Parliament Winter Session: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಶ್ಮೀರ, ಸಿಎಎ, ಎನ್ಆರ್‌ಸಿ ಬಗ್ಗೆ ಸಂಸದರಿಂದ ಪ್ರಶ್ನೆಗಳ ಸುರಿಮಳೆ

TV9 Digital Desk

| Edited By: Ayesha Banu

Updated on: Nov 30, 2021 | 2:36 PM

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೇ, ಈ ಪ್ರಶ್ನೆಗಳ ಪೈಕಿ ಜಮ್ಮು ಕಾಶ್ಮೀರ, ಪೌರತ್ವ ತಿದ್ದುಪಡಿ ಕಾಯಿದೆ, ಹಾಗೂ ನಾಗರಿಕರ ರಾಷ್ಟ್ರೀಯ ನೋಂದಾಣಿಗೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿವೆ.

Parliament Winter Session: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಶ್ಮೀರ, ಸಿಎಎ, ಎನ್ಆರ್‌ಸಿ ಬಗ್ಗೆ ಸಂಸದರಿಂದ ಪ್ರಶ್ನೆಗಳ ಸುರಿಮಳೆ
ಚಳಿಗಾಲದ ಅಧಿವೇಶನ (ಕೃಪೆ ಸಂಸತ್ ಟಿವಿ)

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೇ, ಈ ಭಾರಿ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ಸಿಎಎ ಹಾಗೂ ಎನ್‌ಆರ್‌ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೇ, ಈ ಪ್ರಶ್ನೆಗಳ ಪೈಕಿ ಜಮ್ಮು ಕಾಶ್ಮೀರ, ಪೌರತ್ವ ತಿದ್ದುಪಡಿ ಕಾಯಿದೆ, ಹಾಗೂ ನಾಗರಿಕರ ರಾಷ್ಟ್ರೀಯ ನೋಂದಾಣಿಗೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚಾಗಿವೆ. ಈ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು ಎಂದು ತಿಳಿದುಕೊಳ್ಳಲು ನಮ್ಮ ದೇಶದ ಸಂಸದರಿಗೆ ಹೆಚ್ಚಿನ ಕುತೂಹಲ ಇರುವುದು ಇದರಿಂದ ಸ್ಪಷ್ಟವಾಗಿದೆ. ಸಂಸದರ ಈ ಪ್ರಶ್ನೆಗಳಿಗೆ ಈಗ ಕೇಂದ್ರ ಗೃಹ ಸಚಿವಾಲಯವು ಉತ್ತರ ನೀಡುತ್ತಿದೆ.

ಸಂಸತ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಅಂಗೀಕಾರವಾಗಿದೆ. ಆದರೇ, ದೇಶದಲ್ಲಿ ಇನ್ನೂ ಜಾರಿಯಾಗಿಲ್ಲ. ಸಿಎಎ ಜಾರಿಗೆ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸಿ ಅಧಿಕೃತವಾಗಿ ಇನ್ನೂ ಜಾರಿಗೊಳಿಸಿಲ್ಲ. ಹೀಗಾಗಿ ಸಿಎಎ ಯಾವಾಗ ಜಾರಿಯಾಗುತ್ತೆ, ಏನು ಎಂಬುದನ್ನು ತಿಳಿದುಕೊಳ್ಳಲು ಸಂಸದರಿಗೆ ಹೆಚ್ಚಿನ ಕುತೂಹಲ ಇದೆ. ಪೌರತ್ವ ತಿದ್ದುಪಡಿ ಕಾಯಿದೆಗೆ ಕೆಲವರ ವಿರೋಧ ಕೂಡ ಇದೆ. ಇದೊಂದು ವಿವಾದಾತ್ಮಕ ಕಾಯಿದೆ ಕೂಡ ಹೌದು. ಕೇಂದ್ರ ಸರ್ಕಾರ ಜನರ ಅನುಮಾನಗಳನ್ನು ಬಗೆಹರಿಸಲು ಯತ್ನಿಸಿದರೂ, ಯಶಸ್ಸು ಕಂಡಿಲ್ಲ. ಹೀಗಾಗಿ ಸಿಎಎ ಬಗ್ಗೆಯೇ ಸಂಸದರು ಈಗ ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿವಿಧ ಸಂಸದರಿಂದ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಲಾಗಿದೆ. ಗೃಹ ಸಚಿವಾಲಯವು ಪ್ರತಿ ವಾರ ವಿವಿಧ ವಿಷಯಗಳ ಕುರಿತು 75-100 ಪ್ರಶ್ನೆಗಳ ಉತ್ತರಗಳನ್ನು ಸಿದ್ಧಪಡಿಸುತ್ತಿದೆ. ಸಂಸತ್ ಸದಸ್ಯರು ಭಯೋತ್ಪಾದನಾ ಚಟುವಟಿಕೆಗಳ ಹೊರತಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಸುಳುವಿಕೆ, ಭಯೋತ್ಪಾದಕರು, ನಾಗರಿಕರ ಹತ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ, ವಿವಿಧ ವ್ಯಕ್ತಿಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೆ ವಿಧಿಸಲಾದ ಯುಎಪಿಎ ಮತ್ತು ಪಿಎಸ್ಎ ಕುರಿತು ಪ್ರಶ್ನೆಗಳಿವೆ. ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿನ ಡ್ರೋನ್ ಚಟುವಟಿಕೆಗಳು, ರಾಜ್ಯದಲ್ಲಿ ಅಲ್ಪಸಂಖ್ಯಾತರು ಮತ್ತು ಕಾಶ್ಮೀರದಲ್ಲಿ ಪೂರ್ವಜರ ಆಸ್ತಿಗಳ ಮರುಸ್ಥಾಪನೆ ಇತರ ವಿಷಯಗಳಾಗಿದ್ದು, ಗೃಹ ವ್ಯವಹಾರಗಳ ಸಚಿವಾಲಯವು ಉತ್ತರಿಸಲಿದೆ.

ಅಂತೆಯೇ, ಹೆಚ್ಚಿನ ಪ್ರಶ್ನೆಗಳನ್ನು ಹೊಂದಿರುವ ಮತ್ತೊಂದು ಸಮಸ್ಯೆ ಸಿಎಎ ಮತ್ತು ಎನ್‌ಆರ್‌ಸಿ. ಸಂಸತ್‌ ಸದಸ್ಯರು ಸಿಎಎ ಅನುಷ್ಠಾನದ ದಿನಾಂಕವನ್ನು ತಿಳಿಯಲು ಬಯಸಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್‌ಸಿಯ ಬಯೋಮೆಟ್ರಿಕ್ ವಿವರಗಳು ಮತ್ತು ಎನ್‌ಆರ್‌ಸಿ ಮತ್ತು ಸಿಎಎ ಅನುಷ್ಠಾನಕ್ಕೆ ಮಂಗಳವಾರ ಮತ್ತು ಬುಧವಾರ ಉತ್ತರಗಳು ಸಿಗಲಿವೆ.

ಈ ವಾರ ಸಂಸತ್ತಿನ ಸುಮಾರು ಐದು ಸದಸ್ಯರು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಪಂಜಾಬ್‌, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಎಸ್‌ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಬಹುಪಾಲು ಪ್ರಶ್ನೆಗಳು ‘ನಕ್ಷತ್ರ ಪ್ರಶ್ನೆಗಳು’. ಇವುಗಳಿಗೆ ಸಂಸತ್ತಿನಲ್ಲಿ ಗೃಹ ಸಚಿವರು ಅಥವಾ ಗೃಹ ಖಾತೆ ರಾಜ್ಯ ಸಚಿವರು ಉತ್ತರಿಸುವರು. ಇತರ ವಿಷಯಗಳೆಂದರೆ ಮಹಿಳೆಯರ ವಿರುದ್ಧದ ಅಪರಾಧಗಳು, ದೆಹಲಿಯಲ್ಲಿನ ಅಪರಾಧಗಳು, ಪತ್ರಕರ್ತರ ವಿರುದ್ಧದ ಅಪರಾಧಗಳು, ನಕ್ಸಲರು, ನಿರ್ಭಯಾ ನಿಧಿ, ಹಾಗೆಯೇ ಸಂಸದರೊಬ್ಬರು ರಾಮಮಂದಿರ ಟ್ರಸ್ಟ್ ನಲ್ಲಿ ಟಾಟಾ ಕನ್ಸಲ್ಟೆನ್ಸಿ ಕಂಪನಿಯು ಸಹಭಾಗಿ ಆಗಿರುವ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ.

ವರದಿ: ಚಂದ್ರಮೋಹನ್, ಟಿವಿ9 ನ್ಯಾಷನಲ್ ಬ್ಯೂರೋ

ಇದನ್ನೂ ಓದಿ: All-Party Meet: ನಾಳೆಯಿಂದ ಸಂಸತ್ತಿನ ಚಳಿಗಾಲದ ಅಧಿವೇಶನ; ಇಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada