ಜ್ಯೋತಿಷಿಗಳ ಮಾತು ಕೇಳಿ ಸರ್ಕಾರ ಅಧಿವೇಶನ ಕರೆದಿದೆ: ಆರ್‌ಜೆಡಿ ಸಂಸದ ಮನೋಜ್ ಝಾ

Parliament Special Session:ಇದು ವಿಶೇಷ ಅಧಿವೇಶನವೇ ಅಲ್ಲ. ಯಾರೋ ಜ್ಯೋತಿಷಿಗಳು ಏನಾದರೂ ಹೇಳಿರಬೇಕು. ಪ್ರಧಾನಿಯವರು ಎಲ್ಲವನ್ನೂ ನಂಬುತ್ತಾರೆನಿಮಗೆ ಯಾವುದೇ ಅಜೆಂಡಾ ಇಲ್ಲ ಎಂದು ಹೇಳಬೇಡಿ. ಅಜೆಂಡಾ ತುಂಬಾ ಸ್ಪಷ್ಟವಾಗಿದೆ. ಇತರ ಅಜೆಂಡಾಗಳು ಏನೆಂದು ನೋಡಲು ನಾವು ಬಯಸುತ್ತೇವೆ. ಆದರೆ ಅದರಲ್ಲಿ ವಿಶೇಷವೇನೂ ಇಲ್ಲ ಎಂದು ಎಎನ್ಐ ಜತೆ ಮಾತನಾಡಿದ ರಾಜ್ಯಸಭಾ ಸದಸ್ಯರು ಹೇಳಿದ್ದಾರೆ.

ಜ್ಯೋತಿಷಿಗಳ ಮಾತು ಕೇಳಿ ಸರ್ಕಾರ ಅಧಿವೇಶನ ಕರೆದಿದೆ: ಆರ್‌ಜೆಡಿ ಸಂಸದ ಮನೋಜ್ ಝಾ
ಮನೋಜ್ ಝಾ
ರಶ್ಮಿ ಕಲ್ಲಕಟ್ಟ

Updated on: Sep 18, 2023 | 12:55 PM

ದೆಹಲಿ ಸೆಪ್ಟಂಬರ್ 18: ಈ ಹೊತ್ತಲ್ಲಿ ಸಂಸತ್​​ನ ಅಧಿವೇಶನವನ್ನು ಕರೆಯುವ ಸರ್ಕಾರದ ಉದ್ದೇಶವನ್ನು ವಿರೋಧ ಪಕ್ಷದ ಇಂಡಿಯಾ ಮೈತ್ರಿಕೂಟದ (INDIA bloc) ನಾಯಕರು ಸೋಮವಾರ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಜನತಾ ದಳ (RJD) ಸಂಸದ ಮನೋಜ್ ಝಾ (Manoj Jha) ಅವರು ಈ ಹಿಂದೆ ಹೇಳಿಕೊಂಡಂತೆ ಅಧಿವೇಶನವು ವಿಶೇಷವಾದದ್ದಲ್ಲ. ಸರ್ಕಾರ ಚಳಿಗಾಲದ ಅಧಿವೇಶನದವರೆಗೆ ಕಾಯಬಹುದಾದ ಸಾಮಾನ್ಯ ಮಸೂದೆಗಳನ್ನು ತರುತ್ತಿದೆ ಎಂದು ಹೇಳಿದ್ದಾರೆ.

ಇದು ವಿಶೇಷ ಅಧಿವೇಶನವೇ ಅಲ್ಲ. ಯಾರೋ ಜ್ಯೋತಿಷಿಗಳು ಏನಾದರೂ ಹೇಳಿರಬೇಕು. ಪ್ರಧಾನಿಯವರು ಎಲ್ಲವನ್ನೂ ನಂಬುತ್ತಾರೆನಿಮಗೆ ಯಾವುದೇ ಅಜೆಂಡಾ ಇಲ್ಲ ಎಂದು ಹೇಳಬೇಡಿ. ಅಜೆಂಡಾ ತುಂಬಾ ಸ್ಪಷ್ಟವಾಗಿದೆ. ಇತರ ಅಜೆಂಡಾಗಳು ಏನೆಂದು ನೋಡಲು ನಾವು ಬಯಸುತ್ತೇವೆ. ಆದರೆ ಅದರಲ್ಲಿ ವಿಶೇಷವೇನೂ ಇಲ್ಲ ಎಂದು ಎಎನ್ಐ ಜತೆ ಮಾತನಾಡಿದ ರಾಜ್ಯಸಭಾ ಸದಸ್ಯರು ಹೇಳಿದ್ದಾರೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸರ್ಕಾರದ ಕ್ರಮವನ್ನು “ಅಸಂಬದ್ಧ” ಎಂದು ಹೇಳಿದ್ದು, ವಿಶೇಷ ಅಧಿವೇಶನಗಳನ್ನು ಸಾಮಾನ್ಯವಾಗಿ ವಿಶೇಷ ಅಜೆಂಡಾ ಇಟ್ಟುಕೊಂಡು ಕರೆಯುತ್ತಾರೆ ಎಂದು ಹೇಳಿದ್ದಾರೆ.


ಇದು ಅಸಂಬದ್ಧ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಈ ವಿಶೇಷ ಅಧಿವೇಶನದಲ್ಲಿ ಏಕೆ ಇಷ್ಟೊಂದು ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ನಿರ್ಧರಿಸಿದೆ ಎಂಬುದನ್ನು ಅವರೇ ಹೇಳಬೇಕು. ವಿಶೇಷ ಅಧಿವೇಶನಗಳನ್ನು ಸಾಮಾನ್ಯವಾಗಿ ವಿಶೇಷ ಅಜೆಂಡಾಕ್ಕೆ ಕರೆದು ಆ ವಿಷಯದ ಬಗ್ಗೆ ಮಾತ್ರ ಚರ್ಚೆ ನಡೆಯುತ್ತದೆ, ಆದರೆ ಇದು ವಿಶೇಷ ಅಧಿವೇಶನ ಅಥವಾ ಸಾಮಾನ್ಯ ಅಧಿವೇಶನ ವೇಳೆ ಸರ್ಕಾರದಿಂದ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ. ಸರ್ಕಾರದ ನಿಜವಾದ ಉದ್ದೇಶದ ಬಗ್ಗೆ ನಮಗೆ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಇದು ಸಾಮಾನ್ಯ ಅಧಿವೇಶನವೇ ಅಥವಾ ವಿಶೇಷ ಅಧಿವೇಶನವೇ ಎಂಬ ಬಗ್ಗೆ ಸರ್ಕಾರಕ್ಕೂ ಗೊತ್ತಿಲ್ಲ. ಬಹುಶಃ, ಇದು ಕೇವಲ ಫೋಟೋ ಸೆಶನ್ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಹೇಳಿದ್ದಾರೆ.

ವಿಶೇಷ ಅಧಿವೇಶನವನ್ನು ಅಜೆಂಡಾ ಇಲ್ಲದೆ ತರಾತುರಿಯಲ್ಲಿ ಕರೆಯಲಾಗಿದೆ. ಕೇಂದ್ರ ಸರ್ಕಾರವು ಅಜೆಂಡಾ ನೀಡುತ್ತಿಲ್ಲ. ನೀವು ಎಂಟು ಮಸೂದೆಗಳನ್ನು ನೋಡಿದರೆ, ಅದು ಮುಖ್ಯ ಚುನಾವಣೆಗೆ ಸಂಬಂಧಿಸಿದ ಮಸೂದೆಗಳಾಗಿವೆ. ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ್ದು ಮಾತ್ರ ಪ್ರಮುಖವಾದುದು. ನಾವು ಇದನ್ನು ಕಟುವಾಗಿ ವಿರೋಧಿಸುತ್ತೇವೆ. ಇತರ ವಿಧೇಯಕಗಳು ಚಳಿಗಾಲದ ಅಧಿವೇಶನದವರೆಗೆ ಕಾಯಬಹುದಿತ್ತು. ಹರತಾಲಿಕ ತೀಜ್ ಇಂದು ಉತ್ತರ ಭಾರತದಾದ್ಯಂತ ಆಚರಿಸಲಾಗುತ್ತದೆ. ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ನಾಳೆ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಅದರ ಮಧ್ಯದಲ್ಲಿ ನೀವು ಅಧಿವೇಶನವನ್ನು ಕರೆದಿದ್ದೀರಿ. ಇದು ಕೇಂದ್ರದ ಮನಸ್ಸಿನಲ್ಲಿ ಏನಿದೆ ಎಂಬ ಅನುಮಾನವನ್ನು ಸೃಷ್ಟಿಸುತ್ತದೆ ಎಂದು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಇದನ್ನೂ ಓದಿ: Parliament Special Session: ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಮಲಗುವ ಮಗು ಸಂಸತ್ ತಲುಪುತ್ತೆ ಎಂದರೆ ಇದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ: ಮೋದಿ

ಅಧಿವೇಶನವನ್ನು ಘೋಷಿಸುವಾಗ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇದನ್ನು “ವಿಶೇಷ ಅಧಿವೇಶನ” ಎಂದು ಹೇಳಿದ್ದರು. ಆದರೆ ಇದು ಸಾಮಾನ್ಯ ಅಧಿವೇಶನ, ಪ್ರಸ್ತುತ ಲೋಕಸಭೆಯ 13 ನೇ ಅಧಿವೇಶನ ಮತ್ತು ರಾಜ್ಯಸಭೆಯ 261 ನೇ ಅಧಿವೇಶನ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಸಂಸತ್ ನ ಬಜೆಟ್, ಮಾನ್ಸೂನ್ ಮತ್ತು ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಮುಂಗಾರು ಅಧಿವೇಶನ ಜುಲೈ-ಆಗಸ್ಟ್‌ನಲ್ಲಿ ನಡೆದಿದ್ದು ಚಳಿಗಾಲದ ಅಧಿವೇಶನ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Mon, 18 September 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us