ದೇಶವೇ ನಿಮ್ಮ ಜತೆಗಿದೆ: ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಆಶ್ವಾಸನೆ ನೀಡಿದ ಮೋದಿ

PM Modi Speech Today:ಪ್ರತಿಪಕ್ಷಗಳು ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದರು. ಮೋದಿಯವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗಳಿಗೆ ಉತ್ತರ ನೀಡಲಿದ್ದಾರೆ. ಮೋದಿ ಲೋಕಸಭೆಯಲ್ಲಿ ಹೇಳಿದ್ದೇನು? ಓದಿ

ದೇಶವೇ ನಿಮ್ಮ ಜತೆಗಿದೆ: ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಆಶ್ವಾಸನೆ ನೀಡಿದ ಮೋದಿ
ಲೋಕಸಭೆಯಲ್ಲಿ ಮೋದಿ
Follow us
|

Updated on:Aug 10, 2023 | 7:25 PM

ದೆಹಲಿ ಆಗಸ್ಟ್10: ಪ್ರತಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯಕ್ಕೆ (No-Confidence motion) ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಗುರುವಾರ) ಲೋಕಸಭೆಗೆ ಆಗಮಿಸಿದ್ದು, ವಿಪಕ್ಷಗಳು ಕೇಂದ್ರ ಸರ್ಕಾರ ವಿರುದ್ಧ ಟೀಕಾ ಪ್ರಹಾರ ಮಾಡಿವೆ. ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, (Adhir Ranjan Chowdhury) ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ದೇಶದೊಳಗೆ ನಡೆಯುತ್ತಿರುವ ಆಂತರಿಕ ಕಲಹ(civil war) ಎಂದು ಕರೆದಿದ್ದಾರೆ. ಮಣಿಪುರ ವಿಷಯದ ಬಗ್ಗೆ ಪ್ರಧಾನಿ ಮೌನವನ್ನು ವಿಪಕ್ಷಗಳು ಪ್ರಶ್ನಿಸಿದಾಗ, ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈಶಾನ್ಯ ರಾಜ್ಯದಲ್ಲಿ ನಡೆದ ಲೆಕ್ಕವಿಲ್ಲದಷ್ಟು ಘರ್ಷಣೆಗಳು ಮತ್ತು ಸಾವುಗಳನ್ನು ಸದನಕ್ಕೆ ನೆನಪಿಸಿದರು.

ಪ್ರತಿಪಕ್ಷಗಳು ಜುಲೈ 26 ರಂದು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದರು. ಮೋದಿಯವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ.

ಮಂಗಳವಾರ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಈ ಮಸೂದೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ್ದು,  ಪ್ರತಿಪಕ್ಷಗಳು ಮತ್ತು ಕೇಂದ್ರದ ನಡುವೆ ತೀವ್ರ ವಾಗ್ವಾದಕ್ಕೆ ನಡೆಯುತ್ತಿದೆ. ಜುಲೈ 20ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರದಲ್ಲಿ ನಡೆದ ಹಿಂಸಾಚಾರ ಸೇರಿದಂತೆ ಹಲವು ವಿಷಯಗಳ ಕುರಿತು ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿವೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

ಕಲಾಪದಲ್ಲಿ ಸದಸ್ಯರು ತಮ್ಮ ಅಭಿಪ್ರಾಯ ಹೇಳಿದ್ದಾರೆ.ದೇಶದ ಜನರು ನಮ್ಮ ಸರ್ಕಾರದ ಪರ ವಿಶ್ವಾಸ ಇಟ್ಟಿದ್ದಾರೆ.ದೇಶದ ಕೋಟಿ ಕೋಟಿ ಜನರಿಗೆ ಧನ್ಯವಾದ ಸಮರ್ಪಿಸುತ್ತೇನೆ.ನಮಗೆ ಭಗವಂತನ ಮೇಲೆ ಹೆಚ್ಚು ನಂಬಿಕೆ ಇದೆ. 2018ರಲ್ಲೂ ಕೂಡ ಈಶ್ವರನ ಆದೇಶ ಇತ್ತು. ವಿಪಕ್ಷ ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು,ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಕ್ಕೆ ಧನ್ಯವಾದಗಳು. ಇದು ನಮ್ಮ ಸರ್ಕಾರಕ್ಕೆ ಪರೀಕ್ಷೆ ಅಲ್ಲ, ವಿಪಕ್ಷಗಳಿಗೆ ಇರುವುದು. ವಿಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಶುಭವಾಗಲಿದೆ. 2024ರಲ್ಲಿ ಎನ್ ಡಿಎ ಹಾಗೂ ಬಿಜೆಪಿ ಗೆದ್ದು ಬರಲಿದೆ.ಎಲ್ಲ ದಾಖಲೆಗಳನ್ನು ಮುರಿದು ನಾನು ಗೆದ್ದು ಬರಲಿದ್ದೇವೆ.ಅಭೂತಪೂರ್ವ ಗೆಲುವಿನೊಂದಿಗೆ ನಾವು ಗೆದ್ದು ಬರಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ದೇವರು ತುಂಬಾ ಕರುಣಾಮಯಿ ಮತ್ತು ಆತ ಯಾವುದಾದರೂ ಮಾಧ್ಯಮದ ಮೂಲಕ ಮಾತನಾಡುತ್ತಾರೆ. ಪ್ರತಿಪಕ್ಷಗಳು ಈ ನಿರ್ಣಯವನ್ನು ತಂದಿರುವುದು ದೇವರ ಆಶೀರ್ವಾದ ಎಂದು ನಾನು ನಂಬುತ್ತೇನೆ. ನಾನು 2018 ರಲ್ಲಿ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅದು ಮಂಡನೆಯಲ್ಲ ಎಂದು ಹೇಳಿದ್ದೆ. ನಮಗೆ ಅದು ಪರೀಕ್ಷೆ ಆಗಿರಲಿಲ್ಲ ಆದರೆ ಅವರಿಗೆ ಆಗಿತ್ತು. ಪರಿಣಾಮ ಅವರು ಚುನಾವಣೆಯಲ್ಲಿ ಸೋತರು.

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ನಮ್ಮ ಪಾಲಿಗೆ ಅದೃಷ್ಟ

ಒಂದು ರೀತಿಯಲ್ಲಿ ಹೇಳುವುದಾದರೆ, ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಯಾವಾಗಲೂ ಅದೃಷ್ಟ ತಂದಿದೆ.2024 ರ ಚುನಾವಣೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು, ಜನರ ಆಶೀರ್ವಾದದೊಂದಿಗೆ ಎನ್‌ಡಿಎ ಮತ್ತು ಬಿಜೆಪಿ ಮಹಾ ವಿಜಯದೊಂದಿಗೆ ಮರಳಿ ಬರಲಿದೆ ಎಂದು ನೀವು (ವಿರೋಧ) ನಿರ್ಧರಿಸಿದ್ದೀರಿ ಎಂಬುದನ್ನು ನಾನು ನೋಡುತ್ತಿದ್ದೇನೆ. ಈ ನಿರ್ಣಯ ಬಗ್ಗೆ ನೀವು ಯಾವ ರೀತಿಯ ಚರ್ಚೆಯನ್ನು ಮಾಡಿದ್ದೀರಿ ‘ಆಪ್ಕೆ ದರ್ಬಾರಿ ಭಿ ಬಹುತ್ ದುಖೀ ಹೈ’ ಎಂಬುದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಿದ್ದೇನೆ.ಫೀಲ್ಡಿಂಗ್ ವಿಪಕ್ಷ ಮಾಡಿದ್ದರೂ ಬೌಂಡರಿ ಸಿಕ್ಸರ್ ಹೊಡೆದಿದ್ದು ಇಲ್ಲಿಂದಲೇ ಎಂದ ಮೋದಿ ಹೇಳಿದ್ದಾರೆ.

ನಮ್ಮ ಗಮನವು ದೇಶದ ಅಭಿವೃದ್ಧಿಯತ್ತ ಇರಬೇಕು.ಇದು ಇಂದಿನ ಅಗತ್ಯವಾಗಿದೆ. ನಮ್ಮ ಯುವಕರು ಕನಸುಗಳನ್ನು ನನಸಾಗಿಸುವ ಶಕ್ತಿ ಹೊಂದಿದ್ದಾರೆ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರ, ದೇಶದ ಯುವಕರಿಗೆ ಅವಕಾಶಗಳು ಮತ್ತು ಆಕಾಂಕ್ಷೆಗಳನ್ನು ನೀಡಿದ್ದೇವೆ.

ನಾವು ಭಾರತದ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದೇವೆ. ಆದರೆ ಜಗತ್ತಿನಲ್ಲಿ ನಮ್ಮ ದೇಶದ ಘನತೆಗೆ ಕಳಂಕ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಇಂದು ಭಾರತದ ಮೇಲೆ ವಿಶ್ವದ ನಂಬಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಧೀರ್ ಬಾಬು ಮೂಲೆಗುಂಪು ಮಾಡಿದ್ದೇಕೆ?

ಈ ಅವಿಶ್ವಾಸ ಗೊತ್ತುವಳಿಯಲ್ಲಿನ ಕೆಲವು ವಿಷಯಗಳು ತುಂಬಾ ವಿಚಿತ್ರವಾಗಿದ್ದು, ಹಿಂದೆಂದೂ ಕೇಳಿಲ್ಲ ಅಥವಾ ನೋಡಿಲ್ಲ, ಊಹಿಸಲೂ ಇಲ್ಲ. ಅತಿ ದೊಡ್ಡ ವಿರೋಧ ಪಕ್ಷದ ನಾಯಕನ ಹೆಸರು ಮಾತನಾಡುವವರ ಪಟ್ಟಿಯಲ್ಲಿ ಇರಲಿಲ್ಲ. ಈ ಬಾರಿ ಅಧೀರ್ ಜಿ (ಅಧೀರ್ ರಂಜನ್ ಚೌಧರಿ) ಏನಾಯಿತು?ಅವರ ಪಕ್ಷವು ಅವರಿಗೆ ಮಾತನಾಡಲು ಅವಕಾಶವನ್ನು ನೀಡಲಿಲ್ಲ. ಇಂದು ಅವರ ಸಮಯದ ಸ್ಲಾಟ್ ಮುಗಿದ ನಂತರವೂ ಮಾತನಾಡಲು ಅವರಿಗೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ಔದಾರ್ಯ. ಆದರೆ ಬೆಲ್ಲದ ಗೊಬ್ಬರ ಮಾಡುವುದು ಎಂಬುದಕ್ಕೆ ಇವರು ನಿಪುಣರು. ನಿಮ್ಮ ಮೇಲಿರುವ ಒತ್ತಡ ಏನೆಂದು ನನಗೆ ಗೊತ್ತಿಲ್ಲ, ಅಧೀರ್ ಬಾಬು ಅವರನ್ನು ಏಕೆ ಮೂಲೆ ಗುಂಪು ಮಾಡಲಾಗಿದೆ? ಬಹುಶಃ ಕೋಲ್ಕತ್ತಾದಿಂದ ಫೋನ್ ಕರೆ ಬಂದಿರಬಹುದು, ಕಾಂಗ್ರೆಸ್ ಅವರನ್ನು ಮತ್ತೆ ಮತ್ತೆ ಅವಮಾನಿಸುತ್ತದೆ. ನಾವು ಅಧೀರ್ ಬಾಬು ಅವರ ಪರವಾಗಿ ನಿಲ್ಲುತ್ತೇವೆ.

ಕೆಲವು ವಿರೋಧ ಪಕ್ಷಗಳು ತಮ್ಮ ನಡವಳಿಕೆಯ ಮೂಲಕ ಪಕ್ಷವು ರಾಷ್ಟ್ರಕ್ಕಿಂತ ಮೇಲಿದೆ ಎಂದು ಸಾಬೀತುಪಡಿಸಿದೆ. ನೀವು ಬಡವರ ಹಸಿವಿನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಅಧಿಕಾರದ ಹಸಿವು ನಿಮ್ಮ ಮನಸ್ಸಿನಲ್ಲಿದೆ ಎಂದು ನಾನು ಭಾವಿಸುತ್ತೇನೆ. ವಿಪಕ್ಷದವರಿಗೆ ರಹಸ್ಯ ವರದಾನವೊಂದು ಸಿಕ್ಕಿದೆ. ಅದೇನೆಂದರೆ ಅವರು ಯಾರಿಗ ಕೆಡುಕಾಗಲಿ ಎಂದು ಬಯಸುತ್ತಾರೋ ಅವರಿಗೆ ಒಳ್ಳೆಯದೇ ಆಗುತ್ತದೆ. ಅಂಥಾ ಒಂದು ಉದಾಹರಣೆ ನಿಮ್ಮ ಮುಂದೆ ಇದೆ.20 ವರ್ಷಗಳಾಯ್ತ, ಯಾವುದು ಆಗಿದೆ ಎನ್ನುವಂತಿಲ್ಲ ಆದರೆ ಆಗಿದ್ದಲ್ಲಾ ಒಳ್ಳೆಯದೇ.

ಪ್ರತಿಪಕ್ಷಗಳು ಯಾವ ಸರ್ಕಾರಿ ಕಂಪನಿಗಳಿಗೆ ಬೈಯುತ್ತಾರೆಯೋ ಆ ಕಂಪನಿಯಲ್ಲಿ ಹೂಡಿಕೆ ಮಾಡಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಅತ್ಯಧಿಕ ಆದಾಯವನ್ನು ದಾಖಲಿಸಿದೆ. ಅವರ (ವಿರೋಧ ಪಕ್ಷಗಳ) ಆರೋಪಗಳ ಹೊರತಾಗಿಯೂ, HAL ದೇಶದ ಹೆಮ್ಮೆಯಾಗಿ ಹೊರಹೊಮ್ಮಿದೆ. ಬಡವರ ಹಣ ಮುಳುಗುತ್ತದೆ ಎಂದು ಎಲ್‌ಐಸಿ ಬಗ್ಗೆ ಅನೇಕ ರೀತಿಯಲ್ಲಿ ಆಡಿಕೊಂಡರು.ಆದರೆ ಇಂದು ಎಲ್‌ಐಸಿ ಬಲಶಾಲಿಯಾಗುತ್ತಿದೆ. ಷೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರಿಗೆ ಒಂದು ಮಂತ್ರ ಇದೆ. ಅವರು(ಪ್ರತಿಪಕ್ಷಗಳು) ಯಾವ ಸರ್ಕಾರಿ ಕಂಪನಿಗಳಿಗೆ ಬೈಯುತ್ತಾರೆಯೋ ಆ ಕಂಪನಿಯಲ್ಲಿ ಹೂಡಿಕೆ ಮಾಡಿ. ಅಲ್ಲಿ ಒಳ್ಳೆಯದೇ ಆಗುತ್ತದೆ

ಈ ಜನರು ಸತ್ತಿದೆ ಘೋಷಿಸಲ್ಪಟ್ಟ ದೇಶದ ಎಲ್ಲಾ ಸಂಘಟನೆಗಳು ಇವೆಯಲ್ಲಾ ಆ ಸಂಸ್ಥೆಗಳಿಗೆ ಅದೃಷ್ಟ ಬರುತ್ತದೆ. ಅವರು ದೇಶ ಮತ್ತು ಪ್ರಜಾಪ್ರಭುತ್ವವನ್ನು ಶಪಿಸುತ್ತಿರುವ ರೀತಿ ನೋಡಿದರೆ ದೇಶ ಮತ್ತು ಪ್ರಜಾಪ್ರಭುತ್ವವು ಬಲಗೊಳ್ಳಲಿದೆ ಎಂದು ನನಗೆ ವಿಶ್ವಾಸವಿದೆ. ನಾವೂ ಬಲಿಷ್ಠರಾಗಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ ನಮ್ಮ ಆರ್ಥಿಕತೆಯನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತೇವೆ ಎಂದು ನಾವು ಹೇಳಿದಾಗ, ಜವಾಬ್ದಾರಿಯುತ ಪ್ರತಿಪಕ್ಷಗಳು ನಾವು ಅದನ್ನು ಹೇಗೆ ಮಾಡುತ್ತೇವೆ ಎಂಬ ಪ್ರಶ್ನೆಗಳನ್ನು ಕೇಳುತ್ತವೆ. ಇದನ್ನೂ ನಾನು ಕಲಿಯಬೇಕಾಗಿ ಬರುತ್ತಿದೆ. ಎಲ್ಲವೂ ತಾನಾಗಿಯೇ ನಡೆಯುತ್ತದೆ ಎಂದು ಕಾಂಗ್ರೆಸ್ ಹೇಳಿದರೆ, ಅದರರ್ಥ ಕಾಂಗ್ರೆಸ್‌ಗೆ ಜಾಗತಿಕ ಆರ್ಥಿಕ ವ್ಯವಸ್ಥೆ ಅಥವಾ ಭಾರತದ ಆರ್ಥಿಕ ಪ್ರಪಂಚದ ಶಕ್ತಿಯ ಬಗ್ಗೆ ನೀತಿ ಅಥವಾ ಉದ್ದೇಶ ಅಥವಾ ದೂರದೃಷ್ಟಿ ಅಥವಾ ತಿಳುವಳಿಕೆ ಇಲ್ಲ.

ದೇಶದ ಜನತೆಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ

ದೇಶದ ಜನತೆಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ, ದುರಹಂಕಾರದಿಂದ ವಾಸ್ತವವನ್ನು ನೋಡಲು ಸಾಧ್ಯವಾಗುತ್ತಿಲ್ಲ, ತಮಿಳುನಾಡಿನಲ್ಲಿ 1962ರಲ್ಲಿ ಅವರು ಗೆದ್ದಿದ್ದರು.1962ರಿಂದ ತಮಿಳುನಾಡಿನ ಜನತೆ ಕಾಂಗ್ರೆಸ್ ಬೇಡ ಎನ್ನುತ್ತಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಅವರು 1972 ರಲ್ಲಿ ಗೆದ್ದರು, ಪಶ್ಚಿಮ ಬಂಗಾಳದ ಜನರು ಸಹ ‘ಕಾಂಗ್ರೆಸ್ ಬೇಡ’ ಎಂದು ಹೇಳುತ್ತಿದ್ದಾರೆ.ಅವರು 1985 ರಲ್ಲಿ ಯುಪಿ, ಬಿಹಾರ ಮತ್ತು ಗುಜರಾತ್ ನಲ್ಲಿ ಗೆದ್ದಿದ್ದಾರೆ ಈ ರಾಜ್ಯಗಳ ಜನರು ಸಹ ಕಾಂಗ್ರೆಸ್ ಬೇಡ ಎಂದು ಹೇಳುತ್ತಿದ್ದಾರೆ.

ಯೋಜನೆ ಮತ್ತು ಕಠಿಣ ಪರಿಶ್ರಮದ ನಿರಂತರತೆ ಮುಂದುವರಿಯುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಹೊಸ ಸುಧಾರಣೆಗಳು ಮತ್ತು ಕಾರ್ಯಕ್ಷಮತೆಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ನಾವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ. ದೇಶವು ನಂಬುತ್ತದೆ. ನೀವು 2028 ರಲ್ಲಿ ಅವಿಶ್ವಾಸ ನಿರ್ಣಯವನ್ನು ತಂದಾಗ, ದೇಶವು ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಿರುತ್ತದೆ ಎಂದಿದ್ದಾರೆ ಮೋದಿ.

I.N.D.I.A. ಮೈತ್ರಿ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಅವರಿಗೆ ಅದೆಷ್ಟು ತೊಂದರೆ ಎಂದರೆ ಅವರು ತಮ್ಮನ್ನು ಬದುಕಿಸಿಕೊಳ್ಳಲು ಎನ್‌ಡಿಎ ಬೆಂಬಲವನ್ನು ತೆಗೆದುಕೊಳ್ಳಬೇಕಾಯಿತು. ಆದರೆ, ಅಭ್ಯಾಸಬಲದಿಂದ’I’ ಎಂಬ ಅಹಂಕಾರವು ಅವರನ್ನು ಮಾತ್ರ ಬಿಡುವುದಿಲ್ಲ. ಅದಕ್ಕಾಗಿಯೇ ಅವರು ಎನ್ ಡಿಎಯಲ್ಲಿ ಎರಡು ‘I’ಗಳನ್ನು ಸೇರಿಸಿದರು. ಮೊದಲನೆಯ I 26 ಪಕ್ಷಗಳ ದುರಹಂಕಾರ ಮತ್ತು ಎರಡನೆಯ I ಒಂದು ಕುಟುಂಬದ ದುರಹಂಕಾರ.ಅವರು ಎನ್‌ಡಿಎಯನ್ನೂ ಕದ್ದರು.ಅವರು ಭಾರತವನ್ನು I.N.D.I.A.ಎಂದು ಒಡೆದರು.

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಯುಪಿಎ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಕಾರಣ ನಾನು ವಿರೋಧ ಪಕ್ಷಗಳೊಂದಿಗೆ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಒಂದು ಕಡೆ ನೀವು ಅಂತಿಮ ಸಂಸ್ಕಾರ ಮಾಡುತ್ತಿದ್ದೀರಿ, ಇನ್ನೊಂದೆಡೆ ಸಂಭ್ರಮಾಚರಣೆಯನ್ನೂ ಮಾಡುತ್ತಿದ್ದೀರಿ. ಆ ಸಂಭ್ರಮಾಚರಣೆ ಯಾವುದಕ್ಕೆ ಗೊತ್ತಾ, ಒಡೆದು ಹೋಗಿದ್ದಕ್ಕೆ ಪ್ಲಾಸ್ಟರ್ ಹಚ್ಚಿದ್ದಕ್ಕೆ. .ಇಷ್ಟು ತಲೆಮಾರುಗಳ ನಂತರವೂ ಲಾಲ್ ಮಿರ್ಚ್ ಮತ್ತು ಹರಿ ಮಿರ್ಚ್ ಅನ್ನು ಪ್ರತ್ಯೇಕಿಸಲು ಸಾಧ್ಯವಾಗದವರನ್ನು ನೀವು ಅನುಸರಿಸುತ್ತಿದ್ದೀರಿ ಎಂದು ನಾನು ಪ್ರತಿಪಕ್ಷಗಳಿಗೆ ಹೇಳಲು ಬಯಸುತ್ತೇನೆ.

ಲಂಕೆಯನ್ನು ಹನುಮಂತ ಸುಡಲಿಲ್ಲ, ಅವನ (ರಾವಣ) ದುರಹಂಕಾರದಿಂದ ಹೊತ್ತಿ ಉರಿದದ್ದು ನಿಜ, ಜನರು ಕೂಡ ರಾಮನಂತಿದ್ದಾರೆ ಮತ್ತು ಅದಕ್ಕಾಗಿಯೇ ನಿಮ್ಮನ್ನು 400 ರಿಂದ 40 ಕ್ಕೆ ಇಳಿಸಲಾಗಿದೆ. ಎರಡೆರಡು ಬಾರಿ ಪೂರ್ಣ ಬಹುಮತದ ಸರ್ಕಾರ. ಆದರೆ ಇಲ್ಲಿ ಬಡವನೊಬ್ಬ ಕೂತಿದ್ದು ನಿಮಗೆ ನಿದ್ದೆಮಾಡಲು ಬಿಡುತ್ತಿಲ್ಲ. 2024ರಲ್ಲೂ ದೇಶದ ಜನತೆ ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದು ನಿಮಗೆ ತೊಂದರೆಯಾಗುತ್ತಿದೆ. ಜನ್ಮದಿನದಂದು ವಿಮಾನದಲ್ಲಿ ಕೇಕ್ ಕತ್ತರಿಸುವ ಕಾಲವೊಂದಿತ್ತು. ಆದರೆ ಇಂದು ಆ ಏರೋಪ್ಲೇನ್‌ಗಳಲ್ಲಿ ಬಡವರಿಗೆ ಲಸಿಕೆಗಳನ್ನು ಕಳುಹಿಸಲಾಗುತ್ತಿದೆ.

ಅವರಿಗೆ ಮೋದಿ ಮೇಲೆ ಪ್ರೀತಿ ಎಷ್ಟಿದೆ ಎಂದರೆ ಮೋದಿಯದ್ದೇ ಕನಸು ಬೀಳುತ್ತದೆ

ಮನಸ್ಸಿನ ಮಾತುಗಳನ್ನಾಡುವಂತೆ ಇಲ್ಲಿ ಹೇಳಲಾಗಿತ್ತು, ಅವರ ಬುದ್ಧಿ ಬಗ್ಗೆ ದೇಶದ ಜನರಿಗೆ ಹಲವು ವರ್ಷದಿಂದ ಗೊತ್ತು. ಆಗ ಅವರ ಮನಸ್ಸೂ ಅರ್ಥ ಆಯ್ತು. ಅವರ ‘ಮೋದಿ ಪ್ರೀತಿ ಎಷ್ಟಿದೆ ಎಂದರೆ ಅವರಿಗೆ ಮೋದಿಯ ಕನಸು ಬೀಳುತ್ತದೆ.ಭಾಷಣ ಮಾಡುವಾಗ ಮೋದಿ ನೀರು ಕುಡಿದರೆ ‘ಮೋದಿ ಕೋ ಪಾನಿ ಪಿಲಾ ದಿಯಾ’ ಎನ್ನುತ್ತಾರೆ. ಸುಡು ಬಿಸಿಲಿನಲ್ಲಿ ಬಡವರನ್ನು ಭೇಟಿಯಾಗಲು ಹೊರಟಾಗ ಬೆವರು ಒರೆಸಿಕೊಂಡರೆ ‘ದೇಖಿಯೇ ಮೋದ ಕೋ ಪಸೀನಾ ಲಾ ದೀಯಾ ಎನ್ನುತ್ತಾರೆ ಅವರು.

ಈ ‘ಘಮಾಂಡಿಯಾ’ ಮೈತ್ರಿಯು ಎರಡಂಕಿಯ ಹಣದುಬ್ಬರ, ಭ್ರಷ್ಟಾಚಾರ, ನೀತಿ ಕುಂಟುವಿಕೆ , ಅಸ್ಥಿರತೆ, ಮೆಚ್ಚಿಸುವುದು, ರಾಜವಂಶ, ನಿರುದ್ಯೋಗ, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಖಾತರಿಯಾಗಿದೆ. ಇದು ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದು ಆಗಲಿದೆ ಎಂಬುದು ಮೋದಿಯವರ ಭರವಸೆಯಾಗಿದೆ.

ಕಾಂಗ್ರೆಸ್‌ನ ತೊಂದರೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅವರು ವರ್ಷಗಳಿಂದ, ಅವರು ಮತ್ತೆ ಮತ್ತೆ ವಿಫಲವಾದ ಉತ್ಪನ್ನವನ್ನೇ ಮುಂದಿಡುತ್ತಿದ್ದಾರೆ.ಆದರೆ ಇದು ವಿಫಲವಾಗಿದೆ. ಇದರ ಪರಿಣಾಮವೆಂದರೆ ಮತದಾರರ ಮೇಲಿನ ಅವರ ದ್ವೇಷವು ಉತ್ತುಂಗ ತಲುಪಿದೆ.ಅವರು ವಿಫಲವಾದಾಗ ಅದರ ದ್ವೇಷವನ್ನು ಮತದಾರರ ಮೇಲೆ ತೋರಿಸುತ್ತಿದ್ದಾರೆ.ಆದರೆ PR ಜನರು ‘ಮೊಹಬ್ಬತ್ ಕಿ ದುಕಾನ್’ ಎಂದು ಪ್ರಚಾರ ಮಾಡುತ್ತಾರೆ. ಅದಕ್ಕಾಗಿಯೇ, ದೇಶದ ಜನರು ‘ಯೇ ಹೈ ಲೂಟ್ ಕಿ ದುಕಾನ್, ಝೂಟ್ ಕಾ ಬಜಾರ್’ ಎಂದು ಹೇಳುತ್ತಿದ್ದಾರೆ.

ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗುವುದು

ಮಣಿಪುರದ ವಿಚಾರ ಮಾತನಾಡಿದ ಮೋದಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿವೆ. ಮುಂಬರುವ ಸಮಯದಲ್ಲಿ ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗುವುದು ಎಂದು ನಾನು ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ದೇಶವು ನಿಮ್ಮೊಂದಿಗಿದೆ ಎಂದು ಮಣಿಪುರದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಹೊರಗೆ ಹೋದವರಲ್ಲಿ ನಾನು ಕೇಳುತ್ತಿದ್ದೇನೆ, ಕಚ್ಚತೀವು ಎಂದರೆ ಏನು? ಮತ್ತು ಅದು ಎಲ್ಲಿದೆ? ಡಿಎಂಕೆ ಸರ್ಕಾರ, ಅವರ ಸಿಎಂ ನನಗೆ ಪತ್ರ ಬರೆದಿದ್ದಾರ.ಮೋದಿ ಜಿ ಕಚ್ಚತೀವು ಮರಳಿ ತನ್ನಿ ಎಂದು. ಇದು ದ್ವೀಪ. ಆದರೆ ಅದನ್ನು ಬೇರೆ ದೇಶಕ್ಕೆ ಕೊಟ್ಟವರು ಯಾರು. ಇದು ಮಾ ಭಾರತಿಯ ಒಂದು ಭಾಗವಾಗಿರಲಿಲ್ಲವೇ? ಇದು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಸಂಭವಿಸಿತು.

ಈಶಾನ್ಯದಲ್ಲಿ ರಾಜ್ಯಗಳ ಬಗ್ಗೆ ಮಾತನಾಡಿದ ಮೋದಿ 5ನೇ ಮಾರ್ಚ್ 1966 ರಂದು, ಮಿಜೋರಾಂನಲ್ಲಿ ಅಸಹಾಯಕ ನಾಗರಿಕರ ಮೇಲೆ ಕಾಂಗ್ರೆಸ್ ವಾಯುಪಡೆಯಿಂದ ದಾಳಿ ನಡೆಸಿತು. ಅದು ಬೇರೆ ಯಾವುದೇ ದೇಶದ ವಾಯುಪಡೆಯಾಗಿದ್ದರೆ ಕಾಂಗ್ರೆಸ್ ಉತ್ತರಿಸಬೇಕು. ಮಿಜೋರಾಂನ ಜನರು ನನ್ನ ದೇಶದ ಪ್ರಜೆಗಳಲ್ಲವೇ? ಅವರ ಭದ್ರತೆ ಭಾರತ ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಮೋದಿ ಕೇಳಿದ್ದಾರೆ.

ಮಣಿಪುರದಲ್ಲಿ ಬಂಡಾಯ ಸಂಘಟನೆಗಳ ಅಪೇಕ್ಷೆಯಂತೆ ಎಲ್ಲವೂ ನಡೆಯುತ್ತಿದ್ದಾಗ ಮಣಿಪುರದಲ್ಲಿ ಯಾರ ಸರ್ಕಾರವಿತ್ತು? ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿಯವರ ಚಿತ್ರಕ್ಕೆ ಅವಕಾಶ ನೀಡದಿದ್ದಾಗ ಮಣಿಪುರದಲ್ಲಿ ಯಾರ ಸರ್ಕಾರ ಇತ್ತು?. ಶಾಲೆಗಳಲ್ಲಿ ರಾಷ್ಟ್ರಗೀತೆಗೆ ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿರೋಧ ಪಕ್ಷ ಆಯ್ದ ನೋವುಗಳ ಬಗ್ಗೆ ಮಾತ್ರ ಮಾತನಾಡುತ್ತಿದೆ. ಅವರು ರಾಜಕೀಯದಾಚೆಗೆ ಚಿಂತಿಸುತ್ತಿಲ್ಲ.

2018 ರಲ್ಲಿ, ನಾನು ಅವರಿಗೆ (ವಿರೋಧ ಪಕ್ಷಕ್ಕೆ) ಒಂದು ಕೆಲಸ ನೀಡಿದ್ದೇನೆ. 2023 ರಲ್ಲಿ ಅವಿಶ್ವಾಸ ನಿರ್ಣಯ ತರಲು ನನ್ನ ಮಾತನ್ನು ಅನುಸರಿಸಿದರು. ಆದರೆ ನನಗೆ ಬೇಸರವಾಗಿದೆ. 5 ವರ್ಷಗಳಲ್ಲಿ ಅವರು ಉತ್ತಮವಾಗಿ ಮಾಡಬೇಕಿತ್ತು. ಆದರೆ ಯಾವುದೇ ಸಿದ್ಧತೆ, ಯಾವುದೇ ಹೊಸತನ, ಸೃಜನಶೀಲತೆ ಇರಲಿಲ್ಲ. 2028ಕ್ಕೆ ನಿಮಗೆ ಇನ್ನೊಂದು ಅವಕಾಶ ನೀಡುತ್ತೇನೆ. ಆದರೆ 2028ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವಾಗ ಸಿದ್ಧರಾಗಿ ಬನ್ನಿ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ ದೊಡ್ಡ ವೈಫಲ್ಯ

ಇಂದು ಬೆಳಗ್ಗೆ ಆಡಳಿತಾರೂಢ ಸರ್ಕಾರದ ಮೇಲೆ ತೀವ್ರ ಟೀಕಾ ಪ್ರಹಾರ ಮಾಡಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಬಿಜೆಪಿಯ “ದೊಡ್ಡ ವೈಫಲ್ಯ” ಎಂದು ಹೇಳಿದರು. ಕೇಂದ್ರದ “ಮಣಿಪುರದಲ್ಲಿ ಮೌನ ಸಂಹಿತೆ”ಯನ್ನು ಕೊನೆಗೊಳಿಸುವುದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಗುರಿಯಾಗಿದೆ. ಈ ನಿರ್ಣಯವು ಮಣಿಪುರದಲ್ಲಿ ಈ ಮೌನ ಸಂಹಿತೆಯನ್ನು ಮುರಿಯುವುದಾಗಿದೆ. ಪ್ರಧಾನಿ ಮೋದಿ ನಮ್ಮ ಮಾತು ಕೇಳುವುದಿಲ್ಲ, ಕೊನೆಯ ದಿನ ಬಂದು ಭಾಷಣ ಮಾಡುತ್ತಾರೆ. ನಮ್ಮ ಪ್ರಧಾನಿ ಸಂಸತ್ತಿಗೆ ಬರಲು ನಿರಾಕರಿಸುತ್ತಾರೆ ಅಥವಾ ಅವರು ಮಣಿಪುರಕ್ಕೆ ಹೋಗಲು ನಿರಾಕರಿಸುತ್ತಾರೆ. ಇದಕ್ಕಿಂತ ಹೆಚ್ಚು ದುರದೃಷ್ಟಕರ ಸಂಗತಿ ಏನೆಂದು ನನಗೆ ತಿಳಿದಿಲ್ಲ ಎಂದಿದ್ದೆ ಮಹುವಾ ಮೊಯಿತ್ರಾ.

ಅವಿಶ್ವಾಸ ನಿರ್ಣಯವು ಪ್ರಧಾನಿ ಮೋದಿಯನ್ನು ಸಂಸತ್ತಿಗೆ ಬರುವಂತೆ ಮಾಡಿತು: ಅಧೀರ್ ರಂಜನ್ ಚೌಧರಿ

ಇಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಷಣದ ಮೊದಲು ಮಾತನಾಡಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಅವಿಶ್ವಾಸ ನಿರ್ಣಯದ ಶಕ್ತಿಯೇ ಇಂದು ಪ್ರಧಾನಿಯನ್ನು ಸಂಸತ್ತಿಗೆ ಕರೆತಂದಿದೆ. ಈ ಅವಿಶ್ವಾಸ ನಿರ್ಣಯದ ಬಗ್ಗೆ ನಾವೇನೂ ಯೋಚಿಸಿರಲಿಲ್ಲ. ಪ್ರಧಾನಿ ಮೋದಿಯವರು ಸಂಸತ್ತಿಗೆ ಬಂದು ಮಣಿಪುರ ವಿಷಯದ ಬಗ್ಗೆ ಮಾತನಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೆವು. ನಾವು ಯಾವುದೇ ಬಿಜೆಪಿ ಸದಸ್ಯರನ್ನು ಸಂಸತ್ತಿಗೆ ಬರುವಂತೆ ಒತ್ತಾಯಿಸುತ್ತಿರಲಿಲ್ಲ, ನಮ್ಮ ಪ್ರಧಾನಿ ಬರುವಂತೆ ನಾವು ಒತ್ತಾಯಿಸುತ್ತಿದ್ದೆವು ಎಂದಿದ್ದಾರೆ.

ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಗೆ ಆಗಮಿಸುತ್ತಿದ್ದಂತೆ, ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ, ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ದೇಶದಲ್ಲಿನ ಆಂತರಿಕ ಕಲಹ ಎಂದು ಕರೆದರು. ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುತ್ತಿದ್ದರು. ಆದರೆ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳ ಬಗ್ಗೆ ಹೇಳಿಕೆ ನೀಡಲು ಅವರಿಗೆ ಸಮಯ ಇರಲಿಲ್ಲ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Thu, 10 August 23