ಸಂತ್ರಸ್ತೆಯ ಕುಟುಂಬಕ್ಕೆ ನಾನು ಎಂದೂ ಹಣ ನೀಡಿಲ್ಲ, ಇದು ಅಪಪ್ರಚಾರ: ಮಮತಾ ಬ್ಯಾನರ್ಜಿ

|

Updated on: Sep 09, 2024 | 3:07 PM

"ಆರ್‌ಜಿ ಕರ್ ಪ್ರತಿಭಟನೆಯ ನಂತರ ಕೋಲ್ಕತ್ತಾ ಸಿಪಿ ವಿನೀತ್ ಗೋಯಲ್ ರಾಜೀನಾಮೆ ನೀಡಲು ಮುಂದಾದರು. ಆದರೆ ದುರ್ಗಾ ಪೂಜೆಗೆ ಮುಂಚಿತವಾಗಿ ಕಾನೂನು ಮತ್ತು ಸುವ್ಯವಸ್ಥೆ ತಿಳಿದಿರುವ ಯಾರಾದರೂ ನಮಗೆ ಬೇಕು ಎಂದಿದ್ದೆ" ಎಂದು ವೈದ್ಯರ ಪ್ರತಿಭಟನೆಯ ನಡುವೆಯೇ ಪಶ್ಟಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬಕ್ಕೆ ನಾನು ಎಂದೂ ಹಣ ನೀಡಿಲ್ಲ, ಇದು ಅಪಪ್ರಚಾರ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ ಸೆಪ್ಟೆಂಬರ್ 09:  ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆಯ ನಡುವೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ (Vineet Goyal) ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೋಮವಾರ ಹೇಳಿದ್ದಾರೆ.  “ಆರ್‌ಜಿ ಕರ್ ಪ್ರತಿಭಟನೆಯ ನಂತರ ಕೋಲ್ಕತ್ತಾ ಸಿಪಿ ವಿನೀತ್ ಗೋಯಲ್ ರಾಜೀನಾಮೆ ನೀಡಲು ಮುಂದಾದರು. ಆದರೆ ದುರ್ಗಾ ಪೂಜೆಗೆ ಮುಂಚಿತವಾಗಿ ಕಾನೂನು ಮತ್ತು ಸುವ್ಯವಸ್ಥೆ ತಿಳಿದಿರುವ ಯಾರಾದರೂ ನಮಗೆ ಬೇಕು ಎಂದಿದ್ದೆ” ಎಂದು ಸಿಎಂ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಸಂತ್ರಸ್ತೆಯ ಕುಟುಂಬಕ್ಕೆ ನಾನು ಎಂದೂ ಹಣ ನೀಡಿಲ್ಲ. “ಇದು ಅಪಪ್ರಚಾರವಲ್ಲದೆ ಬೇರೇನೂ ಅಲ್ಲ” ಎಂದು ಮಮತಾ ಹೇಳಿದ್ದಾರೆ.

“ಮೃತ ವೈದ್ಯನ ಪೋಷಕರಿಗೆ ನಾನು ಹೇಳಿದ್ದೇನೆ, ಅವರು ತಮ್ಮ ಮಗಳ ನೆನಪಿಗಾಗಿ ಏನಾದರೂ ಮಾಡಲು ಬಯಸಿದರೆ, ನಮ್ಮ ಸರ್ಕಾರ ಅವರೊಂದಿಗೆ ಇರುತ್ತದೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಕೇಂದ್ರ, ಎಡಪಕ್ಷಗಳ ಪಿತೂರಿ

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಎಡಪಕ್ಷಗಳನ್ನು ದೂಷಿಸಿದ ಮಮತಾ, “ನಾವು ಸಿಐಎಸ್‌ಎಫ್‌ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದ್ದೇವೆ. ಇದೆಲ್ಲವೂ ಕೇಂದ್ರ ಸರ್ಕಾರ ಮತ್ತು ಕೆಲವು ಎಡಪಂಥೀಯ ಪಕ್ಷಗಳು ರೂಪಿಸಿದ ಪಿತೂರಿ. ಅವರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನಾವು ಯಾವುದಕ್ಕೂ ನಿಮ್ಮನ್ನು ತಡೆಯುವುದಿಲ್ಲ.

ದಿನವೂ ರಸ್ತೆಯಲ್ಲಿ ಜಮಾಯಿಸಿದರೆ ಜನ ಸಮಸ್ಯೆ ಎದುರಿಸುತ್ತಾರೆ, ಹಲವು ಮನೆಗಳಲ್ಲಿ ವಯಸ್ಸಾದವರಿದ್ದಾರೆ, ಮೈಕ್ ನಿಂದಾಗಿ ಮಲಗಲು ತೊಂದರೆಯಾಗುತ್ತದೆ ಎಂಬಂತಹ ಹಲವು ನಿಯಮಗಳಿವೆ. ಅದಕ್ಕಾಗಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳಿವೆ. ರಾತ್ರಿ 10 ಗಂಟೆಯ ನಂತರ ಮೈಕ್‌ಗಳನ್ನು ಪ್ಲೇ ಮಾಡಬಾರದು ಅಥವಾ ನಿರ್ದಿಷ್ಟ ಮಿತಿಯನ್ನು ಮೀರಿ ಶಬ್ದ ಮಾಡಬಾರದು ಎಂದು ಮಮತಾ ಹೇಳಿದ್ದಾರೆ.

“ಆದರೆ ಕಳೆದ 1 ತಿಂಗಳಿಂದ ನಾವು ಇದನ್ನೆಲ್ಲ ನಿಲ್ಲಿಸಿದ್ದೇವೆ. ಈಗ ಎಲ್ಲ ಪ್ರತಿಭಟನಾಕಾರರು ತಮ್ಮ ಕೆಲಸಕ್ಕೆ ಮರಳಬೇಕು, ಈಗ ದುರ್ಗಾಪೂಜೆಗೆ ಬನ್ನಿ ಎಂದು ನಾವು ವಿನಂತಿಸುತ್ತೇವೆ. ವಿಷಯವು ನಮ್ಮ ಕೈಯಲ್ಲಿಲ್ಲ ಆದರೆ ಸಿಬಿಐ ಕೈಯಲ್ಲಿದೆ” ಎಂದು ಸಿಎಂ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: Kolkata rape-murder case: ನಾಳೆ ಸಂಜೆ 5 ಗಂಟೆಯೊಳಗೆ ಕೆಲಸಕ್ಕೆ ಮರಳಲು ಪ್ರತಿಭಟನಾನಿರತ ವೈದ್ಯರಿಗೆ ಸುಪ್ರೀಂ ಸೂಚನೆ, ಶಿಸ್ತು ಕ್ರಮದ ಎಚ್ಚರಿಕೆ

ನಾಳೆ ಸಂಜೆ 5 ಗಂಟೆಯೊಳಗೆ ವೈದ್ಯರು ಕೆಲಸಕ್ಕೆ ಹಿಂತಿರುಗಿದ ನಂತರ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದುಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ. ಆದಾಗ್ಯೂ, ಅವರು ಹಾಗೆ ಮಾಡಲು ವಿಫಲವಾದರೆ, ನ್ಯಾಯಾಲಯವು ರಾಜ್ಯ ಸರ್ಕಾರವನ್ನು ನಿರ್ಬಂಧಿಸಲು ಸಾಧ್ಯವಾಗುವುದಿಲ್ಲ ಮತ್ತು ಕೆಲಸಕ್ಕೆ ಗೈರುಹಾಜರಾಗುವುದು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು ಎಂದು ಸಿಜೆಐ  ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Mon, 9 September 24