ಕರ್ನಾಟಕದಲ್ಲೂ ನಡೆದಿದೆ ಚುನಾವಣಾ ಅಕ್ರಮ, ಶೀಘ್ರ ಸಾಕ್ಷ್ಯ ಕೊಡ್ತೇನೆ ಎಂದ ರಾಹುಲ್ ಗಾಂಧಿ
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಗದ್ದಲದ ನಡುವೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಮತಗಳನ್ನು ಕದಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕರ್ನಾಟಕದ ಉದಾಹರಣೆ ನೀಡಿದ್ದಾರೆ. ಕರ್ನಾಟಕದ ಲೋಕಸಭಾ ಕ್ಷೇತ್ರವನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಪಕ್ಷವು ಮತ ಕಳ್ಳತನದ ವಿಧಾನವನ್ನು ಕಂಡುಹಿಡಿದಿದೆ ಎಂದು ಹೇಳಿದ್ದಾರೆ. ನಾವು ಅವರ ಆಟವನ್ನು ಅರ್ಥಮಾಡಿಕೊಂಡಿದ್ದೇವೆಂದು ಅವರಿಗೆ ತಿಳಿದಿದೆ. ನಾವು ಒಂದು ಕ್ಷೇತ್ರವನ್ನು ಆರಿಸಿಕೊಂಡು ಆಳವಾಗಿ ಅಧ್ಯಯನ ಮಾಡಿದೆವು ಎಂದು ರಾಹುಲ್ ಹೇಳಿದ್ದಾರೆ.

ನವದೆಹಲಿ, ಜುಲೈ 24: ಕರ್ನಾಟಕದ ಚುನಾವಣೆ(Karnataka Election)ಯಲ್ಲೂ ಮತ ಕಳವು ನಡೆದಿದೆ, ಶೀಘ್ರವೇ ಸಾಕ್ಷ್ಯಗಳನ್ನು ನೀಡುವುದಾಗಿ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ಮುಂಗಾರು ಸಂಸತ್ ಅಧಿವೇಶನದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ಮಾತನಾಡಿರುವ ಅವರು, ಕರ್ನಾಟಕದ ಉದಾಹರಣೆ ನೀಡಿದರು. ಯಾವ ರೀತಿ ಮತಕಳವು ಮಾಡಲು ಸಾಧ್ಯ ಎನ್ನುವುದನ್ನು ದೇಶದ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಆಳವಾದ ಅಧ್ಯಯನ ನಡೆಸಿದ್ದೇವೆ. ಬೋಗಸ್ ವೋಟಿಂಗ್ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಯಾವ ರೀತಿ ಮತಕಳವು ಮಾಡಲು ಸಾಧ್ಯ ಎನ್ನುವುದನ್ನು ಕರ್ನಾಟಕದ ಈ ಕ್ಷೇತ್ರದ ಮೂಲಕವೇ ದೇಶದ ಜನರ ಮತ್ತು ಕೇಂದ್ರ ಚುನಾವಣಾ ಆಯೋಗದ ಮುಂದೆ ಇಡುತ್ತೇವೆ. ಸದ್ಯದಲ್ಲೇ ಎಲ್ಲಾ ವಿಚಾರಗಳ ಸತ್ಯವನ್ನು ಬಹಿರಂಗಪಡಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾದ ಗದ್ದಲದ ನಡುವೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಮಾಡಿದ್ದಾರೆ. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ 52 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ವಿಳಾಸಗಳಲ್ಲಿ ಇರಲಿಲ್ಲ ಮತ್ತು ಇನ್ನೂ 18 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ಬಹಿರಂಗಗೊಂಡ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಹೇಗೆ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎನ್ನುವ ಬಗ್ಗೆ ನಾವು ಎಲ್ಲರಿಗೂ ತೋರ್ಪಡಿಸಿದ್ದೆವು. ಅದೇ ರೀತಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲೂ ನಾವು ತನಿಖೆ ನಡೆಸಿದ್ದೇವೆ. ಅಲ್ಲಿ ದೊಡ್ಡ ಮಟ್ಟದಲ್ಲಿ ಮತಗಳ ಕಳ್ಳತನ ನಡೆದಿರುವುದು ಕಂಡುಬಂದಿದೆ. ಈ ಬಗ್ಗೆ ಶೀಘ್ರವೇ ಜನತೆಯ ಮುಂದೆ ಸಾಕ್ಷಿ ಸಮೇತ ಮಾಹಿತಿ ನೀಡಲಿದ್ದೇವೆ ಎಂದಿದ್ದಾರೆ.
ಮತ್ತಷ್ಟು ಓದಿ: ‘ಮನಮೋಹನ್ ಸಿಂಗ್ ನೀಡಿದ್ದ ಪ್ರಧಾನಿ ಹುದ್ದೆಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದರು’; ಪಪ್ಪು ಯಾದವ್
ಸಮಸ್ಯೆ ಏನೆಂದರೆ, ಅವರು ಮತದಾರರ ಪಟ್ಟಿಯನ್ನು ಕಾಗದದ ರೂಪದಲ್ಲಿ ನೀಡುತ್ತಾರೆ. ನಾವು ಅಂಥ ಪಟ್ಟಿಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ನಾವು ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಡಿಜಿಟಲೈಸ್ ಮಾಡಿದ್ದು, ಅದಕ್ಕೆ ಆರು ತಿಂಗಳು ಹಿಡಿಯಿತು. ಈ ಪ್ರಕ್ರಿಯೆಯಿಂದ ನಾವು ಆಯೋಗದ ಕಳ್ಳಾಟವನ್ನ ಪತ್ತೆಹಚ್ಚಿದೆವು. ಯಾರು ಮತ ಹಾಕುತ್ತಾರೆ, ಮತದಾರರನ್ನು ಹೇಗೆ ಸೇರಿಸಲಾಗುತ್ತದೆ, ಹಳೆಯವರನ್ನು ಹೇಗೆ ತೆಗೆದುಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಂಡೆವು ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ ವಿಡಿಯೋ
हिंदुस्तान में इलेक्शन चोरी किए जा रहे हैं, ये सच्चाई है!
महाराष्ट्र में कैसे मैच फिक्सिंग हुई, हमने सबको दिखाया।
कर्नाटक की एक लोकसभा सीट की जांच की – वहां बड़े पैमाने पर वोट चोरी मिली, जल्द जनता के सामने लाएंगे।
बिहार में SIR के नाम पर SC, ST, OBC और अल्पसंख्यक भाइयों-बहनों… pic.twitter.com/AxJRfUJqjT
— Rahul Gandhi (@RahulGandhi) July 23, 2025
2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 17 ಸ್ಥಾನಗಳನ್ನು ಪಡೆದಿತ್ತು.ಇದೇ ವೇಳೆ ಕರ್ನಾಟಕದ ಯಾವ ಲೋಕಸಭಾ ಕ್ಷೇತ್ರವನ್ನ ಅಧ್ಯಯನ ಮಾಡಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ಹೇಳಿಲ್ಲ.
ಅಕ್ರಮ ಬಗ್ಗೆ ನನಗೆ ತಿಳಿದಿಲ್ಲ: ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದು, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನನಗೆ ಈ ಬಗ್ಗೆ ಗೊತ್ತಿಲ್ಲ. ಹೀಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:54 am, Thu, 24 July 25




