AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ನಮ್ಮ ಬೇಡಿಕೆಗಳನ್ನು ಐದಾರು ತಿಂಗಳಲ್ಲಿ ಈಡೇರಿಸಬಹುದು: ರೈತ ನಾಯಕ ರಾಕೇಶ್ ಟಿಕಾಯತ್

ನಾನು ದೆಹಲಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಲು ಬಯಸಿಲ್ಲ. ಬದಲಾಗಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಬೇಕು ಎಂದು ರಾಕೇಶ್ ಟಿಕಾಯತ್ ಈ ಮುನ್ನವೇ ಹೇಳಿದ್ದರು.

ಸರ್ಕಾರ ನಮ್ಮ ಬೇಡಿಕೆಗಳನ್ನು ಐದಾರು ತಿಂಗಳಲ್ಲಿ ಈಡೇರಿಸಬಹುದು: ರೈತ ನಾಯಕ ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್
guruganesh bhat
|

Updated on: Apr 04, 2021 | 1:42 PM

Share

ಜೈಪುರ: ನಾವು ಗುಜರಾತ್​ಗೆ ಹೋಗುತ್ತೇವೆ. ಅಲ್ಲಿಯ ರೈತರ ಜತೆ ಕನಿಷ್ಠ ಬೆಂಬಲ ಬೆಲೆ ಮತ್ತು ಕೃಷಿ ಕಾಯ್ದೆಯ ಬಗ್ಗೆ ಚರ್ಚೆ ಮಾಡುತ್ತೇವೆ. ಗಾಂಧೀಜಿಯವರ ಸಬರಮತಿ ಆಶ್ರಮಕ್ಕೂ ಭೇಟಿ ನೀಡುತ್ತೇವೆ. ಇನ್ನು ಐದರಿಂದ ಆರು ತಿಂಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ರಾಜಸ್ಥಾನದಲ್ಲಿ ಭಾರತೀಯ ಕಿಸಾನ್ ಯೂನಿಯನ್​ನ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಈ ಮೊದಲೇ ತಿಳಿಸಿದಂತೆ ರೈತ ನಾಯಕ ರಾಕೇಶ್ ಟಿಕಾಯತ್ ಇಂದು ಮತ್ತು ನಾಳೆ (ಏಪ್ರಿಲ್ 1, 2) ಗುಜರಾತ್​ನಲ್ಲಿ ರೈತರ ಜತೆ ಸಂವಾದ ನಡೆಸಬೇಕಿತ್ತು. ಆದರೆ ಗುಜರಾತ್ ಪೊಲೀಸರು ರಾಕೇಶ್ ಟಿಕಾಯತ್​ ರಾಜ್ಯದಲ್ಲಿ ಸಭೆ ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸಲು ಅನುಮತಿ ಪಡೆದಿಲ್ಲ ಎಂದು ಹೇಳಿದ್ದರು. ಇತ್ತ, ನಾನು ದೆಹಲಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಲು ಬಯಸಿಲ್ಲ. ಬದಲಾಗಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಬೇಕು ಎಂದು ರಾಕೇಶ್ ಟಿಕಾಯತ್ ಈ ಮುನ್ನವೇ ತಿಳಿಸಿದ್ದರು.

ಕೇಂದ್ರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಕಿಸಾನ್ ಯೂನಿಯನ್ (BKU) ಮತ್ತು ಇತರ ರೈತ ಸಂಘಟನೆಗಳು ಡಿಸೆಂಬರ್ ಅಂತ್ಯದವರೆಗೆ ತಮ್ಮ ಹೋರಾಟ ಮುಂದುವರಿಸುವ ಸೂಚನೆ ಲಭ್ಯವಾಗಿತ್ತು. ಈ ಬಗ್ಗೆ ಬಿಕೆಯು ವಕ್ತಾರ, ರೈತ ಮುಖಂಡ ರಾಕೇಶ್ ಟಿಕಾಯತ್  ಈ ಮುನ್ನವೂ ಹೇಳಿಕೆ ನೀಡಿದ್ದರು.

ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ರಾಕೇಶ್ ಟಿಕಾಯತ್, ಡಿಸೆಂಬರ್​ವರೆಗೆ ರೈತ ಹೋರಾಟ ಮುಂದುವರಿಸುವ ಬಗ್ಗೆ ಹೇಳಿಕೆ ನೀಡಿದ್ದರು. ನವೆಂಬರ್ ಅಥವಾ ಡಿಸೆಂಬರ್ ​ತನಕವೂ ರೈತರ ಆಂದೋಲನ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

ಕೇಂದ್ರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಂದ ಸಣ್ಣ ಸಣ್ಣ ಅಂಗಡಿಗಳು ಮುಚ್ಚುವಂತಾಗಲಿದೆ. ಕೇವಲ ದೊಡ್ಡ ವ್ಯಾಪಾರಿ ಮಳಿಗೆಗಳು ಮಾತ್ರ ಉಳಿಯುತ್ತವೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಈ ಕಾನೂನು ಸಹಾಯ ಮಾಡಲಿದೆ ಎಂಬುದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ವಾದವಾಗಿದೆ.

ಕೇಂದ್ರ ಸರ್ಕಾರದ ಚುಕ್ಕಾಣಿ ಒಂದು ರಾಜಕೀಯ ಪಕ್ಷದ ಹಿಡಿತದಲ್ಲಿ ಇರುತ್ತಿದ್ದರೆ ಈಗಾಗಲೇ ರೈತರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದರು. ಆದರೆ ಈ ಸರ್ಕಾರ ಉದ್ಯಮಿಗಳಿಂದ ನಡೆಯುತ್ತಿದೆ. ಹಾಗಾಗಿ ಇಡೀ ದೇಶವನ್ನು ಅವರು ಮಾರಲು ಹೊರಟಿದ್ದಾರೆ ಎಂದು ಟಿಕಾಯತ್ ಕೇಂದ್ರದ ವಿರುದ್ಧ ಮುಂಚಿನಿಂದಲೂ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.

ಇದನ್ನು ಓದಿ: Delhi Chalo: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ‘ದೆಹಲಿ ಚಲೋ‘ಗೆ ಶತ ದಿನ; ರೈತ ಚಳವಳಿ ನಡೆದು ಬಂದಿದ್ದು ಹೀಗೆ..

ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

(Rakesh Tikait says will go to the Gujarat and govt will accept our demands in 5 to 6 months)