ಬೌದ್ ಡಿಸ್ಟಿಲರಿಗೆ ಸೇರಿದ ಕಂಪನಿಗಳಿಂದ ಮತ್ತಷ್ಟು ನಗದು ವಶ; ಇಲ್ಲಿವರೆಗೆ ಸಿಕ್ಕಿದ್ದು ₹ 290 ಕೋಟಿ

|

Updated on: Dec 09, 2023 | 4:20 PM

ಮೂರು ಸ್ಥಳಗಳಲ್ಲಿ ಏಳು ಕೊಠಡಿಗಳು ಮತ್ತು ಒಂಬತ್ತು ಲಾಕರ್‌ಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ನಗದನ್ನು ಬೀರು ಮತ್ತಿತರ ಪೀಠೋಪಕರಣಗಳ ಒಳಗೆ ತುಂಬಿರುವುದು ಪತ್ತೆಯಾಗಿದೆ. ಹೆಚ್ಚಿನ ನಗದು ಮತ್ತು ಚಿನ್ನಾಭರಣಗಳು ಸಿಗುವ ಇತರ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಬೌದ್ ಡಿಸ್ಟಿಲರಿಗೆ ಸೇರಿದ ಕಂಪನಿಗಳಿಂದ ಮತ್ತಷ್ಟು ನಗದು ವಶ; ಇಲ್ಲಿವರೆಗೆ ಸಿಕ್ಕಿದ್ದು ₹ 290 ಕೋಟಿ
ವಶಪಡಿಸಿಕೊಂಡ ಹಣ
Follow us on

ದೆಹಲಿ ಡಿಸೆಂಬರ್ 09 : ಆದಾಯ ತೆರಿಗೆ ದಾಳಿಯಲ್ಲಿ (IT raids) ಭಾರತದ ಅತಿದೊಡ್ಡ ನಗದು ವಸೂಲಿಯಾಗುವ ಸಾಧ್ಯತೆಯಿದ್ದು, ನಿನ್ನೆಯಿಂದ ಮೂರು ರಾಜ್ಯಗಳಲ್ಲಿ ನಡೆಸಿದ ದಾಳಿಗಳಲ್ಲಿ ಇದುವರೆಗೆ ಕನಿಷ್ಠ ₹ 290 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ನಗದನ್ನು ಎಣಿಕೆ ಮಾಡಬೇಕಾಗಿರುವುದರಿಂದ ಮತ್ತು ಹೆಚ್ಚಿನ ಸ್ಥಳಗಳಲ್ಲಿ ನಗದು ಬಚ್ಚಿಟ್ಟಿರುವ ಬಗ್ಗೆ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ದೊರೆತಿರುವುದರಿಂದ ಮೊತ್ತ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್ (Jharkhand) ಮತ್ತು ಪಶ್ಚಿಮ ಬಂಗಾಳ,  ಒಡಿಶಾ ಮೂಲದ ಡಿಸ್ಟಿಲರಿ ಕಚೇರಿಗಳ ಮೇಲೆ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಮೂರು ಸ್ಥಳಗಳಲ್ಲಿ ಏಳು ಕೊಠಡಿಗಳು ಮತ್ತು ಒಂಬತ್ತು ಲಾಕರ್‌ಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ನಗದನ್ನು ಬೀರು ಮತ್ತಿತರ ಪೀಠೋಪಕರಣಗಳ ಒಳಗೆ ತುಂಬಿರುವುದು ಪತ್ತೆಯಾಗಿದೆ. ಹೆಚ್ಚಿನ ನಗದು ಮತ್ತು ಚಿನ್ನಾಭರಣಗಳು ಸಿಗುವ ಇತರ ಸ್ಥಳಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಅವರು ಹೇಳಿದರು.

ಶನಿವಾರ ಬೌದ್ ಡಿಸ್ಟಿಲರಿ ಮತ್ತು ಅದಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ. ಬೌದ್ ಡಿಸ್ಟಿಲರಿಯ ಸಮೂಹ ಕಂಪನಿ ಬಲ್ದೇವ್ ಸಾಹು ಇನ್ಫ್ರಾಮತ್ತು ಅದೇ ಡಿಸ್ಟಿಲರಿ ಒಡೆತನಕ್ಕೆ ಸೇರಿದ ಅಕ್ಕಿ ಮಿಲ್ ಮೇಲೆ ದಾಳಿ ನಡೆಸಲಾಗಿದೆ. ಜಾರ್ಖಂಡ್‌ನಲ್ಲಿರುವ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರ ಆಸ್ತಿಯಿಂದ ಕೋಟ್ಯಂತರ ರೂಪಾಯಿಯನ್ನು ಐಟಿ ವಶ ಪಡಿಸಿಕೊಂಡಿದೆ.

ಸಾರ್ವಜನಿಕರಿಂದ ಲೂಟಿ ಮಾಡಿದ ಹಣವನ್ನು ಹಿಂದಿರುಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಜನರಿಗೆ ಭರವಸೆ ನೀಡಿದ್ದಾರೆ. ದೇಶದ ಜನರುಈ ನೋಟುಗಳ ರಾಶಿಯನ್ನು ನೋಡಬೇಕು. ನಂತರ ಅವರ ನಾಯಕರ ಪ್ರಾಮಾಣಿಕ ‘ಭಾಷಣ’ಗಳನ್ನು ಕೇಳಬೇಕು.. ಸಾರ್ವಜನಿಕರಿಂದ ಏನನ್ನು ಲೂಟಿ ಮಾಡಿದರೂ ಪ್ರತಿ ಪೈಸೆಯನ್ನು ಹಿಂತಿರುಗಿಸಬೇಕು, ಇದು ಮೋದಿಯವರ ಗ್ಯಾರಂಟಿ,” ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌, ಒಡಿಶಾದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದ್ದು ರಾಶಿ ಕರೆನ್ಸಿ ನೋಟು; ಯಾರು ಈ ಧೀರಜ್ ಸಾಹು?

ಬಿಜೆಪಿಯ ಒಡಿಶಾ ಘಟಕವು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿತು ಮತ್ತು ಆಡಳಿತಾರೂಢ ಬಿಜೆಡಿಯಿಂದ ಸ್ಪಷ್ಟೀಕರಣವನ್ನು ಕೇಳಿದೆ. ಬಿಜೆಪಿ ವಕ್ತಾರ ಮನೋಜ್ ಮೊಹಾಪಾತ್ರ ಅವರು ಒಡಿಶಾದ ಪಶ್ಚಿಮ ಪ್ರದೇಶದ ಮಹಿಳಾ ಸಚಿವೆಯೊಬ್ಬರು ಮದ್ಯದ ವ್ಯಾಪಾರಿಗಳೊಬ್ಬರೊಂದಿಗೆ ವೇದಿಕೆ ಹಂಚಿಕೊಂಡಿರುವ ಕೆಲವು ಫೋಟೋಗಳನ್ನು ತೋರಿಸಿದರು.

ಸ್ಥಳೀಯ ನಾಯಕರು ಮತ್ತು ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಪ್ರೋತ್ಸಾಹವಿಲ್ಲದೆ ಈ ತೆರಿಗೆ ವಂಚನೆ ಸಾಧ್ಯವಿಲ್ಲ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ. “ಒಡಿಶಾದ ಅಬಕಾರಿ ಇಲಾಖೆ, ವಿಜಿಲೆನ್ಸ್ ವಿಭಾಗ, ಗುಪ್ತಚರ ವಿಭಾಗ ಮತ್ತು ಆರ್ಥಿಕ ಅಪರಾಧ ವಿಭಾಗಗಳು ರಾಜ್ಯದಲ್ಲಿ ಏನು ಮಾಡುತ್ತಿವೆ?” ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ