ದೆಹಲಿ: ಮೂರು ಕೃಷಿ ಕಾಯ್ದೆಗಳನ್ನು 12-18ತಿಂಗಳವರೆಗೆ ಅಮಾನತಿನಲ್ಲಿ ಇಡಲು ನಮ್ಮ ಸರ್ಕಾರ ಈಗಲೂ ಬದ್ಧವಾಗಿದೆ. ಈ ಬಗ್ಗೆ ಇನ್ನೊಮ್ಮೆ ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸರ್ವಪಕ್ಷಗಳ ಸಭೆಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ, ಭಾರತೀಯ ಕಿಸಾನ್ ಯೂನಿಯನ್ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಪ್ರತಿಕ್ರಿಯೆ ನೀಡಿ, ನಮಗೆ ಒತ್ತಡದಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಮೊದಲು ಬಂಧಿತರಾದ ರೈತರನ್ನೆಲ್ಲ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ.
ಪ್ರಧಾನಿ ನಮಗೂ ಪ್ರಧಾನಿಯೇ. ಅವರ ಬಗ್ಗೆ ಅಪಾರ ಗೌರವ ಇದೆ. ಅವರು ನಮ್ಮ ಸಮಸ್ಯೆ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ. ಮಾತುಕತೆಗೆ ನಾವೂ ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲು ಜ.26ರಂದು ನಡೆದ ಪ್ರತಿಭಟನೆಗೆ ಸಂಬಂಧಪಟ್ಟಂತೆ ಬಂಧಿಸಲಾದ ಸುಮಾರು 400 ರೈತರನ್ನು ಜೈಲಿಂದ ಬಿಡುಗಡೆ ಮಾಡಿಸಲಿ.. ಯಾಕೆಂದರೆ ನಾವು ಪ್ರಧಾನಿ ಹುದ್ದೆಯನ್ನು ಗೌರವಿಸಿದಷ್ಟೇ, ರೈತರ ಪೇಟವನ್ನೂ ಗೌರವಿಸುತ್ತೇವೆ ಎಂದಿದ್ದಾರೆ.
ಸರ್ಕಾರದ ಸಿದ್ಧಾಂತದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಇದು ಕೋಲು, ಬಡಿಗೆ, ಗನ್ಗಳಿಂದ ಮಾಡಬಹುದಾದ ಹೋರಾಟವಲ್ಲ. ಹಾಗಂತ ಬೇರೆ ಯಾವುದೇ ಮಾರ್ಗದ ಮೂಲಕ ರೈತರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೃಷಿ ಕಾಯ್ದೆಗಳನ್ನು ಹಿಂಪಡೆದಾಗ ಮಾತ್ರ ಪ್ರತಿಭಟನಾ ನಿರತರು ಮನೆಗೆ ತೆರಳುತ್ತಾರೆ ಎಂದು ಹೇಳಿದ್ದಾರೆ.
ಎಸ್ಎಡಿ ಅಧ್ಯಕ್ಷನಿಂದ ಭೇಟಿ
ಇಂದು ದೆಹಲಿ-ಉತ್ತರ ಪ್ರದೇಶ ಗಡಿಯಾದ ಘಾಜಿಯಾಪುರ್ದಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ರನ್ನು ಶಿರೋಮಣಿ ಅಕಾಲಿ ದಳ್(SAD) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಭೇಟಿಯಾದರು.