Raj Thackeray: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ ಠಾಕ್ರೆ ಏಕಾಂಗಿ ಸ್ಪರ್ಧೆ, 225-250 ಸ್ಥಾನಗಳ ಮೇಲೆ ಕಣ್ಣು
ಲೋಕಸಭೆ ಚುನಾವಣೆಯಲ್ಲಿ ಮಹಾಯುತಿಗೆ ಬೇಷರತ್ ಬೆಂಬಲ ನೀಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ವಿಧಾನಸಭೆಗೆ ಏಕಾಂಗಿಯಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ. ಮುಂಬೈನ ರಂಗಶಾರದಾದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ ಠಾಕ್ರೆ ಸ್ವಂತ ಬಲದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಇತ್ತೀಚಿನ ಸೋಲಿನ ನಂತರ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮುಂಬೈನಲ್ಲಿ ಗುರುವಾರ ನಡೆದ ಪಕ್ಷದ ಸಭೆಯಲ್ಲಿ ರಾಜ್ ಠಾಕ್ರೆ, ಪಕ್ಷವು 225–250 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದರು.
ಠಾಕ್ರೆ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎಗೆ ಬೇಷರತ್ ಬೆಂಬಲವನ್ನು ನೀಡಿದ್ದರು. ರಾಜ್ಯದ ಒಟ್ಟು 288 ವಿಧಾನಸಭಾ ಸ್ಥಾನಗಳಲ್ಲಿ ನಾವು ಸುಮಾರು 225 ರಿಂದ 250 ಸ್ಥಾನಗಳಿಗೆ ತಯಾರಿ ನಡೆಸುತ್ತಿದ್ದೇವೆ ಎಂದು ಠಾಕ್ರೆ ತಮ್ಮ ಭಾಷಣದಲ್ಲಿ ಹೇಳಿದ್ದರು.
ರಾಜ್ ಠಾಕ್ರೆ ಅವರು ತಮ್ಮ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಪ್ರತಿ ಕ್ಷೇತ್ರದಲ್ಲಿ ಐವರು ನಾಯಕರ ತಂಡವನ್ನು ನೇಮಿಸಿದ್ದಾರೆ. ಏಕಾಂಗಿಯಾಗಿ ಸ್ಪರ್ಧಿಸುವ ಪಕ್ಷದ ನಿರ್ಧಾರದ ಕುರಿತು ಎಂಎನ್ಎಸ್ ನಾಯಕ ಸಂದೀಪ್ ದೇಶಪಾಂಡೆ ಅವರು ಮಹಾಯುತಿ ಮೈತ್ರಿಕೂಟದ ಪ್ರಸ್ತಾಪಕ್ಕಾಗಿ ಕಾಯಲು ಸಾಧ್ಯವಿಲ್ಲ ಎಂದು ಹೇಳಿದರು.
ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ರಾಜ್ ಠಾಕ್ರೆ
ಸೀಟು ಹಂಚಿಕೆ ಕುರಿತು ಘಟಕ ಪಕ್ಷಗಳ ನಡುವೆ (ಬಿಜೆಪಿ, ಶಿವಸೇನೆ ಶಿಂಧೆ ಪಾಳಯ ಮತ್ತು ಎನ್ಸಿಪಿ ಅಜಿತ್ ಪವಾರ್ ಪಾಳಯ) ಇನ್ನೂ ಒಮ್ಮತ ಮೂಡಿದಂತೆ ಕಾಣುತ್ತಿಲ್ಲ ಎಂದು ದೇಶಪಾಂಡೆ ಹೇಳಿದರು.
ಒಬ್ಬರೇ ಶಾಸಕರಿದ್ದರೂ ಅವರು ಸ್ವಂತವಾಗಿ ಅಧಿಕಾರಕ್ಕೆ ಬರಲು ಸಿದ್ಧರಿದ್ದಾರೆ. ಉಪಮುಖ್ಯಮಂತ್ರಿ ಮತ್ತು ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮುಂಬರುವ ರಾಜ್ಯ ಚುನಾವಣೆಯಲ್ಲಿ 80 ರಿಂದ 90 ಸ್ಥಾನಗಳಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ, ಆದರೆ ಶಿಂಧೆ ಅವರ ಸೇನೆಯು ಸುಮಾರು 100 ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 288ರಲ್ಲಿ 160ರಿಂದ 170 ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ತೀರ್ಮಾನಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




