Video: ವಾರಾಣಸಿಯ ಕಾಲ ಭೈರವ ಮಂದಿರದಲ್ಲಿ ಆರತಿ ಸಲ್ಲಿಸಿ, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

Kashi Vishwanath Corridor: ಕೇಸರಿ ಅಂಗಿ, ಪೈಜಾಮಾ ಮಾದರಿಯ ಪ್ಯಾಂಟ್ ಧರಿಸಿರುವ ಪ್ರಧಾನಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನೂ ಹಾಕಿದ್ದಾರೆ. ನಂತರ ನದಿ ನೀರಿನಲ್ಲಿ ಇಳಿದು ಅದರಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Video: ವಾರಾಣಸಿಯ ಕಾಲ ಭೈರವ ಮಂದಿರದಲ್ಲಿ ಆರತಿ ಸಲ್ಲಿಸಿ, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ
Edited By:

Updated on: Dec 13, 2021 | 12:54 PM

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಲಿದ್ದು, ತನ್ನಿಮಿತ್ತ ಈಗಾಗಲೇ ವಾರಾಣಸಿಗೆ ತೆರಳಿದ್ದಾರೆ. ನಂತರ ಅಲ್ಲಿರುವ ಕಾಲಭೈರವ ಮಂದಿರದಲ್ಲಿ ಆರತಿ ಮಾಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಅವರೊಂದಿಗೆ ಇದ್ದರು. ಕಾಲಭೈರವ ಮಂದಿರದಲ್ಲಿ ಆರತಿ, ಪೂಜೆ ಸಲ್ಲಿಸಿದ ಬಳಿಕ ಇವರಿಬ್ಬರೂ ವಾರಾಣಸಿಯ ಖಿರ್ಕಿಯಾ ಘಾಟ್‌ನಿಂದ ಲಲಿತಾ ಘಾಟ್‌ಗೆ ಕ್ರೂಸ್ ಹಡಗಿನಲ್ಲಿ ತೆರಳಿದ್ದಾರೆ. ಲಲಿತ್​ ಘಾಟ್​​ ಬಳಿ ಗಂಗಾನದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡಿದ್ದಾರೆ. ಅದರ ವಿಡಿಯೋ ಈಗಾಗಲೇ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಕೇಸರಿ ಅಂಗಿ, ಪೈಜಾಮಾ ಮಾದರಿಯ ಪ್ಯಾಂಟ್ ಧರಿಸಿರುವ ಪ್ರಧಾನಿ ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನೂ ಹಾಕಿದ್ದಾರೆ. ನಂತರ ನದಿ ನೀರಿನಲ್ಲಿ ಇಳಿದು ಅದರಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೂರ್ಯದೇವನಿಗೆ ಪೂಜೆ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2019ರಲ್ಲಿ ಪ್ರಯಾಗ್​ ರಾಜ್​​ನಲ್ಲಿ ನಡೆದ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಸ್ನಾನ ಮಾಡಿದ್ದರು. ಅಂದು ತ್ರಿವೇಣಿ ಘಾಟ್​​ನಲ್ಲಿ ಪವಿತ್ರ ಸ್ನಾನ ಮಾಡಿದ್ದ ಮೋದಿ ನಂತರ ಸಫಾಯಿ ಕರ್ಮಚಾರಿಗಳ ಪಾದ ತೊಳೆದು ಪೂಜೆ ಸಲ್ಲಿಸಿದ್ದರು.

ಇಂದು ಬೆಳಗ್ಗೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಅವರ ಕಾರಿನ ಮೇಲೆಯೇ ಹೂವಿನ ಎಸಳುಗಳ ಸುರಿಮಳೆ ಸುರಿಸಲಾಯಿತು. ಸ್ಥಳೀಯರು ಮೋದಿ..ಮೋದಿ, ಹರಹರ ಮಹದೇವ್​ ಎಂಬ ಘೋಷಣೆ ಕೂಗುತ್ತಿದ್ದರು. ಇದು ಅವರ ಲೋಕಸಭಾ ಕ್ಷೇತ್ರವೂ ಹೌದು. ಎರಡು ದಿನಗಳ ಕಾಶಿ ಪ್ರವಾಸ ಹಮ್ಮಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಕಾಶಿ-ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ.  ಈ ಕಾರಿಡಾರ್ ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದ್ದು 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ, 900 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದು ಕಾಶಿ ವಿಶ್ವನಾಥ ದೇಗುಲದಿಂದ ಗಂಗಾನದಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. ಕಾರಿಡಾರ್ ನಿರ್ಮಾಣಕ್ಕೆ 2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಅದನ್ನೀಗ ಉದ್ಘಾಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಆವರಿಸಿದ ಮಳೆ ಮೋಡ, ಮುಂದಿನ 2 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ

Published On - 12:50 pm, Mon, 13 December 21