ಹೆದ್ದಾರಿ ಕಾಮಗಾರಿ ವಿಳಂಬ ನೋಡಿ ನನಗೆ ನಾಚಿಕೆಯಾಗ್ತಿದೆ, ಉದ್ಘಾಟನೆಗೆ ಬರಲ್ಲ: ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ಬಗ್ಗೆ ನಿತಿನ್ ಗಡ್ಕರಿ ಗರಂ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ (NH-66) ಕಾಮಗಾರಿ ದಶಕಗಳಿಂದ ವಿಳಂಬವಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಉದ್ಘಾಟನೆಗೆ ಬರುವುದಿಲ್ಲ ಎಂದು ಘೋಷಿಸಿ, ವಿಳಂಬಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ಬ್ಲಾಕ್‌ಲಿಸ್ಟ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹೆದ್ದಾರಿ ಕರ್ನಾಟಕ ಕರಾವಳಿಗೂ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣ ಅವಧಿ ಕಡಿತಗೊಳಿಸಲಿದೆ. ಗಡ್ಕರಿ ಅವರ ಈ ನಡೆ ರಾಜಕೀಯ ಧೈರ್ಯಕ್ಕೆ ಸಾಕ್ಷಿಯಾಗಿದೆ.

ಹೆದ್ದಾರಿ ಕಾಮಗಾರಿ ವಿಳಂಬ ನೋಡಿ ನನಗೆ ನಾಚಿಕೆಯಾಗ್ತಿದೆ, ಉದ್ಘಾಟನೆಗೆ ಬರಲ್ಲ: ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ಬಗ್ಗೆ ನಿತಿನ್ ಗಡ್ಕರಿ ಗರಂ
ನಿತಿನ್ ಗಡ್ಕರಿ
Image Credit source: NDTV

Updated on: Sep 10, 2026 | 1:30 PM

ನವದೆಹಲಿ, ಸೆಪ್ಟೆಂಬರ್ 10: ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ (NH-66) ಚತುಷ್ಪಥ ಕಾಮಗಾರಿ ದಶಕಗಳಿಂದ ಕುಂಟುತ್ತಾ ಸಾಗುತ್ತಿರುವುದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಯೋಜನೆಯ ಅತಿಯಾದ ವಿಳಂಬ ನೋಡಿದರೆ ನನಗೆ ನಾಚಿಕೆಯಾಗುತ್ತದೆ, ಆದ್ದರಿಂದ ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಖಂಡಿತ ಬರುವುದಿಲ್ಲ” ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಸಚಿವರೊಬ್ಬರು ತಮ್ಮದೇ ಇಲಾಖೆಯ ಯೋಜನೆಯ ವಿಳಂಬವನ್ನು ಒಪ್ಪಿಕೊಂಡು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಹೇಳಿರುವುದು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅಕ್ಟೋಬರ್‌ನಲ್ಲಿ ರಸ್ತೆ ಮೂಲಕವೇ ತಪಾಸಣೆ: ಪಣಜಿ ಸಮೀಪದ ಪೋರ್ವೊರಿಮ್‌ನಲ್ಲಿ ಆರು ಪಥಗಳ ಎಲಿವೇಟೆಡ್ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ಅಕ್ಟೋಬರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಿಂದ ಗೋವಾಕ್ಕೆ ರಸ್ತೆ ಮಾರ್ಗವಾಗಿಯೇ ಪ್ರಯಾಣಿಸಿ, ಹೆದ್ದಾರಿಯ ಪ್ರತಿ ಹಂತದ ಗುಣಮಟ್ಟ ಹಾಗೂ ಪ್ರಯಾಣಿಕರ ಅನುಕೂಲವನ್ನು ಖುದ್ದು ಪರಿಶೀಲಿಸುವುದಾಗಿ ತಿಳಿಸಿದರು.

ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತು ಮಾಡುವ ವಿಷಯದಲ್ಲಿ ಈ ವರ್ಷ ನಾನೇ ಹೊಸ ದಾಖಲೆ ಬರೆಯಲಿದ್ದೇನೆ” ಎಂದು ಗಡ್ಕರಿ ಗುಡುಗಿದ್ದಾರೆ.

ಮತ್ತಷ್ಟು ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು

ದಶಕದ ವಿಳಂಬಕ್ಕೆ ಕಾರಣಗಳು: 2011ರಲ್ಲಿ ಆರಂಭವಾದ ಈ ಯೋಜನೆ 2015ರಲ್ಲೇ ಮುಗಿಯಬೇಕಿತ್ತು. ಆದರೆ ಕೊಂಕಣ ಭಾಗದ ಕಡಿದಾದ ಬೆಟ್ಟ ಪ್ರದೇಶ, ಭೂಸ್ವಾಧೀನದ ಕಾನೂನು ಜಟಾಪಟಿ, ಗುತ್ತಿಗೆದಾರರ ದಿವಾಳಿತನ, ಮಳೆಗಾಲದಲ್ಲಿ ಭೂಕುಸಿತ ಹಾಗೂ ಅರಣ್ಯ ಇಲಾಖೆಯ ಅನುಮತಿ ವಿಳಂಬವೇ ಯೋಜನೆ ನನೆಗುದಿಗೆ ಬೀಳಲು ಪ್ರಮುಖ ಕಾರಣಗಳಾಗಿವೆ.

ವಿಡಿಯೋ

ಮುಂಬೈ-ಗೋವಾ-ಮಂಗಳೂರು ಸಂಪರ್ಕ: ಈ ಎನ್‌ಎಚ್-66 (NH-66) ಕೇವಲ ಮುಂಬೈ ಮತ್ತು ಗೋವಾ ನಡುವಿನ ಸಂಪರ್ಕವಲ್ಲ. ಇದು ಮುಂದೆ ಕರ್ನಾಟಕದ ಕಾರವಾರ, ಕುಮಟಾ, ಭಟ್ಕಳ, ಉಡುಪಿ ಮಾರ್ಗವಾಗಿ ಮಂಗಳೂರು ಹಾಗೂ ಕೇರಳಕ್ಕೂ ಸಂಪರ್ಕ ಕಲ್ಪಿಸುವ ಪ್ರಮುಖ ಕರಾವಳಿ ಆರ್ಥಿಕ ಕಾರಿಡಾರ್ ಆಗಿದೆ. ಮುಂಬೈ-ಗೋವಾ ಭಾಗ ಪೂರ್ಣಗೊಂಡರೆ ಕರ್ನಾಟಕ ಕರಾವಳಿಯ ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಭಾರಿ ಅನುಕೂಲವಾಗಲಿದೆ.

ಪ್ರಯಾಣದ ಅವಧಿ ಕಡಿತ: ಸದ್ಯ ಮುಂಬೈನಿಂದ ಗೋವಾ ತಲುಪಲು ರಸ್ತೆ ಮಾರ್ಗದಲ್ಲಿ 11 ರಿಂದ 13 ಗಂಟೆ ಬೇಕಾಗುತ್ತಿದೆ. ಈ ಹೆದ್ದಾರಿ ಅಗಲೀಕರಣ ಸಂಪೂರ್ಣ ಮುಗಿದರೆ ಪ್ರಯಾಣದ ಅವಧಿ ಕೇವಲ 6ರಿಂದ 7 ಗಂಟೆಗೆ ಇಳಿಕೆಯಾಗಲಿದೆ.

ಅಪರೂಪದ ರಾಜಕೀಯ ಧೈರ್ಯ: ಯೋಜನೆಗಳು ವರ್ಷಗಟ್ಟಲೆ ವಿಳಂಬವಾದರೂ ರಿಬ್ಬನ್ ಕತ್ತರಿಸಲು ಮುಗಿಬೀಳುವ ರಾಜಕಾರಣಿಗಳ ನಡುವೆ, ಸಾರ್ವಜನಿಕರ ತೆರಿಗೆ ಹಣ ಹಾಗೂ ಸಮಯ ಪೋಲಾಗಿರುವುದಕ್ಕೆ ಆತ್ಮಾವಲೋಕನ ಮಾಡಿಕೊಂಡು ಉದ್ಘಾಟನೆಯಿಂದ ಹಿಂದೆ ಸರಿದಿರುವುದು ಗಡ್ಕರಿಯವರ ಕಾರ್ಯವೈಖರಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:29 pm, Thu, 10 September 26

Loading...
Unable to load recommendations.
Follow Us