ರಾಜಸ್ಥಾನ ಸರ್ಕಾರದಲ್ಲಿ ವಿದೇಶಿ ಪ್ರಯಾಣಕ್ಕೆ ಅವಕಾಶವಿಲ್ಲ, ಇವಿ ಅಳವಡಿಕೆಗೆ ಆದೇಶ

ವೆಚ್ಚ ಕಡಿಮೆಗೊಳಿಸುವ ಉದ್ದೇಶದಿಂದ ರಾಜಸ್ಥಾನ ಸರ್ಕಾರವು ಮಂತ್ರಿಗಳು, ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಸರ್ಕಾರಿ ಅನುದಾನಿತ ವಿದೇಶ ಪ್ರಯಾಣದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಇಲಾಖೆಗಳಿಗೆ ಎಲೆಕ್ಟ್ರಿಕ್ ವಾಹನಗಳು, ಡಿಜಿಟಲ್ ಆಡಳಿತ ಕ್ರಮಗಳು ಮತ್ತು ವೆಚ್ಚ ಕಡಿತಗಳನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಸಾರ್ವಜನಿಕ ವೆಚ್ಚದಲ್ಲಿ ಸಂಪನ್ಮೂಲಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳಲು ಇಲಾಖೆಗಳಿಗೆ ಸೂಚಿಸಲಾಗಿದೆ.

ರಾಜಸ್ಥಾನ ಸರ್ಕಾರದಲ್ಲಿ ವಿದೇಶಿ ಪ್ರಯಾಣಕ್ಕೆ ಅವಕಾಶವಿಲ್ಲ, ಇವಿ ಅಳವಡಿಕೆಗೆ ಆದೇಶ
Bhajanlal Sharma
Image Credit source: PTI

Updated on: May 24, 2026 | 10:09 AM

ನವದೆಹಲಿ, ಮೇ 24: ರಾಜಸ್ಥಾನ (Rajasthan) ಸರ್ಕಾರವು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಹಣದಲ್ಲಿ ವಿದೇಶದ ಪ್ರವಾಸದ ಮೇಲೆ ನಿರ್ಬಂಧ, ಕಾರ್‌ಪೂಲಿಂಗ್ ಕಡ್ಡಾಯ ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ಅಳವಡಿಕೆ ಮುಂತಾದ ಪ್ರಮುಖ ನಿರ್ಧಾರಗಳನ್ನು ಒಳಗೊಂಡ ಅಧಿಕೃತ ಆದೇಶವನ್ನು ರಾಜ್ಯ ಹಣಕಾಸು ಇಲಾಖೆ ಹೊರಡಿಸಿದೆ.

ರಾಜಸ್ಥಾನ ಸರ್ಕಾರದ ಪ್ರಮುಖ ನಿರ್ಧಾರಗಳು ಹೀಗಿವೆ:

ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸಕ್ಕೆ ಬ್ರೇಕ್:

ರಾಜಸ್ಥಾನ ಸರ್ಕಾರದ ಯಾವುದೇ ಸಚಿವರು, ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಅಥವಾ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವಂತಿಲ್ಲ. ಅತ್ಯಂತ ತುರ್ತು ಅಥವಾ ಅನಿವಾರ್ಯ ಪರಿಸ್ಥಿತಿಗಳಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ನೇರ ಅನುಮತಿಯನ್ನು ಪಡೆದು ವಿದೇಶಕ್ಕೆ ತೆರಳಬೇಕಾಗುತ್ತದೆ. ದೇಶದ ಒಳಗಿನ ಪ್ರಯಾಣಗಳಿಗೂ ಸಹ ಕಟ್ಟುನಿಟ್ಟಿನ ಮಿತಿಗಳನ್ನು ಹೇರಲಾಗಿದ್ದು, ಅನಗತ್ಯ ವಿಮಾನ ಪ್ರಯಾಣಗಳಿಗೆ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ: 51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ

ಕಾರ್‌ಪೂಲಿಂಗ್ ಕಡ್ಡಾಯ:

ಸರ್ಕಾರಿ ಅಧಿಕಾರಿಗಳು ಕಚೇರಿ ಕೆಲಸಗಳಿಗಾಗಿ ಅಥವಾ ಸಭೆ ಸಮಾರಂಭಗಳಿಗೆ ಹೋಗುವಾಗ ಪ್ರತ್ಯೇಕ ವಾಹನಗಳನ್ನು ಬಳಸುವ ಬದಲಿಗೆ ‘ಕಾರ್‌ಪೂಲಿಂಗ್’ (ವಾಹನ ಹಂಚಿಕೆ) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದೇ ಇಲಾಖೆಯ ಅಥವಾ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುವ ಅಧಿಕಾರಿಗಳು ಒಂದೇ ವಾಹನವನ್ನು ಬಳಸಬೇಕಾಗುತ್ತದೆ. ಇದರಿಂದ ಇಂಧನ ವೆಚ್ಚ ಮತ್ತು ಸಾರಿಗೆ ಭತ್ಯೆಗಳು ಗಣನೀಯವಾಗಿ ಉಳಿತಾಯವಾಗಲಿವೆ.

ಎಲೆಕ್ಟ್ರಿಕ್ ವಾಹನಗಳ (EV) ಅಳವಡಿಕೆ:

ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ತೈಲ ವೆಚ್ಚವನ್ನು ಕಡಿಮೆ ಮಾಡುವ ದ್ವಿಮುಖ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಇನ್ಮುಂದೆ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡಲು ಆದೇಶಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸುವಾಗ ಅಥವಾ ಬಾಡಿಗೆಗೆ ಪಡೆಯುವಾಗ ಎಲೆಕ್ಟ್ರಿಕ್ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಐಷಾರಾಮಿ ಹೋಟೆಲ್‌ಗಳಲ್ಲಿ ಸಭೆ ನಿಷೇಧ:

ಸರ್ಕಾರಿ ಸಭೆಗಳು, ಸೆಮಿನಾರ್‌ಗಳು ಅಥವಾ ಕಾರ್ಯಾಗಾರಗಳನ್ನು ಅನಗತ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಆಯೋಜಿಸುವಂತಿಲ್ಲ. ಇಲಾಖೆಯ ಸ್ವಂತ ಸಭಾಂಗಣಗಳು ಅಥವಾ ಸರ್ಕಾರಿ ಕಟ್ಟಡಗಳಲ್ಲೇ ಇವುಗಳನ್ನು ನಡೆಸಬೇಕು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ಹೊಸ ಹುದ್ದೆಗಳ ಸೃಷ್ಟಿಗೆ ನಿರ್ಬಂಧ:

ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, ಇಲಾಖೆಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ಅಲಂಕಾರಿಕ ವೆಚ್ಚಗಳಿಗೆ ಬ್ರೇಕ್:

ಕಚೇರಿಗಳ ನವೀಕರಣ, ಐಷಾರಾಮಿ ಪೀಠೋಪಕರಣಗಳ ಖರೀದಿ ಮತ್ತು ಅಲಂಕಾರಿಕ ವಸ್ತುಗಳಿಗಾಗಿ ಸಾರ್ವಜನಿಕ ಹಣವನ್ನು ವ್ಯಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us