PM Modi: ಇಂದು ಪಿಎಂ-ಕಿಸಾನ್ ಯೋಜನೆಯ 10ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ; ಪರಿಶೀಲನೆ ವಿಧಾನ ಹೇಗೆ?- ಇಲ್ಲಿದೆ ಮಾಹಿತಿ
ಇಂದು ಬಿಡುಗಡೆ ಮಾಡುತ್ತಿರುವ 10ನೇ ಕಂತು, ದೇಶದ ಸುಮಾರು 10 ಕೋಟಿ ರೈತ ಕುಟುಂಬಗಳಿಗೆ 20 ಸಾವಿರ ಕೋಟಿ ರೂಪಾಯಿ ವರ್ಗಾವಣೆ ಮಾಡುವ ಯೋಜನೆಯನ್ನು ಒಳಗೊಂಡಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) (Pradhan Mantri Kisan Samman Nidhi) ಯೋಜನೆಯಡಿಯಲ್ಲಿ ಬರುವ ಆರ್ಥಿಕ ಪ್ರಯೋಜನಗಳ 10ನೇ ಕಂತನ್ನು ಇಂದು ಮಧ್ಯಾಹ್ನ 12.30ರ ಹೊತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಬಿಡುಗಡೆ ಮಾಡಲಿದ್ದಾರೆ. ಹೊಸವರ್ಷದ ಮೊದಲ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಈ ಇನ್ಸ್ಟಾಲ್ಮೆಂಟ್ ಬಿಡುಗಡೆ ಮಾಡುತ್ತಿದ್ದಾರೆ. ದೇಶದ ತಳಮಟ್ಟದ ರೈತರ ಸಬಲೀಕರಣ ಮತ್ತು ಸರ್ಕಾರದ ನಿರಂತರ ಬದ್ಧತೆಗೆ ಪೂರಕವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಇಂದು ಬಿಡುಗಡೆ ಮಾಡುತ್ತಿರುವ 10ನೇ ಕಂತು, ದೇಶದ ಸುಮಾರು 10 ಕೋಟಿ ರೈತ ಕುಟುಂಬಗಳಿಗೆ 20 ಸಾವಿರ ಕೋಟಿ ರೂಪಾಯಿ ವರ್ಗಾವಣೆ ಮಾಡುವ ಯೋಜನೆಯನ್ನು ಒಳಗೊಂಡಿದೆ. ಪಿಎಂ-ಕಿಸಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ನೀಡಲಾಗುತ್ತಿದೆ. ಈ ಹಣವನ್ನು ನೇರವಾಗಿ ರೈತರ ಖಾತೆಗೇ ಹಾಕಲಾಗುತ್ತಿದೆ. ಇಲ್ಲಿಯವರೆಗೆ ಪ್ರಸಕ್ತ ಯೋಜನೆಯಡಿ 1.6 ಲಕ್ಷ ಕೋಟಿ ರೂಪಾಯಿಗಳಷ್ಟು ಸಮ್ಮಾನ್ ರಾಶಿಯನ್ನು ರೈತರ ಕುಟುಂಬಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಪಿಎಂಒ ಮಾಹಿತಿ ನೀಡಿದೆ.
ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 351 ರೈತ ಉತ್ಪಾದನಾ ಸಂಸ್ಥೆಗಳಿಗೆ 14 ಕೋಟಿ ರೂ.ಗೂ ಅಧಿಕ ಈಕ್ವಿಟಿ ಅನುದಾನ ಬಿಡುಗಡೆ ಮಾಡಲಿದ್ದಾರೆ. ಇದು ಸುಮಾರು 1.24 ಲಕ್ಷ ರೈತರಿಗೆ ಅನುಕೂಲ ಒದಗಿಸಲಿದೆ. ಇದೇ ವೇಳೆ ರೈತ ಉತ್ಪಾದನಾ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸುವರು. ಅದಾದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ನಿಮ್ಮ ಕಿಸಾನ್-ಸಮ್ಮಾನ್ ಕಂತನ್ನು ಪರಿಶೀಲನೆ ಮಾಡುವ ವಿಧಾನ ಹೀಗಿದೆ.. 1. ಮೊದಲು ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ https://pmkisan.gov.in/. ಗೆ ಭೇಟಿ ನೀಡಿ 2.ಹೋಂ ಪೇಜ್ನಲ್ಲಿರುವ ‘Farmer’s Corner Section’ ಮೇಲೆ ಕ್ಲಿಕ್ ಮಾಡಿ. 3. ಅದರಲ್ಲಿ Beneficiary Status (ಫಲಾನುಭವಿಗಳ ಸ್ಥಿತಿ) ಎಂಬ ಆಪ್ಷನ್ನ್ನು ಆಯ್ಕೆ ಮಾಡಿ. (ಅಲ್ಲಿ ಈ ಯೋಜನೆಯ ಫಲಾನುಭವಿ ಆತನ/ಆಕೆಯ ಅರ್ಜಿಯ ಸ್ಥಿತಿ ಪರಿಶೀಲನೆ ಮಾಡಬಹುದು. ಕಿಸಾನ್-ಸಮ್ಮಾನ್ ಯೋಜನೆಯ ಫಲಾನುಭವಿ ರೈತರ ಹೆಸರು ಮತ್ತು ಅವರ ಬ್ಯಾಂಕ್ಗೆ ಕಳಿಸಲಾದ ಹಣದ ಮೊತ್ತದ ಪಟ್ಟಿ ಇರುತ್ತದೆ. ( 4. ಫಲಾನುಭವಿಗಳ ಸ್ಥಿತಿ ಕ್ಲಿಕ್ ಮಾಡಿದ ಮೇಲೆ, ಅಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಫೋನ್ ನಂಬರ್ ಅಥವಾ ಅಕೌಂಟ್ ನಂಬರ್ ನಮೂದಿಸಬೇಕು. 5. ಇಷ್ಟಾದ ಮೇಲೆ ನಿಮ್ಮ ಡಾಟಾ ಪಡೆಯಬಹುದು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವೇಳೆ ಎಂಇಎಸ್ ಪುಂಡಾಟಿಕೆ: ಪೊಲೀಸ್ ಆಯುಕ್ತ ಎತ್ತಂಗಡಿ, ದುಷ್ಕರ್ಮಿಗಳಿಗೆ ಸಿಗಲಿಲ್ಲ ಜಾಮೀನು