Maharashtra Politics: ‘ಮಹಾ’ ರಾಜಕೀಯ; ಬಲ ಪ್ರದರ್ಶನದ ಬಳಿಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಅಜಿತ್ ಪವಾರ್

|

Updated on: Jul 05, 2023 | 4:18 PM

ಪ್ರಸ್ತುತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ ಆಡಳಿತವಿದೆ. ಅವರು 2024 ರಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.

Maharashtra Politics: ‘ಮಹಾ’ ರಾಜಕೀಯ; ಬಲ ಪ್ರದರ್ಶನದ ಬಳಿಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಅಜಿತ್ ಪವಾರ್
ಅಜಿತ್ ಪವಾರ್
Follow us on

ಮುಂಬೈ: ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar), ಪಕ್ಷವನ್ನು ಮುನ್ನಡೆಸಲು ಅವರಿಗೆ ವಯಸ್ಸಾಗಿದೆ ಎಂದು ಹೇಳಿದ್ದಾರೆ. ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶರದ್ ಪವಾರ್ ಕೆಲವು ದಿನಗಳ ನಂತರ ಮನಸ್ಸು ಬದಲಾಯಿಸಿದ್ದರು. ಇದಕ್ಕೆ ಕಾರಣವೇನು ಎಂದು ಅಜಿತ್ ಪವಾರ್ ಪ್ರಶ್ನಿಸಿದ್ದಾರೆ.

ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ನಿಮಗೆ (ಶರದ್ ಪವಾರ್) ಈಗಾಗಲೇ 83 ವರ್ಷ ವಯಸ್ಸಾಗಿದೆ. ಬಿಜೆಪಿಯಲ್ಲಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ನೀವು ಶತಾಯುಷಿ (100 ವರ್ಷ ಬದುಕಲು). ನೀವು ನಮ್ಮ ದೇವತೆ. ನಮಗೆ ಆಶೀರ್ವಾದ ನೀಡಿ’ ಎಂದು ಶರದ್ ಅವರನ್ನು ಉದ್ದೇಶಿಸಿ ಅಜಿತ್ ಹೇಳಿದ್ದಾರೆ.

ನೀವು ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಾದರೆ ಏಕೆ ರಾಜೀನಾಮೆ ನೀಡಿದ್ದಿರಿ? ನಾನು ನನ್ನ ಸಹೋದರಿ ಸುಪ್ರಿಯಾ ಸುಳೆ ಬಳಿಯೂ ಅವರಿಗೆ (ಶರದ್) ವಿವರಿಸಲು ಹೇಳಿದ್ದೆ. ಆದರೆ ಅವರು (ಶರದ್) ತುಂಬಾ ಹಠಮಾರಿ ಎಂದು ಅಜಿತ್ ಪವಾರ್ ಹೇಳಿದ್ದಾರೆ.

2014 ರ ಚುನಾವಣೆಯ ನಂತರ, ಸರ್ಕಾರ ರಚಿಸಲು ಎನ್‌ಸಿಪಿ ಬಿಜೆಪಿಯನ್ನು ಏಕೆ ಬೆಂಬಲಿಸಿತು? ಎಂದು ಹಿರಿಯ ಎನ್‌ಸಿಪಿ ನಾಯಕನನ್ನು ಗುರಿಯಾಗಿಸಿಕೊಂಡು ಅಜಿತ್ ಪ್ರಶ್ನಿಸಿದ್ದಾರೆ.

ಅಜಿತ್ ಪವಾರ್ ಸಭೆಯಲ್ಲಿ 29 ಶಾಸಕರು ಭಾಗಿಯಾಗಿದ್ದರೆ, ಶರದ್ ಪವಾರ್ ಸಭೆಯಲ್ಲಿ 13 ಶಾಸಕರು ಭಾಗಿಯಾಗಿದ್ದಾರೆ. ಈ ಮಧ್ಯೆ, ತಮಗೆ 42 ಶಾಸಕರ ಬೆಂಬಲ ಇದೆ ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಬಯಸುತ್ತೇನೆ: ಅಜಿತ್ ಪವಾರ್

ಪಕ್ಷದ ಹೆಸರು ಮತ್ತು ಗುರಿ ನಮ್ಮದಾಗಿಯೇ ಉಳಿಯುತ್ತದೆ. ನಮ್ಮ ಪಕ್ಷವನ್ನು ಮತ್ತೊಮ್ಮೆ ರಾಷ್ಟ್ರೀಯ ಪಕ್ಷವನ್ನಾಗಿ ಮಾಡಬೇಕು ಎಂದು ಶಾಸಕರ ಸಮ್ಮುಖದಲ್ಲಿ ಅಜಿತ್ ಪವಾರ್ ಹೇಳಿದ್ದಾರೆ. 2004ರಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಕಡಿಮೆ ಇದ್ದಾಗಲೂ ಅವರಿಗೇ ಸಿಎಂ ಹುದ್ದೆ ನೀಡಲಾಗಿತ್ತು. ನಮ್ಮನ್ನ ಸಿಎಂ ಮಾಡಿದ್ದರೆ ರಾಜ್ಯದಲ್ಲಿ ಇಲ್ಲಿಯವರೆಗೆ ಎನ್‌ಸಿಪಿಯಿಂದ ಮಾತ್ರ ಮುಖ್ಯಮಂತ್ರಿ ಇರುತ್ತಿದ್ದರು. ಮಹಾರಾಷ್ಟ್ರದಲ್ಲಿ ಕೆಲವು ಯೋಜನೆಗಳನ್ನು ಜಾರಿಗೊಳಿಸಲು ನಾನು ಮುಖ್ಯಮಂತ್ರಿಯಾಗಲು ಬಯಸುತ್ತೇನೆ. ನಮ್ಮ ಯಾವುದೇ ಕಾರ್ಯಕರ್ತರನ್ನು ನಾವು ಹೋಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದೆಯೂ ಮೋದಿಯೇ ಪ್ರಧಾನಿ

ಪ್ರಸ್ತುತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ ಆಡಳಿತವಿದೆ. ಅವರು 2024 ರಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಅಜಿತ್ ಹೇಳಿದ್ದಾರೆ.

ಈ ಮಧ್ಯೆ, ಮುಂಬೈನಲ್ಲಿ ಅಜಿತ್ ಪವಾರ್ ಸಭೆ ಮುಗಿದಿದ್ದು, ಅವರು ತಮ್ಮ ಶಾಸಕರೊಂದಿಗೆ ತೆರಳಿದ್ದಾರೆ. ಇನ್ನೊಂದೆಡೆ ಶರದ್ ಪವಾರ್ ಬಣದ ಸಭೆ ನಡೆಯುತ್ತಿದ್ದು, ಬಿಜೆಪಿ ವಿರುದ್ಧ ಸಂಸದೆ ಸುಪ್ರಿಯಾ ಸುಳೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ‘ನಾ ಖಾವೂಂಗಾ ನಾ ಖಾನೇ ದುಂಗಾ’ ಎಂದು ಹೇಳುತ್ತಿದ್ದರು. ಆದರೆ ಈಗ ನಮ್ಮ ಪಕ್ಷವನ್ನು ತಿಂದಿದ್ದಾರೆ ಎಂದು ಸುಪ್ರಿಯಾ ಕಿಡಿಕಾರಿದ್ದಾರೆ.