ಕಳೆದ 5 ವರ್ಷಗಳಲ್ಲಿ ಗುಜರಾತಿನಿಂದ 40 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು ನಾಪತ್ತೆ: ಎನ್‌ಸಿಆರ್‌ಬಿ ಡೇಟಾ

ಹೆಣ್ಣುಮಕ್ಕಳು ಕಾಣೆಯಾಗಲು ಮಾನವ ಕಳ್ಳಸಾಗಣೆಯೇ ಕಾರಣ. ನನ್ನ ಅಧಿಕಾರಾವಧಿಯಲ್ಲಿ, ಕಾಣೆಯಾದ ಮಹಿಳೆಯರಲ್ಲಿ ಹೆಚ್ಚಿನವರು ಅಕ್ರಮ ಮಾನವ ಕಳ್ಳಸಾಗಣೆ ಗುಂಪುಗಳಿಂದ ಅವರನ್ನು ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ನಾನು ಗಮನಿಸಿದ್ದೇನೆ ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ರಾಜನ್ ಪ್ರಿಯದರ್ಶಿ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಗುಜರಾತಿನಿಂದ 40 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು ನಾಪತ್ತೆ: ಎನ್‌ಸಿಆರ್‌ಬಿ ಡೇಟಾ
ಎನ್‌ಸಿಆರ್‌ಬಿ
Follow us
|

Updated on:May 08, 2023 | 5:58 PM

ಅಹಮದಾಬಾದ್: ಕಳೆದ ಐದು ವರ್ಷಗಳಲ್ಲಿ ಗುಜರಾತಿನಿಂದ (Gujarat) 40 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು (Women) ನಾಪತ್ತೆಯಾಗಿದ್ದಾರೆ ಎಂದು ಎನ್‌ಸಿಆರ್‌ಬಿ ಡೇಟಾ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, 2016 ರಲ್ಲಿ 7,105, 2017 ರಲ್ಲಿ 7,712, 2018 ರಲ್ಲಿ 9,246 ಮತ್ತು 2019 ರಲ್ಲಿ 9,268 ಮಹಿಳೆಯರು ಕಾಣೆಯಾಗಿದ್ದಾರೆ. 2020 ರಲ್ಲಿ8,290 ಮಹಿಳೆಯರು ಕಾಣೆಯಾಗಿದ್ದಾರೆ. ಇದೆಲ್ಲ ಒಟ್ಟು ಸೇರಿಸಿದರೆ 5 ವರ್ಷಗಳಲ್ಲಿ ಕಾಣೆಯಾಗಿರುವ ಮಹಿಳೆಯರ ಸಂಖ್ಯೆ 41,621 ಆಗಿದೆ.  2021 ರಲ್ಲಿ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಅಹಮದಾಬಾದ್ ಮತ್ತು ವಡೋದರಾದಲ್ಲಿ ಕೇವಲ ಒಂದು ವರ್ಷದಲ್ಲಿ (2019-20) 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ.

ಕೆಲವು ನಾಪತ್ತೆ ಪ್ರಕರಣಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು  ಗುಜರಾತ್​​ನಿಂದ ದೂರ  ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಅಂಥವರನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸುವುದನ್ನು ನಾನು ಗಮನಿಸಿದ್ದೇನೆ ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿನ್ಹಾ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪೊಲೀಸ್ ವ್ಯವಸ್ಥೆಯ ಸಮಸ್ಯೆ ಏನೆಂದರೆ ಅದು ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ಪ್ರಕರಣಗಳು ಕೊಲೆಗಿಂತ ಗಂಭೀರವಾಗಿದೆ. ಏಕೆಂದರೆ ಮಗು ನಾಪತ್ತೆಯಾದಾಗ, ಪೋಷಕರು ತಮ್ಮ ಮಗುವಿಗಾಗಿ ವರ್ಷಗಟ್ಟಲೆ ಕಾಯುತ್ತಾರೆ. ಹೀಗಿರುವ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದಂತೆಯೇ ಕಟ್ಟುನಿಟ್ಟಾಗಿ ತನಿಖೆ ಮಾಡಬೇಕುಎಂದು ಅವರು ಹೇಳಿದರು. ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಪೊಲೀಸರು ಆಗಾಗ್ಗೆ ನಿರ್ಲಕ್ಷಿಸುತ್ತಾರೆ. ಅವುಗಳನ್ನು ಬ್ರಿಟಿಷ್ ಕಾಲದ ರೀತಿಯಲ್ಲಿ ತನಿಖೆ ಮಾಡಲಾಗುತ್ತದೆ ಎಂದಿದ್ದಾರೆ ಸಿನ್ಹಾ.

ಹೆಣ್ಣುಮಕ್ಕಳು ಕಾಣೆಯಾಗಲು ಮಾನವ ಕಳ್ಳಸಾಗಣೆಯೇ ಕಾರಣ. ನನ್ನ ಅಧಿಕಾರಾವಧಿಯಲ್ಲಿ, ಕಾಣೆಯಾದ ಮಹಿಳೆಯರಲ್ಲಿ ಹೆಚ್ಚಿನವರು ಅಕ್ರಮ ಮಾನವ ಕಳ್ಳಸಾಗಣೆ ಗುಂಪುಗಳಿಂದ ಅವರನ್ನು ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ನಾನು ಗಮನಿಸಿದ್ದೇನೆ ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ರಾಜನ್ ಪ್ರಿಯದರ್ಶಿ ಹೇಳಿದ್ದಾರೆ.

ಇದನ್ನೂ ಓದಿ: ಬೆದರಿಕೆ ಯಾಕೆ ಹಾಕ್ತೀರಿ, ನನ್ನನ್ನು ಬಂಧಿಸಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ನಾನು ಖೇಡಾ ಜಿಲ್ಲೆಯಲ್ಲಿ ಎಸ್‌ಪಿ ಆಗಿದ್ದಾಗ, ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬಡ ಹುಡುಗಿಯನ್ನು ಎತ್ತಿಕೊಂಡು ತನ್ನ ತಾಯ್ನಾಡಿನಲ್ಲಿ ಮಾರಾಟ ಮಾಡಿದ್ದ. ಅಲ್ಲಿ ಅವಳನ್ನು ಕೃಷಿ ಕೆಲಸಕ್ಕೆ ಸೇರಿಸಲಾಯಿತು. ನಾವು ಅವಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಅನೇಕ ಸಂದರ್ಭಗಳಲ್ಲಿ ಇದು ಸಂಭವಿಸುವುದಿಲ್ಲ ಎಂದಿದ್ದಾರೆ ಅವರು.

ಬಿಜೆಪಿ ನಾಯಕರು ಕೇರಳದಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಆದರೆ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ತವರು ರಾಜ್ಯವಾದ ಗುಜರಾತ್‌ನಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಗುಜರಾತ್ ಕಾಂಗ್ರೆಸ್‌ನ ವಕ್ತಾರರಾದ ಹಿರೇನ್ ಬ್ಯಾಂಕರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Mon, 8 May 23