Rahul Gandhi: ಏನು ಮಾಡಬಾರದೆಂದು ಸದಾ ನೆನಪಿಸುತ್ತಲೇ ಇರುವ ಬಿಜೆಪಿ ನನ್ನ ಗುರು; ರಾಹುಲ್ ಗಾಂಧಿ

ನಾನು ಏನು ಮಾಡಬಾರದು ಎಂದು ಬಿಜೆಪಿ ನಿರಂತರವಾಗಿ ನನಗೆ ನೆನಪಿಸುತ್ತಲೇ ಇದೆ. ಇದರಿಂದ ನಾನು ಬಿಜೆಪಿಯನ್ನು ನನ್ನ ಗುರುವೆಂದು ಭಾವಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Rahul Gandhi: ಏನು ಮಾಡಬಾರದೆಂದು ಸದಾ ನೆನಪಿಸುತ್ತಲೇ ಇರುವ ಬಿಜೆಪಿ ನನ್ನ ಗುರು; ರಾಹುಲ್ ಗಾಂಧಿ
ರಾಹುಲ್ ಗಾಂಧಿ ಸುದ್ದಿಗೋಷ್ಠಿ
Updated By: ಸುಷ್ಮಾ ಚಕ್ರೆ

Updated on: Dec 31, 2022 | 1:45 PM

ನವದೆಹಲಿ: ‘ಭಾರತ್ ಜೋಡೋ ಯಾತ್ರೆ’ (Bharat Jodo Yatra) ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಬಿಜೆಪಿ ನೇತೃತ್ವದ ಸರ್ಕಾರವು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ. ನಾನು ಬಿಜೆಪಿ (BJP) ವಿರುದ್ಧದ ಹೋರಾಟವನ್ನು ಮುಂದುವರೆಸುತ್ತೇನೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಭದ್ರತಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸುವುದು ಮತ್ತು ಕೋವಿಡ್ ಕಳವಳಗಳ ಕಾರಣ ಪಾದಯಾತ್ರೆಯನ್ನು ನಿಲ್ಲಿಸುವಂತೆ ಪತ್ರಗಳನ್ನು ಕಳುಹಿಸುವುದು ಈ ರೀತಿಯ ಕೆಲಸಗಳನ್ನು ಬಿಜೆಪಿ ಮಾಡುತ್ತಲೇ ಇದೆ. ಬಿಜೆಪಿ ರೋಡ್​ ಶೋಗಳನ್ನು (BJP Road Show) ಮಾಡುವಾಗ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ರಾಹುಲ್ ಗಾಂಧಿ, “ನೀವು ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗಬೇಕು ಎಂದು ಗೃಹ ಸಚಿವಾಲಯ ಹೇಳುತ್ತದೆ. ಅದು ಹೇಗೆ ಸಾಧ್ಯ? ನಾನು ಯಾತ್ರೆಗೆ ಕಾಲ್ನಡಿಗೆಯಲ್ಲಿ ನಡೆಯಬೇಕು. ಹಾಗಿರುವಾಗ ಬುಲೆಟ್ ಪ್ರೂಫ್ ವಾಹನದಲ್ಲಿ ಹೋಗಲು ಸಾಧ್ಯವೇ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: 2020ರಿಂದ ರಾಹುಲ್ ಗಾಂಧಿ 113 ಬಾರಿ ಭದ್ರತಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ: ಸಿಆರ್‌ಪಿಎಫ್

ತಮ್ಮ ಪಾದಯಾತ್ರೆಯ ಬಗ್ಗೆ ಬಿಜೆಪಿಯವರ ಗೇಲಿಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಜೆಪಿ ಬಹಳಷ್ಟು ಪ್ರಚಾರಗಳನ್ನು ಮಾಡುತ್ತದೆ. ಅವರ ಬಳಿ ಸಾಕಷ್ಟು ಹಣವಿದೆ, ಆದರೆ ಬಿಜೆಪಿಗೆ ಸತ್ಯದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ನಾನು ಆರೆಸ್ಸೆಸ್ ಮತ್ತು ಬಿಜೆಪಿಯ ಟೀಕೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದರಿಂದ ನಾವು ಮತ್ತಷ್ಟು ಬಲಶಾಲಿಯಾಗಿದ್ದೇವೆ. ನಾನು ಏನು ಮಾಡಬಾರದು ಎಂದು ಬಿಜೆಪಿ ನಿರಂತರವಾಗಿ ನನಗೆ ನೆನಪಿಸುತ್ತಲೇ ಇದೆ. ಇದರಿಂದ ನಾನು ಬಿಜೆಪಿಯನ್ನು ನನ್ನ ಗುರುವೆಂದು ಭಾವಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯು ದ್ವೇಷದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಇದು ನಮಗೆ ಯಶಸ್ವಿ ಯಾತ್ರೆಯಾಗಿದೆ. ಈ ಯಾತ್ರೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಿರುದ್ಯೋಗ ಸಮಸ್ಯೆಗಳು ಮತ್ತು ಬೆಲೆ ಏರಿಕೆಯ ಸಮಸ್ಯೆಗಳು ಜನರನ್ನು ಕಿತ್ತು ತಿನ್ನುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ; ಕಮಲನಾಥ್ ಅಚ್ಚರಿಯ ಹೇಳಿಕೆ

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಆಗಿರುವುದರಿಂದ ನಾನು ಭಾರತ್ ಜೋಡೋ ಯಾತ್ರೆಗೆ ಸೇರುವುದಿಲ್ಲ ಎಂದು ಅಖಿಲೇಶ್ ಯಾದವ್ ಇತ್ತೀಚೆಗೆ ಹೇಳಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, “ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೇನಾದರೂ ಇದ್ದಿದ್ದರೆ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿರಲಿಲ್ಲ. ಮೋದಿ ಬಿಜೆಪಿ ಮುಕ್ತ ಭಾರತವನ್ನು ಕೇಳುತ್ತಿದ್ದಾರೆಯೇ? ಆದರೆ, ಅಖಿಲೇಶ್ ಅವರಿಗೆ ತನಗೆ ಅನಿಸಿದ್ದನ್ನು ಹೇಳಲು ಸ್ವಾತಂತ್ರ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ