆಕೆಗೆ ಸಂದೇಶ ಕಳುಹಿಸಿರುವುದು ತಿಳಿದುಬಂದಿತ್ತು. ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹುಡುಕಾಟ ಆರಂಭಿಸಿದ್ದರು.
ಆ ಫೋನ್ ನಂಬರ್ ಪೊಲೀಸರನ್ನು ಕೊಲ್ಹಾಪುರಕ್ಕೆ ಕೊಂಡೊಯ್ದಿತ್ತು, ಅಲ್ಲಿ ಚೌಹಾಣ್ ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಆತ 1 ಕೋಟಿ ರೂಗಳಜೀವ ವಿಮಾ ಪಾಲಿಸಿಯನ್ನು ಮಾಡಿಸಿದ್ದ, ಗೃಹ ಸಾಲದ ಹಣವನ್ನು ತೀರಿಸಲು ಈ ನಾಟಕವಾಡಿದ್ದ, ಅದಕ್ಕೆ ಒಂದು ಅಮಾಯಕನ ಜೀವವನ್ನು ಬಲಿ ಪಡೆದಿದ್ದ ಎಂಬುದು ತಿಳಿದುಬಂದಿದೆ.
ಶನಿವಾರ ಔಸಾದ ತುಳಜಾಪುರ ಟಿ ಜಂಕ್ಷನ್ನಲ್ಲಿ ಗೋವಿಂದ್ ಯಾದವ್ ಎಂಬ ವ್ಯಕ್ತಿಗೆ ಗಣೇಶ್ ಲಿಫ್ಟ್ ಕೊಟ್ಟಿದ್ದ. ಯಾದವ್ ಕುಡಿದ ಮತ್ತಿನಲ್ಲಿದ್ದ, ಚೌಹಾಣ್ ಇದರ ಲಾಭವನ್ನು ಪಡೆದಿದ್ದ.ಆತ ಕಾರನ್ನು ನಿಲ್ಲಿಸಿ ಯಾದವ್ಗೆ ಊಟ ತಂದುಕೊಟ್ಟಿದ್ದ, ಊಟದ ಬಳಿಕ ಯಾದವ್ ನಿದ್ರೆಗೆ ಜಾರಿದ್ದ, ಬಳಿಕ ಕೊಲೆ ಮಾಡಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




