Mekedatu Project: ಮೇಕೆದಾಟು ವಿವಾದ: ತಮಿಳುನಾಡು ಸಿಎಂ ಸ್ಟಾಲಿನ್​ಗೆ ಅನಗತ್ಯ ಪತ್ರ ಬರೆದು ವಿವಾದಕ್ಕೆ‌ ತುಪ್ಪ ಸುರಿದ ಸಿಎಂ ಯಡಿಯೂರಪ್ಪ

| Updated By: guruganesh bhat

Updated on: Jul 05, 2021 | 9:31 PM

ಸುಪ್ರೀಂಕೋರ್ಟ್ ತೀರ್ಪಿನಂತೆ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಈ ಯೋಜನೆಯಿಂದ ತಮಿಳುನಾಡಿಗೆ ನಷ್ಟವೇನು ಇಲ್ಲ. ಗಡಿ ಭಾಗದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಕರ್ನಾಟಕ ಕೃಷಿಗೂ ಬಳಕೆ ಮಾಡಲು ಸಾಧ್ಯವಿಲ್ಲ.

Mekedatu Project: ಮೇಕೆದಾಟು ವಿವಾದ: ತಮಿಳುನಾಡು ಸಿಎಂ ಸ್ಟಾಲಿನ್​ಗೆ ಅನಗತ್ಯ ಪತ್ರ ಬರೆದು ವಿವಾದಕ್ಕೆ‌ ತುಪ್ಪ ಸುರಿದ ಸಿಎಂ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ ಮತ್ತು ಎಂ ಕೆ ಸ್ಟಾಲಿನ್
Follow us on

ಮೇಕೆದಾಟು ಜಲಾಶಯ ನಿರ್ಮಾಣ ವಿವಾದ ಕುರಿತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬರೆದಿರುವ ಪತ್ರದ ಅಗತ್ಯತೆ ಬಗ್ಗೆ ಚರ್ಚೆಯಾಗುತ್ತಿದೆ.‌ ತಮಿಳುನಾಡು ಸಿಎಂಗೆ ಪತ್ರ ಬರೆದು ಕೋಲು ಕೊಟ್ಟು ಹೊಡೆಸಿಕೊಂಡ್ರು ಎನ್ನುವಂತಾಗಿದೆ ಕರ್ನಾಟಕದ ಸ್ಥಿತಿ. ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕಿರುವುದು ರಾಜ್ಯದಲ್ಲಿ, ಆದರೆ ಅನಗತ್ಯವಾಗಿ ತಮಿಳುನಾಡು ಸಿಎಂಗೆ ಪತ್ರ ಬರೆದು ವಿವಾದಕ್ಕೆ ಮತ್ತಷ್ಟು ಇಂಬು ನೀಡುವ ಪ್ರಯತ್ನವಾಗುತ್ತಿದೆ ಎಂದು ಹಿರಿಯ ವಕೀಲರು, ಜಲತಜ್ಞರು, ವಿರೋಧಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ವಿಚಾರದಲ್ಲಿ ಪತ್ರ ಬರೆಯಲು ಸಿಎಂಗೆ ಸಲಹೆ ಕೊಟ್ಟವರ್ಯಾರು ? ಎಂಬ ಚರ್ಚೆ ನಡೆಯುತ್ತಿದೆ.

ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ 23,231 ಚದರ ಕಿ.ಮೀ ಇದೆ.‌ ಕೆ.ಆರ್.ಎಸ್ ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಬೀಳುವ ಮಳೆ ನೀರು ಸಹ ಕಾವೇರಿ ನದಿಗೆ ಸೇರುತ್ತದೆ. ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಪ್ರತಿವರ್ಷ ಬಿಡುಗಡೆಯಾಗುತ್ತದೆ.

ಹೀಗಾಗಿ ಇಂತಹ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟು ಬಳಿ ಶೇಖರಣಾ ಜಲಾಶಯ ನಿರ್ಮಿಸಲು ಕರ್ನಾಟಕ ಚಿಂತಿಸುತ್ತಿದೆ. ಇದರಿಂದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದ ಕೆಳಭಾಗದ ಅನಿಯಂತ್ರಿತ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ. ಆಗ ಮೇಲ್ಭಾಗದ ಜಲಾಶಯಗಳಾದ ಕೆ.ಆರ್.ಎಸ್, ಕಬಿನಿ, ಹೇಮಾವತಿ, ಹಾರಂಗಿಯಿಂದ ಬಿಡಬೇಕಾದ ನೀರನ್ನು ನಿಯಂತ್ರಿಸುವಲ್ಲಿ ಇರುವ ಒತ್ತಡವನ್ನು ಸಹ ಕಡಿಮೆ ಮಾಡಬಹುದಾಗಿದೆ.

ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಇದರಿಂದ ಕೊಳವೆ ಬಾವಿಗಳು ಒಣಗಿಹೋಗಿವೆ. ಸಾವಿರ ಅಡಿ ಆಳದವರೆಗೆ ಕೊರೆದಿರುವ ಕೊಳವೆ ಬಾವಿಗಳಲ್ಲಿನ ನೀರು ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರು ನಗರದ ಜನಸಂಖ್ಯೆಯೂ ಬಹಳ ವೇಗವಾಗಿ ಏರುತ್ತಿದ್ದು, ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಮೇಕೆದಾಟುವಿನ ಬಳಿ ಸುಮಾರು 45 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಅಪ್ಪಣೆ ಅನವಶ್ಯಕ , ಕೇಸ್ ಕೋರ್ಟ್​ನಲ್ಲಿದೆ
ಸುಪ್ರೀಂಕೋರ್ಟ್ ತೀರ್ಪಿನಂತೆ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಈ ಯೋಜನೆಯಿಂದ ತಮಿಳುನಾಡಿಗೆ ನಷ್ಟವೇನು ಇಲ್ಲ. ಗಡಿ ಭಾಗದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಕರ್ನಾಟಕ ಕೃಷಿಗೂ ಬಳಕೆ ಮಾಡಲು ಸಾಧ್ಯವಿಲ್ಲ. ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಬಳಸಿ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ನೀರು ಒದಗಿಸಬಹುದಾಗಿದೆ.

ಮೇಕೆದಾಟು ಯೋಜನೆ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ. ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸರಕಾರ ಅರ್ಜಿ ಸಲ್ಲಿಸಿದೆ. ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವುದರಿಂದ ಎರಡು ರಾಜ್ಯಗಳು ವಾದ ಪ್ರತಿವಾದ ನಡೆಸಬೇಕಾಗುತ್ತದೆ. ಸಿಎಂ‌‌ ಯಡಿಯೂರಪ್ಪನವರು ತಮಿಳುನಾಡು ಸಿಎಂಗೆ ಎಷ್ಟೇ ಪತ್ರ ಬರೆದರೂ ಯಾವುದೇ ಉಪಯೋಗವಿಲ್ಲ. ರಾಜಕೀಯವಾಗಿ ಎರಡು ರಾಜ್ಯಗಳ ಪಕ್ಷಗಳಿಗೆ ಆಹಾರವಾಗಬಹದು ಅಷ್ಟು ಬಿಟ್ಟರೆ ಇನ್ಯಾವುದೆ ಉಪಯೋಗವಿಲ್ಲ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಾಕಷ್ಟು ಪತ್ರ ವ್ಯವಹಾರ ,ಸಂಧಾನಗಳು ನಡೆದಿವೆ. ಯಾವುದೇ ಪತ್ರಗಳಿಂದ ವಿವಾದವನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟ್ ತೀರ್ಪಿನ ಅನುಗುಣವಾಗಿ ಕಾವೇರಿ ನಿರ್ವಹಣಾ ಸಮಿತಿ ರಚನೆಯಾಗಿದೆ. ನೀರು ಹಂಚಿಕೆ ನಿರ್ವಹಣೆಯನ್ನು ಕೇಂದ್ರ ಜಲ ಶಕ್ತಿ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಜಲಸಂಪನ್ಮೂಲ ಸಚಿವಾಲಯ ಕರ್ನಾಟಕದ ಪಾಲಿಗೆ ಅತೀ ಮಹತ್ವದ ಇಲಾಖೆ. ಇಲಾಖೆ ನಡೆಸುವವರಿಗೆ ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ಅನುಭವ,ಬದ್ಧತೆ ಎಲ್ಲವೂ ಮುಖ್ಯ. ಇಂತಹ ಬದ್ಧತೆಯ ಕೊರತೆಯ ಕಾರಣಕ್ಕೆ ಪತ್ರ ಬರೆಯುವಂತಹ ಪ್ರಮಾದಗಳು ನಡೆಯುತ್ತಿವೆ.

ವಿಶೇಷ ವರದಿ: ಹರೀಶ್ ಟಿವಿನೈನ್ ನವದೆಹಲಿ

ಇದನ್ನೂ ಓದಿ: 

ಮೇಕೆದಾಟು ಯೋಜನೆಯನ್ನು ಮುಂದುವರಿಸಬೇಡಿ: ಬಿ ಎಸ್ ಯಡಿಯೂರಪ್ಪ ಪತ್ರಕ್ಕೆ ಎಂ ಕೆ ಸ್ಟಾಲಿನ್ ಪ್ರತ್ಯುತ್ತರ

ಮೇಕೆದಾಟು ಯೋಜನೆಗೆ ಅಡ್ಡಿ ಬೇಡ; ತಮಿಳುನಾಡು ಸಿಎಂ ಸ್ಟಾಲಿನ್​ಗೆ ಪತ್ರ ಬರೆದ ಮುಖ್ಯಮಂತ್ರಿ ಯಡಿಯೂರಪ್ಪ

(Mekedatu Project Karnataka CM Yediyurappa writes unwanted letter to Tamil Nadu CM Stalin)