Maldives: ಮೇ 10ರೊಳಗೆ ದೇಶ ಬಿಟ್ಟು ಹೋಗಿ: ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್​ಲೈನ್

ಮೇ 10ರೊಳಗೆ ಭಾರತೀಯ ಮಿಲಿಟರಿಯವರು ನಾಗರಿಕರ ಪೋಷಾಕಿನಲ್ಲಿರಲಿ, ಹೇಗೇ ಇರಲಿ, ಮಾಲ್ಡೀವ್ಸ್​ನಿಂದ ಜಾಗ ಖಾಲಿ ಮಾಡಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ. ಮಾಲ್ಡೀವ್ಸ್​ನಲ್ಲಿ ಭಾರತದ 88 ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್​ನಲ್ಲಿ ಎರಡು ಹೆಲಿಕಾಪ್ಟರ್ ಮತ್ತು ಒಂದು ವಿಮಾನವನ್ನು ನಿರ್ವಹಿಸುತ್ತಿದ್ದಾರೆ. ಇವುಗಳು ಮಾನವೀಯ ರಕ್ಷಣಾ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಯಾವ 88 ಭಾರತೀಯ ಸೈನಿಕರು ಮಾಲ್ಡೀವ್ಸ್​ನಲ್ಲಿ ಇರುವಂತಿಲ್ಲ ಎಂದು ಮುಯಿಜು ಮಾಡುತ್ತಿರುವ ತಾಕೀತಾಗಿದೆ.

Maldives: ಮೇ 10ರೊಳಗೆ ದೇಶ ಬಿಟ್ಟು ಹೋಗಿ: ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್​ಲೈನ್
ಮೊಹಮ್ಮದ್ ಮುಯಿಜು

Updated on: Mar 05, 2024 | 4:29 PM

ನವದೆಹಲಿ, ಮಾರ್ಚ್ 5: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಅವರ ಭಾರತ ವಿರೋಧಿ ಮಾತು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಕಾಲ್ತೆಗೆಯಬೇಕು ಎಂದು ಅವರು ಮತ್ತೆ ತಾಕೀತು ಮಾಡಿದ್ದಾರೆ. ಬಾ ಅತೋಲ್ (Ba Atoll) ಎಂಬಲ್ಲಿ ಸಾರ್ವಜನಿಕ ಸಮಾವೇಶದ ವೇಳೆ ಮುಯಿಜು ಅವರ ಭಾರತ ವಿರೋಧಿ ಮಾತುಗಳು ಕೇಳಿಬಂದವು. ಮೇ 10ರ ನಂತರ ಯಾವ ಭಾರತೀಯ ಮಿಲಿಟರಿ ಸಿಬ್ಬಂದಿಯೂ ಮಾಲ್ಡೀವ್ಸ್​ನಲ್ಲಿ ಇರುವುದಿಲ್ಲ. ನಾಗರಿಕ ಪೋಷಾಕಿನಲ್ಲಿರುವವರೂ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಮೊಹಮ್ಮದ್ ಮುಯಿಜು ಎಚ್ಚರಿಕೆ ನೀಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಭಾರತದ ಮಿಲಿಟರಿ ವತಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಒಂದು ಏರ್​ಕ್ರಾಫ್ಟ್​ನ ನಿರ್ವಹಣೆ ಆಗುತ್ತಿದೆ. ಒಟ್ಟು 88 ಮಂದಿ ಸಿಬ್ಬಂದಿ ಇದರಲ್ಲಿ ತೊಡಗಿದ್ದಾರೆ. ಮಾನವ ರಕ್ಷಣಾ ಕಾರ್ಯಗಳಿಗೆ ಇವುಗಳ ಬಳಕೆ ಆಗುತ್ತದೆ. ಈ ಎಲ್ಲಾ 88 ಭಾರತೀಯ ಮಿಲಿಟರಿ ಸಿಬ್ಬಂದಿಯಲ್ಲಿ ಒಬ್ಬರೂ ಕೂಡ ಇರಬಾರದು ಎಂದು ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಬಂದ ದಿನವೇ ಘಂಟಾಘೋಷವಾಗಿ ಆಜ್ಞೆ ಮಾಡಿದ್ದಾರೆ.

ಇದನ್ನೂ ಓದಿ: ಮಾರಿಷಸ್​ನಲ್ಲಿ ಶಿವರಾತ್ರಿ ಮುನ್ನ ನಡೆದ ಆಚರಣೆ ವೇಳೆ ಅಗ್ನಿ ಅವಘಡ, 6 ಮಂದಿ ಸಾವು

ಕಳೆದ ವಾರವಷ್ಟೇ ಒಂದು ಹೆಲಿಕಾಪ್ಟರ್​ಗೆ ನಿಯೋಜಿಸಿದ್ದ ಮಿಲಿಟರಿ ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಜಾಗಕ್ಕೆ ನುರಿತ ನಾಗರಿಕರನ್ನು ಭಾರತ ಕಳುಹಿಸಿದೆ. ಆದರೆ, ನಾಗರಿಕರ ವೇಷ ಹಾಕಿ ಮಿಲಿಟರಿ ಸಿಬ್ಬಂದಿಯನ್ನೇ ಭಾರತ ಕಳುಹಿಸಿದೆ ಎಂಬರ್ಥದಲ್ಲಿ ಅಧ್ಯಕ್ಷರು ಹೇಳಿದ್ದಾರೆ.

ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾ ಜೊತೆ ಹೆಚ್ಚು ಸ್ನೇಹ ಸಂಪಾದನೆ ಮಾಡುತ್ತಿದ್ದಾರೆ. ಮಾಲ್ಡೀವ್ಸ್​ಗೆ ಚೀನಾ ಉಚಿತ ಮಿಲಿಟರಿ ಸಹಾಯ ಮಾಡುವ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಅದರ ಬೆನ್ನಲ್ಲೇ ಮುಯಿಜು ತಮ್ಮ ಭಾರತ ವಿರೋಧಿ ಹೇಳಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಒಂದು ತಿಂಗಳೊಳಗೆ ಕ್ಷಮೆಯಾಚಿಸಿ, ಹಣ ಕಟ್ಟಲು ಸಿದ್ಧರಾಗಿ, ಮೊದಲ ಪತಿಯಿಂದ ಸೀಮಾ ಹೈದರ್​ಗೆ ನೋಟಿಸ್​

ವೈದ್ಯಕೀಯ ಕಾರ್ಯಾಚರಣೆಗೆ ಫ್ಲೈಟ್​ಗಳನ್ನು ನಿರ್ವಹಿಸಲು ಶ್ರೀಲಂಕಾ ಜೊತೆ ಮಾಲ್ಡೀವ್ಸ್ ಒಪ್ಪಂದ ಮಾಡಿಕೊಂಡಿರುವುದೂ ಕೂಡ ಗಮನಾರ್ಹ. ಇವೆಲ್ಲಾ ಬೆಳವಣಿಗೆಯೂ ಭಾರತವನ್ನು ಆದಷ್ಟೂ ದೂರ ಇಡುವ ಮಾಲ್ಡೀವ್ಸ್​ನ ಪ್ರಯತ್ನದ ಭಾಗಗಳೇ ಆಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us