Video: ಕಾಂಗ್ರೆಸ್ ಸಂಸ್ಥಾಪನಾ ದಿನ ಇಂದು; ಧ್ವಜಾರೋಹಣ ವೇಳೆ ಕೆಳಗೆ ಬಿದ್ದ ಬಾವುಟ, ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಭಾರತದಲ್ಲಿ ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಧಕ್ಕೆ ತರುವ ಪ್ರಯತ್ನಗಳು ಆಗುತ್ತಿದೆ. ಇದನ್ನೆಲ್ಲ ಮಾಡುತ್ತಿರುವ ಜನರು, ಇತಿಹಾಸದಲ್ಲಿ ಸಿಗದ ಯೋಗ್ಯತೆಯನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

Video: ಕಾಂಗ್ರೆಸ್ ಸಂಸ್ಥಾಪನಾ ದಿನ ಇಂದು; ಧ್ವಜಾರೋಹಣ ವೇಳೆ ಕೆಳಗೆ ಬಿದ್ದ ಬಾವುಟ, ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
Updated By: Lakshmi Hegde

Updated on: Dec 28, 2021 | 12:55 PM

ಇಂದು ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನ (Congress Foundation Day) . ಈ ನಿಮಿತ್ತ ದೆಹಲಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಮಾರಂಭದಲ್ಲಿ ಒಂದು ಎಡವಟ್ಟು ಆಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇಂದು ಸಂಸ್ಥಾಪನಾ ದಿನದ ನಿಮಿತ್ತ ಪ್ರಮುಖ ನಾಯಕರೆಲ್ಲ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸೇರಿದ್ದರು. ಈ ವೇಳೆ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್​ ಧ್ವಜ ಹಾರಿಸಿದರು. ಆದರೆ ಆ ಧ್ವಜ ಮೇಲೆ ಹಾರದೆ, ಸೋನಿಯಾ ಗಾಂಧಿ(Sonia Gandhi)ಯವರ ಕೈ ಮೇಲೆ ಬಿದ್ದಿದೆ.  ನಂತರ ಅದನ್ನು ತೆಗೆದು ಅಲ್ಲಿಯೇ ಇದ್ದ ಸಿಬ್ಬಂದಿ ಬಳಿ ಸೋನಿಯಾ ಗಾಂಧಿ ಕೊಟ್ಟಿದ್ದಾರೆ. ಸದ್ಯ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಆದರೆ ಬಳಿಕ ಪಕ್ಷದ ಕಾರ್ಯಕರ್ತರು ಅದನ್ನು ಸರಿಯಾಗಿ ಕಟ್ಟಿ, ಮತ್ತೆ ಧ್ವಜಾರೋಹಣ ಮಾಡಲಾಗಿದೆ. ಈ ವೇಳೆ ಕಾಂಗ್ರೆಸ್​ ಜಿಂದಾಬಾದ್ ಎಂಬ ಘೋಷಣೆಯನ್ನೂ ಕೂಗಲಾಯಿತು. ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಕೆ.ಸಿ.ವೇಣುಗೋಪಾಲ್​ ಇತರರು ಇದ್ದರು. 

ಭಾರತದ ತುಂಬ ಹಳೇ ಪಕ್ಷ ಕಾಂಗ್ರೆಸ್​ 1885ರ ಡಿಸೆಂಬರ್​ 28ರಂದು ಸಂಸ್ಥಾಪನೆಗೊಂಡಿದೆ. ಪ್ರತಿವರ್ಷವೂ ಡಿಸೆಂಬರ್​ 28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಲಾಗುತ್ತಿದೆ. ಇಂದು ಕೂಡ ಪಕ್ಷ ಕಾರ್ಯಕ್ರಮ ನಡೆಸಿದ್ದು,  ಎಐಸಿಸಿ ಕಚೇರಿಯಲ್ಲಿ ಧ್ವಜಾರೋಹಣದ ಬಳಿಕ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕೋಮು ಸೌಹಾರ್ದತೆ ಕದಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದರ ವಿರುದ್ಧ ಏನೇ ಆಗಲಿ ಕಾಂಗ್ರೆಸ್ ಹೋರಾಡಬೇಕು ಎಂದು ಹೇಳಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಧಕ್ಕೆ ತರುವ ಪ್ರಯತ್ನಗಳು ಆಗುತ್ತಿದೆ. ಇದನ್ನೆಲ್ಲ ಮಾಡುತ್ತಿರುವ ಜನರು, ಇತಿಹಾಸದಲ್ಲಿ ಸಿಗದ ಯೋಗ್ಯತೆಯನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ವಿಭಜಕ ಶಕ್ತಿಗಳು ಸೌಹಾರ್ದತೆ ಕದಡುವ ಪ್ರಯತ್ನದಲ್ಲಿ ತೊಡಗಿವೆ. ಈ ಸಿದ್ಧಾಂತಗಳು ಭಾರತದ ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುತ್ತಿವೆ. ಇಲ್ಲಿನ ಜನರನ್ನು ಬೆದರಿಸಿ, ದ್ವೇಷ ಬಿತ್ತುತ್ತಿವೆ. ಹೀಗಾಗಿ ಅಂಥ ಸಿದ್ಧಾಂತಗಳ ವಿರುದ್ಧ ಕಾಂಗ್ರೆಸ್​ ಹೋರಾಡುತ್ತದೆ. ಅಷ್ಟೇ ಅಲ್ಲ, ದೇಶದ ಗಂಗಾ-ಯಮುನಾ ಸಂಸ್ಕೃತಿಯನ್ನು ನಾಶ ಮಾಡವ ನೀಚ ಪ್ರಯತ್ನಗಳು ನಡೆಯುತ್ತಿವೆ. ಇಂಥ ಸರ್ವಾಧಿಕಾರಿ ಆಡಳಿತದಲ್ಲಿ ಜನರು ಅಭದ್ರತೆ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಇದೆಲ್ಲದರ ವಿರುದ್ಧ ಹೋರಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ, ಅದು ಕಾಂಗ್ರೆಸ್ ಸೃಷ್ಟಿ ಮಾಡಿದ ಭ್ರಮೆ -ಉಸ್ತುವಾರಿ ಅರುಣ್ ಸಿಂಗ್