ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್​​ಗೆ ನವೆಂಬರ್​ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್​ಎ ಕೋರ್ಟ್​ ಆದೇಶ

| Updated By: Lakshmi Hegde

Updated on: Nov 02, 2021 | 4:51 PM

Anil Deshmukh: ಇಂದು ಕೋರ್ಟ್​​ನಲ್ಲಿ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಅನಿಲ್​ ಸಿಂಗ್​ ಮತ್ತು ಹಿತೇನ್ ವೆನೆಗಾಂವ್ಕರ್ ಅವರು ವಾದಿಸಿದ್ದರು.

ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್​​ಗೆ ನವೆಂಬರ್​ 6ರವರೆಗೆ ಇ ಡಿ ಕಸ್ಟಡಿ; ವಿಶೇಷ ಪಿಎಂಎಲ್​ಎ ಕೋರ್ಟ್​ ಆದೇಶ
ಅನಿಲ್​ ದೇಶ್​ಮುಖ್​​
Follow us on

ಅಕ್ರಮ ಹಣ ವಸೂಲಿ, ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರನ್ನು ನವೆಂಬರ್​ 6ರವರೆಗೆ ಇಡಿ ಕಸ್ಟಡಿಗೆ ನೀಡಿ ಮುಂಬೈನ ವಿಶೇಷ ಪಿಎಂಎಲ್​ಎ (Prevention of Money Laundering Act Court) ನ್ಯಾಯಾಲಯ ಆದೇಶ ನೀಡಿದೆ. ಸತತ 12 ತಾಸುಗಳ ಕಾಲ ಅನಿಲ್​ ದೇಶ್​ಮುಖ್​​ರನ್ನು ವಿಚಾರಣೆ ನಡೆಸಿದ್ದ ಇ.ಡಿ.ಅಧಿಕಾರಿಗಳು ಬಳಿಕ ಅವರನ್ನು ಬಂಧಿಸಿದ್ದರು. ಅನಿಲ್​ ದೇಶ್​ಮುಖ್​ ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಕಾರಣ ಬಂಧಿಸಿದ್ದಾಗಿ ಹೇಳಿಕೊಂಡಿದ್ದರು. ಅದಾದ ಬಳಿಕ ಅವರನ್ನು ವಿಶೇಷ ಪಿಎಂಎಲ್​ಎ ನ್ಯಾಯಾಲಯದ ಎದುರು ಹಾಜರು ಪಡಿಸಿ, 14 ದಿನಗಳ ಕಾಲ ತಮ್ಮ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರು.  

ಅನಿಲ್ ದೇಶ್​ಮುಖ್​ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ. ಅವರು ಗೃಹ ಸಚಿವರಾಗಿದ್ದಾಗ ಪೊಲೀಸರನ್ನು ಬಳಸಿಕೊಂಡು ಪ್ರತಿ ತಿಂಗಳಿಗೆ ಸುಮಾರು 100 ಕೋಟಿ ರೂಪಾಯಿಯನ್ನು ವಿವಿಧ ಮೂಲಗಳಿಂದ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅನಿಲ್ ದೇಶ್​ಮುಖ್​ ವಿರುದ್ಧ ಆರೋಪ ಮಾಡಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು ಮುಂಬೈನ ಮಾಜಿ ಪೊಲೀಸ್​ ಅಧಿಕಾರಿ ಪರಮ್​ ಬೀರ್​ ಸಿಂಗ್​. ಬರೀ ಇಡಿಯಷ್ಟೇ ಅಲ್ಲದೆ ಸಿಬಿಐ (ಕೇಂದ್ರೀಯ ತನಿಖಾ ದಳ) ಕೂಡ ಅನಿಲ್​ ದೇಶ್​ಮುಖ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಿದೆ.

ಇಂದು ಕೋರ್ಟ್​​ನಲ್ಲಿ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಅನಿಲ್​ ಸಿಂಗ್​ ಮತ್ತು ಹಿತೇನ್ ವೆನೆಗಾಂವ್ಕರ್ ಅವರು ವಾದಿಸಿದ್ದರು. ಅನಿಲ್​ ದೇಶ್​ಮುಖ್​ ಪರ ಹಿರಿಯ ವಕೀಲರಾದ ವಿಕ್ರಮ್​ ಚೌಧರಿ ಮತ್ತು ಅನಿಕೇತ್​ ನಿಕಾಮ್​ ಪ್ರತಿವಾದ ಮಂಡನೆ ಮಾಡಿದ್ದರು.

ಈ ಮಧ್ಯೆ, ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ಅನಿಲ್​ ದೇಶ್​ಮುಖ್​ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ಇದನ್ನೇ  ಹೇಳಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪರಮ್​ಬೀರ್​ ಸಿಂಗ್​ ವಿರುದ್ಧವೂ ಕೂಡ ಭ್ರಷ್ಟಾಚಾರ ಆರೋಪ ಇದೆ. ಅವರಿಗೆ ಲುಕ್​ಔಟ್​ ನೋಟಿಸ್​ ಕೂಡ ಜಾರಿ ಮಾಡಲಾಗಿದ್ದರೂ ಅವರ ಪತ್ತೆಯಿಲ್ಲ. ಈ ಬಗ್ಗೆ ನಿನ್ನೆ ಪ್ರಶ್ನೆ ಎತ್ತಿರುವ ಅನಿಲ್​ ದೇಶ್​ಮುಖ್​, ಪರಮ್​ ಬೀರ್​ ಸಿಂಗ್ ಎಲ್ಲಿ ಹೋಗಿದ್ದಾರೆ? ನನ್ನ ವಿರುದ್ಧ ಆರೋಪ ಮಾಡಿದವರೇ ಕಾಣುತ್ತಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದ ಇ ಡಿ ಅಧಿಕಾರಿಗಳು; ಪರಮ್​ ಬೀರ್​ ಸಿಂಗ್​ ಎಲ್ಲಿ?

ಸಂಘಟನೆ, ಸಿದ್ಧಾಂತ, ನೇತೃತ್ವ ಮೂರೂ ಸರಿ ಇಲ್ಲದಿದ್ದಾಗ ಆಗಬೇಕಾಗಿದ್ದೆ ಆಗಿದೆ: ಜೆಡಿಎಸ್ ಸೋಲಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ

Published On - 4:50 pm, Tue, 2 November 21