
ಶಿಲ್ಲಾಂಗ್, ಜುಲೈ 02: ಕಳೆದ 2025 ರಲ್ಲಿ ಮೇಘಾಲಯಕ್ಕೆ ಹನಿಮೂನ್(Honeymoon)ಗೆ ಬಂದಿದ್ದ ತನ್ನ ಪತಿ ರಾಜಾ ರಘುವಂಶಿ ಅವರನ್ನು ಸುಪಾರಿ ಕೊಲೆಗಾರರ ನೆರವಿನಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಈ ಭೀಕರ ಹತ್ಯೆಯ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ಮೇಘಾಲಯ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಹಾಗೂ ಮೃತನ ಕುಟುಂಬ ಸುಪ್ರೀಂ ಕೋರ್ಟ್ಗೆ ತುರ್ತು ಮೇಲ್ಮನವಿ ಸಲ್ಲಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರ ದ್ವಿಪೀಠದ ಮುಂದೆ ಗುರುವಾರ ಈ ವಿಷಯ ಪ್ರಸ್ತಾಪವಾಯಿತು. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್ ಆರೋಪಿಗೆ ಜಾಮೀನು ನೀಡುವಲ್ಲಿ ಗಂಭೀರ ತಪ್ಪು ಮಾಡಿದೆ ಎಂದು ವಾದಿಸಿದರು.
ಸೋನಮ್ರನ್ನು ಬಂಧಿಸುವ ಸಮಯದಲ್ಲಿ ಪೊಲೀಸರು ಲಿಖಿತ ಕಾರಣಗಳನ್ನು ಸರಿಯಾಗಿ ಒದಗಿಸಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಜಾಮೀನು ಎತ್ತಿಹಿಡಿದಿದೆ. ಆದರೆ ಅದು ಕೇವಲ ಕಾನೂನು ನಿಬಂಧನೆಯಲ್ಲಿದ್ದ ಒಂದು ಮುದ್ರಣದೋಷ ಅಷ್ಟೇ ಹೊರತು, ದೊಡ್ಡ ತನಿಖಾ ಲೋಪವಲ್ಲ ಎಂದು ಮೆಹ್ತಾ ವಾದಿಸಿದರು.
ಘೋರ ಅಪರಾಧ ಎಸಗಿರುವ ಆರೋಪಿ ಜಾಮೀನಿನ ಮೇಲೆ ಹೊರಗಿದ್ದರೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವಾದಿಸಿ, ತಕ್ಷಣವೇ ಜಾಮೀನು ರದ್ದುಗೊಳಿಸಲು ಕೋರಿದರು. ಈ ಅರ್ಜಿಯನ್ನು ಒಪ್ಪಿದ ಪೀಠವು ಶುಕ್ರವಾರವೇ ತುರ್ತು ವಿಚಾರಣೆಗೆ ಪಟ್ಟಿ ಮಾಡಿದೆ.
ಮತ್ತಷ್ಟು ಓದಿ: ಗಾನವಿ-ಸೂರಜ್ ಪ್ರಕರಣ: ಹನಿಮೂನ್ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು
ರಾಜಾ ಅವರ ಹಿರಿಯ ಸಹೋದರ ವಿಪಿನ್ ರಘುವಂಶಿ ಅವರು ಶಿಲ್ಲಾಂಗ್ ಪೊಲೀಸರು ಮತ್ತು ಮೇಘಾಲಯ ಸರ್ಕಾರದ ತನಿಖಾ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆರೋಪಿ ಸೋನಮ್ ಕಡೆಯ ವಕೀಲರು ಭಾರಿ ಹಣ ಪಡೆದು ಜಾಮೀನು ತರಲು ಶ್ರಮಿಸಿದ್ದಾರೆ. ಆದರೆ ನಮ್ಮ ಪರ ವಕೀಲರಿಗೆ ಆರ್ಥಿಕ ನೆರವು ಸಿಗದ ಕಾರಣ ಅವರು ಹೈಕೋರ್ಟ್ನಲ್ಲಿ ಸರಿಯಾಗಿ ವಾದ ಮಂಡಿಸಲು ಸಾಧ್ಯವಾಗಿಲ್ಲ.
ಇತ್ತೀಚೆಗೆ ಪುಣೆಯಲ್ಲಿ ಸಿಯಾ ಎಂಬಾಕೆ ತನ್ನ ನಿಶ್ಚಿತ ವರ ಕೇತನ್ನನ್ನು ಕೊಂದ ಘಟನೆಯಂತೆ ಇಂದಿನ ಮಹಿಳೆಯರು ಇಂತಹ ಅಪರಾಧ ಮಾಡಲು ಈ ಜಾಮೀನು ಆದೇಶಗಳು ಧೈರ್ಯ ತುಂಬುತ್ತವೆ. ನಮಗೆ ಹೈಕೋರ್ಟ್ ಮೇಲೆ ನಂಬಿಕೆಯಿಲ್ಲ, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಪಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2025 ರ ಮೇ ತಿಂಗಳಲ್ಲಿ ರಾಜಾ ರಘುವಂಶಿ ಮತ್ತು ಸೋನಮ್ ದಂಪತಿ ಹನಿಮೂನ್ಗಾಗಿ ಮೇಘಾಲಯದ ಸೊಹ್ರಾ ವಲಯಕ್ಕೆ ತೆರಳಿದ್ದಾಗ ಮೇ 23 ರಂದು ಹಠಾತ್ತನೆ ನಾಪತ್ತೆಯಾಗಿದ್ದರು. ಸುದೀರ್ಘ ಶೋಧದ ನಂತರ, ಜೂನ್ 2 ರಂದು ಆಳವಾದ ಕಂದಕದಲ್ಲಿ ರಾಜಾ ಅವರ ಕೊಳೆತ ಶವ ಪತ್ತೆಯಾಗಿತ್ತು.
ಪೊಲೀಸರ ತನಿಖೆಯ ವೇಳೆ, ಪತ್ನಿ ಸೋನಮ್ ತನಗಾಗಲಿರುವ ಆರ್ಥಿಕ ಲಾಭ ಹಾಗೂ ಆಸ್ತಿಯ ಆಸೆಗಾಗಿ ಬಾಡಿಗೆ ಹಂತಕರನ್ನು ಬಳಸಿ ಪತಿಯನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿಸಿರುವುದು ಪತ್ತೆಯಾಗಿತ್ತು. ಪ್ರಸ್ತುತ ಈ ಹೈ-ಪ್ರೊಫೈಲ್ ಪ್ರಕರಣದ ಅಂತಿಮ ತೀರ್ಪು ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ