ವಧು ನಕಲಿ ಆದ್ರೆ ದ್ರೋಹ ಮಾತ್ರ ನಿಜ, 42 ಕುಟುಂಬಗಳಿಗೆ ದ್ರೋಹ ಬಗೆದ ಮಹಿಳೆಯರು

ಮಧ್ಯಪ್ರದೇಶದಲ್ಲಿ ಮದುವೆಯ ಹೆಸರಿನಲ್ಲಿ 42 ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ದೊಡ್ಡ ಹಗರಣ ಬಯಲಾಗಿದೆ. ನಕಲಿ ವಧುಗಳ ಫೋಟೋ ತೋರಿಸಿ, ದೇವಾಸ್‌ನಲ್ಲಿ ಮದುವೆ ಮಾಡಿಸುವುದಾಗಿ ನಂಬಿಸಿ ಪ್ರತಿ ಕುಟುಂಬದಿಂದ 12-25 ಸಾವಿರ ರೂ. ಸಂಗ್ರಹಿಸಿದ್ದರು. ಮದುವೆ ಮಂಟಪಕ್ಕೆ ವಧುಗಳು ಬರದಿದ್ದಾಗ ವಂಚನೆ ಬಯಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ವಧು ನಕಲಿ ಆದ್ರೆ ದ್ರೋಹ ಮಾತ್ರ ನಿಜ, 42 ಕುಟುಂಬಗಳಿಗೆ ದ್ರೋಹ ಬಗೆದ ಮಹಿಳೆಯರು
ಮದುವೆ
Image Credit source: Context

Updated on: May 26, 2026 | 2:48 PM

ಭೋಪಾಲ್, ಮೇ 26: ಮದುವೆ(Marriage) ಎಂಬ ಪವಿತ್ರ ಬಂಧನವನ್ನೇ ಬಂಡವಾಳ ಮಾಡಿಕೊಂಡು ಅಮಾಯಕರ ಭಾವನೆಗಳೊಂದಿಗೆ ಆಟವಾಡಿದ ವಂಚಕ ಚಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮದುವೆ ಹೆಸರಿನಲ್ಲಿ 42 ಕುಟುಂಬಗಳಿಗೆ ಮಹಿಳೆಯರು ಮೋಸ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ.
ಮಧ್ಯಪ್ರದೇಶದ ವಿವಿಧ ಜಿಲ್ಲೆಗಳ ಬರೋಬ್ಬರಿ 42 ಟುಂಬಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಮದುವೆಯ ದಿರಿಸು ಧರಿಸಿ ಸಂಭ್ರಮದಿಂದ ಮಂಟಪಕ್ಕೆ ಬಂದ ವರರು ಕಾಯುತ್ತಲೇ ನಿಂತರೂ, ವಧುಗಳು ಮಾತ್ರ ಬರಲೇ ಇಲ್ಲ, ವು ಮೋಸ ಹೋಗಿರುವುದನ್ನು ಅರಿತ ಕುಟುಂಬಗಳು ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿವೆ.

ಭಾವನೆಗಳೊಂದಿಗೆ ಚೆಲ್ಲಾಟ: ವಂಚಕರ ಪಕ್ಕಾ ಸ್ಕೆಚ್
ಆರೋಪಿಗಳು ಸೂಕ್ತ ವಧುಗಳನ್ನು ಹುಡುಕಲು ಕಷ್ಟಪಡುತ್ತಿದ್ದ ಗಂಡು ಮಕ್ಕಳ ಕುಟುಂಬಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದ್ದರು. ಅವರ ಭಾವನಾತ್ಮಕ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡ ಖದೀಮರು, ಸಾಮಾಜಿಕ ಮಾಧ್ಯಮಗಳಿಂದ (Social Media) ಡೌನ್‌ಲೋಡ್ ಮಾಡಿದ ಸುಂದರ ಯುವತಿಯರು ಹಾಗೂ ಮಾಡೆಲ್‌ಗಳ  ಫೋಟೊಗಳನ್ನು ಮೊಬೈಲ್‌ನಲ್ಲಿ ತೋರಿಸಿ ನಂಬಿಸಿದ್ದರು.

ಈ ಹುಡುಗಿಯರೆಲ್ಲಾ ಇಂದೋರ್‌ನ ಅನಾಥಾಶ್ರಮದವರಾಗಿದ್ದು, ಇವರೊಂದಿಗೆ ಸರಿಯಾದ ವ್ಯವಸ್ಥೆಗಳ ಮೂಲಕ ಮೇ 25 ರಂದು ದೇವಾಸ್‌ನಲ್ಲಿ ಮದುವೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಪ್ರತಿ ಕುಟುಂಬದಿಂದ 12,000 ರೂ. ನಿಂದ ಹಿಡಿದು 25,000 ರೂ. ವರೆಗೆ ಹಣ ವಸೂಲಿ ಮಾಡಿದ್ದರು. ಒಟ್ಟಾರೆ ಈ ಜಾಲವು 10 ಲಕ್ಷಕ್ಕೂ ಅಧಿಕ ಮೊತ್ತವನ್ನು ಲೂಟಿ ಮಾಡಿದೆ ಎಂದು ಅಂದಾಜಿಸಲಾಗಿದೆ.

ಸಂಘಟಕರ ಸೂಚನೆಯಂತೆ ಮೇ 24 ರಂದು ಮುಂಜಾನೆ 8 ಗಂಟೆಯಿಂದಲೇ ಹಲವಾರು ಜಿಲ್ಲೆಗಳಿಂದ ವರರು ಮತ್ತು ಅವರ ಸಂಬಂಧಿಕರು ಅತ್ಯಂತ ಸಂಭ್ರಮದಿಂದ ಸಿದ್ಧರಾಗಿ ದೇವಾಸ್‌ನ ರಾಧಾಗಂಜ್‌ನಲ್ಲಿರುವ ಕ್ಲಬ್ ಮೈದಾನಕ್ಕೆ ತಲುಪಿದ್ದರು. ಆದರೆ ಅಲ್ಲಿಗೆ ಹೋದಾಗ ಅವರಿಗೆ ಕಾದಿದ್ದು ಭಾರಿ ಆಘಾತ, ಅಲ್ಲಿ ಯಾವುದೇ ವಿವಾಹ ಮಂಟಪವಾಗಲಿ, ಮದುವೆಯ ಸಿದ್ಧತೆಯಾಗಲಿ ಇರಲಿಲ್ಲ. ಮುಖ್ಯವಾಗಿ ಮದುವೆಯಾಗಬೇಕಾದ ವಧುಗಳ ಸುಳಿವೇ ಇರಲಿಲ್ಲ.

ಮತ್ತಷ್ಟು ಓದಿ: ಗಂಡ ವಿದೇಶದಲ್ಲಿ, ಪತ್ನಿ ಪ್ರಿಯಕರನ ತೋಳಿನಲ್ಲಿ, ಇಬ್ಬರಿಗೂ ಮದುವೆ ಮಾಡಿಸಿದ ಅತ್ತೆ-ಮಾವ

ಅಲ್ಲಿ ಸಿಕ್ಕ ಸಂಘಟಕರಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನೀತಾ, ವಧುಗಳು ಇಂದೋರ್‌ನಿಂದ ಹೊರಟಿದ್ದಾರೆ, ದಾರಿಯಲ್ಲಿದ್ದಾರೆ ಎಂದು ಮುಂಜಾನೆಯಿಂದ ರಾತ್ರಿಯವರೆಗೆ ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡಿದ್ದಾರೆ. ರಾತ್ರಿ 10 ಗಂಟೆಯಾದರೂ ಯಾರೂ ಬರದಿದ್ದಾಗ ತಾವು ಸಂಪೂರ್ಣವಾಗಿ ಮೋಸ ಹೋಗಿರುವುದು ವರನ ಕಡೆಯವರಿಗೆ ಸ್ಪಷ್ಟವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೈವೀರ್ ಭಡೋರಿಯಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಕಟಾರೆ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ವಂಚನೆಗೆ ಒಳಗಾದ ಅಭಿಷೇಕ್ ಎಂಬುವವರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಗಳಾದ ಮುಖೇಶ್ ಬೈರಾಗಿ ಮತ್ತು ಆತನ ಪತ್ನಿ ಸುನೀತಾ ಬೈರಾಗಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುಖೇಶ್, ಇಂದೋರ್‌ನಲ್ಲಿರುವ ತನ್ನ ಅಣ್ಣ ದಿನೇಶ್ ದಾಸ್ ಬೈರಾಗಿ ಹುಡುಗಿಯರ ಫೋಟೋ ಮತ್ತು ಫೋನ್ ನಂಬರ್ ನೀಡಿದ್ದಾಗಿ ಹಾಗೂ ಮಾವ ನರಸಿಂಗ್ ದಾಸ್ ಬೈರಾಗಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ಲಾನ್ ಉಲ್ಟಾ ಹೊಡೆಯುತ್ತಿದ್ದಂತೆ ದಿನೇಶ್ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

ಸೊಸೆಯಂದಿರನ್ನು ಮನೆಗೆ ಕರೆದೊಯ್ಯುವ ಭಾರಿ ಆಶಯದೊಂದಿಗೆ ಮದುವೆಯ ಬಟ್ಟೆ ಧರಿಸಿ ಬಂದಿದ್ದ 42 ಕುಟುಂಬಗಳ ಆಸೆಗಳು ಕ್ಷಣಾರ್ಧದಲ್ಲಿ ನುಚ್ಚುನೂರಾಗಿವೆ. ಅವರ ದಿನವು ಮಂಗಳ ವಾದ್ಯಗಳೊಂದಿಗೆ ಮುಕ್ತಾಯವಾಗುವ ಬದಲಿಗೆ ಪೊಲೀಸ್ ಠಾಣೆಯ ದೂರುಗಳೊಂದಿಗೆ ಕೊನೆಗೊಂಡಿದೆ. ಸದ್ಯ ತಲೆಮರೆಸಿಕೊಂಡಿರುವ ದಿನೇಶ್ ಮತ್ತು ನರಸಿಂಗ್ ದಾಸ್ ಪತ್ತೆಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದು, ಆರೋಪಿಗಳ ಪತ್ತೆಗೆ ವಿದಿಶಾ ಜಿಲ್ಲೆಗೆ ವಿಶೇಷ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:48 pm, Tue, 26 May 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us