
ಪಹಲ್ಗಾಮ್, ಜೂನ್ 22: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ. ಈ ಘಟನೆಯಲ್ಲಿ 26ಮಂದಿ ಪ್ರಾಣ ಕಳೆದುಕೊಂಡಿದ್ದರು. ಇಂದಿಗೆ ಘಟನೆ ನಡೆದು ಎರಡು ತಿಂಗಳು ಕಳೆದಿದೆ.ಆರೋಪಿಗಳನ್ನು ಪಹಲ್ಗಾಂನ ಬಟ್ಕೋಟೆಯ ಪರ್ವೇಜ್, ಅಹ್ಮದ್ ಜೋಥರ್ ಮತ್ತು ಪಹಲ್ಗಾಂನ ಹಿಲ್ ಪಾರ್ಕ್ನ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ.
NIA ಪ್ರಕಾರ, ಬಂಧಿತ ವ್ಯಕ್ತಿಗಳು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ ಮತ್ತು ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT) ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂಬುದು ದೃಢಪಟ್ಟಿದೆ. ದಾಳಿಗೂ ಮುನ್ನ ಪರ್ವೈಜ್ ಮತ್ತು ಬಶೀರ್ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಹಿಲ್ ಪಾರ್ಕ್ನಲ್ಲಿರುವ ಕಾಲೋಚಿತ ಧೋಕ್ (ಗುಡಿಸಲು) ನಲ್ಲಿ ಆಶ್ರಯ ನೀಡಿದ್ದರು.
ಈ ಇಬ್ಬರು ಭಯೋತ್ಪಾದಕರಿಗೆ ಊಟ, ವಸತಿಯನ್ನು ನೀಡಿದ್ದರು. 26 ಅಮಾಯಕ ಪ್ರವಾಸಿಗರನ್ನು ಬಲಿತೆಗೆದುಕೊಂಡ ಮತ್ತು 16 ಜನರನ್ನು ಗಂಭೀರವಾಗಿ ಗಾಯಗೊಳಿಸಿದ ಭೀಕರ ದಾಳಿಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಎನ್ಐಎ ಹೇಳಿದೆ.
ಪಹಲ್ಗಾಮ್ ದಾಳಿಯ ಮರುದಿನವೇ, ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತು. ಏಪ್ರಿಲ್ 23 ರಂದು ಎನ್ಐಎ ತಂಡವು ಈ ಭಯೋತ್ಪಾದಕ ದಾಳಿಯ ತನಿಖೆಯನ್ನು ಪ್ರಾರಂಭಿಸಿತ್ತು. ತನಿಖಾ ತಂಡವು ಬೈಸರನ್ ಕಣಿವೆಯನ್ನು ತಲುಪಿ ಅಪರಾಧದ ಸ್ಥಳವನ್ನು ಪರಿಶೀಲಿಸಿತು ಮತ್ತು ವಿಚಾರಣೆ ನಡೆಸಿತು. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಮತ್ತು ಪಾಕಿಸ್ತಾನದಲ್ಲಿರುವ ಅವರ ಕಮಾಂಡರ್ಗಳ ನಡುವಿನ ಸಂಪರ್ಕಗಳು ಸಂಬಂಧ ಹೊಂದಿವೆ ಎಂದು ವಿದೇಶಾಂಗ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮರುದಿನವೇ, ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಿತು. ಏಪ್ರಿಲ್ 23 ರಂದು ನಡೆದ ಈ ಸಭೆಯಲ್ಲಿ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತು. ಈ ಮಾಹಿತಿಯನ್ನು ಪಾಕಿಸ್ತಾನಕ್ಕೂ ನೀಡಲಾಗಿತ್ತು.
Khawaja Asif: ಭಾರತದಲ್ಲಿ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ‘ಎಕ್ಸ್’ ಖಾತೆ ನಿರ್ಬಂಧ
ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಸೇನೆಗೆ ಸ್ವಾತಂತ್ರ್ಯ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ನಿರಂತರ ಸಭೆಗಳನ್ನು ನಡೆಸಿದರು. ಮೇ 6 ಮತ್ತು 7 ರ ರಾತ್ರಿ ಸೇನೆಯು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಗಡಿಯುದ್ದಕ್ಕೂ ಇದ್ದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು.
ಪಾಕಿಸ್ತಾನ ಸೇನೆಯು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಭಾರತೀಯ ಸೇನೆಯು S-400 ವಾಯು ರಕ್ಷಣಾ ವ್ಯವಸ್ಥೆಯೊಂದಿಗೆ ಆ ದಾಳಿಗಳನ್ನು ವಿಫಲಗೊಳಿಸಿತು ಮತ್ತು ಪ್ರತೀಕಾರವಾಗಿ ಲಾಹೋರ್ನಲ್ಲಿರುವ ಪಾಕಿಸ್ತಾನ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿತು. ಇದರೊಂದಿಗೆ, ಪಾಕಿಸ್ತಾನದ 11 ವಾಯುನೆಲೆಗಳು ನಾಶವಾದವು. ಭಾರತದ ದಾಳಿಗೆ ಹೆದರಿ, ಪಾಕಿಸ್ತಾನವು ವಿಶ್ವದ ಹಲವು ದೇಶಗಳಲ್ಲಿ ಕದನ ವಿರಾಮಕ್ಕೆ ಮನವಿ ಮಾಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ