ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೊ ನೋಡಿ

ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ವಸಾಯಿ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಕ್ಲೋಸ್ ಸರ್ಕ್ಯೂಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲು ಹತ್ತಲು ಹೋಗಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೊ ನೋಡಿ
ಮುಂಬೈಯಲ್ಲಿ ರೈಲು ಪ್ರಯಾಣಿಕನನ್ನು ರಕ್ಷಿಸಿದ ಸಿಬ್ಬಂದಿ
Updated By: ರಶ್ಮಿ ಕಲ್ಲಕಟ್ಟ

Updated on: Jan 25, 2022 | 12:18 PM

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ರಕ್ಷಿಸಿದ್ದಾರೆ. ವಸಾಯಿ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಕ್ಲೋಸ್ ಸರ್ಕ್ಯೂಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡ ವಿಡಿಯೊದಲ್ಲಿ ಪ್ರಯಾಣಿಕರೊಬ್ಬರು ತನ್ನ ಬೆನ್ನಿಗೆ ಬ್ಯಾಗ್‌ ಸಿಕ್ಕಿಸಿಕೊಂಡು ಚಲಿಸುವ ರೈಲಿನೊಳಗೆ ಹೋಗಲು ಪ್ರಯತ್ನಿಸುತ್ತಿರುವುದು ಮತ್ತು ನಂತರ ಪ್ಲಾಟ್‌ಫಾರ್ಮ್‌ನಲ್ಲಿ ಬೀಳುತ್ತಿರುವುದನ್ನು ತೋರಿಸುತ್ತದೆ.ಬಿದ್ದ ಪ್ರಯಾಣಿಕನನ್ನು ರೈಲು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಆ ವ್ಯಕ್ತಿ ನಂತರ ತಾನು ಹಿಡಿದಿದ್ದ ರೈಲಿನ ಗೇಟ್‌ನಿಂದ ಕೈಬಿಟ್ಟ ನಂತರ ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವನ ಕಾಲುಗಳನ್ನು ಹಿಡಿದೆಳೆದು ಕಾಪಾಡುತ್ತಾರೆ. ನಂತರ ಪ್ರಯಾಣಿಕನು ಎದ್ದು ನಿಂತು ಉಡುಪು ಸರಿ ಮಾಡುತ್ತಿರುವುದು ವಿಡಿಯೊದಲ್ಲಿದೆ.  ಜನರು ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ಆರ್‌ಪಿಎಫ್ ಸಿಬ್ಬಂದಿ ಜೀವ ಉಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಕಾನ್‌ಸ್ಟೆಬಲ್ ಒಬ್ಬರು ಗರ್ಭಿಣಿ ಮಹಿಳೆಯನ್ನು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಳ್ಳದಂತೆ ರಕ್ಷಿಸಿದ್ದರು.

ನಿಲ್ದಾಣದಿಂದ ಪಡೆದ ಸಿಸಿಟಿವಿ ದೃಶ್ಯಗಳಲ್ಲಿ, ಮಹಿಳೆ ಚಲಿಸುವ ರೈಲು ಹತ್ತಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.  ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ನಂತರ ಟ್ವಿಟರ್‌ನಲ್ಲಿ ವಿಡಿಯೊವನ್ನು ಶೇರ್ ಮಾಡಿದ್ದು ಪ್ರಯಾಣಿಕರು ಚಲಿಸುವ ರೈಲುಗಳನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ಎಲ್ಲಾ ಪ್ರಯಾಣಿಕರಿಗೆ ಮನವಿ ಮಾಡಿದರು.


ಕಳೆದ ಮೂರು ವರ್ಷಗಳಲ್ಲಿ ಮುಂಬೈನ ಉಪನಗರ ರೈಲು ಹಳಿಗಳಲ್ಲಿ ಆರ್‌ಪಿಎಫ್ ಸಿಬ್ಬಂದಿ ಮತ್ತು ರೈಲ್ವೆ ಅಧಿಕಾರಿಗಳು ಒಟ್ಟು 138 ಜೀವಗಳನ್ನು ಉಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಕಳೆದ ವಾರ ವರದಿ ಮಾಡಿತ್ತು. ಸೆಂಟ್ರಲ್ ರೈಲ್ವೇಯಿಂದ 82 ಪ್ರಯಾಣಿಕರು ಮತ್ತು ಪಶ್ಚಿಮ ರೈಲ್ವೆಯಿಂದ 56 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಯಾಣ್, ಕುರ್ಲಾ ಮತ್ತು ದಾದರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಉಳಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರು ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಪ್ರಯತ್ನಿಸುವುದರಿಂದ ಉಳಿಸಲಾಗಿದೆ.

ಇದನ್ನೂ ಓದಿ: Coronavirus cases in India ಹೊಸ ಕೊವಿಡ್-19 ಪ್ರಕರಣ 3 ಲಕ್ಷಕ್ಕಿಂತ ಕಡಿಮೆ; ಧನಾತ್ಮಕ ದರ ಶೇ 15.52