
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾಕಾಂಡದ ಪ್ರಮುಖ ಆರೋಪಿ ನಳಿನಿ ಶ್ರೀಹರನ್ ವೆಲ್ಲೂರು ಕಾರಾಗೃಹದಲ್ಲಿ ನಿನ್ನೆ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಶಿಕ್ಷೆ ಪಡೆದಿದ್ದ ನಳಿನಿ ಶ್ರೀಹರನ್ ಕಳೆದ 29 ವರ್ಷಗಳಿಂದ ಇದೇ ಜೈಲಿನಲ್ಲಿದ್ದರು. ನಳಿನಿ ಪರ ವಕೀಲೆ ಪುಗಳೇಂದಿ ಹೇಳುವ ಪ್ರಕಾರ ನಳಿನಿ ಹಾಗೂ ಮತ್ತೋರ್ವ ಜೀವಾವಧಿ ಶಿಕ್ಷೆ ಪಡೆದಿರುವ ಮಹಿಳಾ ಕೈದಿ ಮಧ್ಯೆ ಜಗಳ ಶುರುವಾಗಿತ್ತು.
ಈ ವಿಚಾರವನ್ನ ಆ ಕೈದಿ ಜೈಲರ್ ಗಮನಕ್ಕೆ ತಂದಿದ್ದ ಕಾರಣದಿಂದ ಮನನೊಂದ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪುಗಳೇಂದಿ ಮಾಹಿತಿ ನೀಡಿದ್ದಾರೆ.
ನನ್ನ ಪತ್ನಿಯನ್ನ ಬೇರೆ ಜೈಲಿಗೆ ವರ್ಗಾಯಿಸಿ
ಜೊತೆಗೆ, ನಳಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲ ಬಾರಿ. ಹೀಗಾಗಿ, ಈ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವೇನು ಎಂದು ತಿಳಿಯಬೇಕಿದೆ ಎಂದು ಪುಗಳೇಂದಿ ಹೇಳಿದ್ದಾರೆ. ಇದಲ್ಲದೆ, ನಳಿನಿಯ ಪತಿ ಮುರುಗನ್ ಸಹ ಇದೇ ಕಾರಾಗೃಹದಲ್ಲಿದ್ದು ತನ್ನ ಪತ್ನಿಯನ್ನ ಬೇರೆ ಜೈಲಿಗೆ ವರ್ಗಾಯಿಸಬೇಕೆಂಬ ಮನವಿ ಮಾಡಿಕೊಂಡಿದ್ದಾರಂತೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಮತ್ತು ಮುರುಗನ್ ಸೇರಿ ಏಳು ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಗಿತ್ತು.
Published On - 10:44 am, Tue, 21 July 20