AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deep Sidhu Arrested ಗಣರಾಜ್ಯೋತ್ಸವ ಗಲಭೆ ಪ್ರಕರಣ: ನಾಪತ್ತೆಯಾಗಿದ್ದ ನಟ ದೀಪ್ ಸಿಧು ಅರೆಸ್ಟ್​

Deep Sidhu Arrested ಬಿಜೆಪಿ ಜತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ದೀಪ್ ಸಿಧು ಮೇಲಿದ್ದು, ಗಣರಾಜ್ಯೋತ್ಸವದ ಗಲಭೆಯಂದು ಅವರ ಮತ್ತು ಇನ್ನೂ ಮೂವರನ್ನು ಪತ್ತೆಹಚ್ಚಿದವರಿಗೆ 1 ಲಕ್ಷ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.

Deep Sidhu Arrested ಗಣರಾಜ್ಯೋತ್ಸವ ಗಲಭೆ ಪ್ರಕರಣ: ನಾಪತ್ತೆಯಾಗಿದ್ದ ನಟ ದೀಪ್ ಸಿಧು ಅರೆಸ್ಟ್​
ದೀಪ್ ಸಿಧು
Follow us
guruganesh bhat
|

Updated on:Feb 09, 2021 | 11:15 AM

ದೆಹಲಿ: ಗಣರಾಜ್ಯೋತ್ಸವದಂದು (Republic Day) ಐತಿಹಾಸಿಕ ಕೆಂಪುಕೋಟೆಯ (Red Fort) ಮೇಲೆ ಸಿಖ್ ಧ್ವಜ ಹಾರಿಸಿದ ಪ್ರಕರಣದ ಆರೋಪದಡಿ ನಾಪತ್ತೆಯಾಗಿದ್ದ ಪಂಜಾಬಿ ಗಾಯಕ, ನಟ ದೀಪ್ ಸಿಧುವನ್ನು (Deep Sidhu) ದೆಹಲಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬಿಜೆಪಿ ಜತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ದೀಪ್ ಸಿಧು ಮೇಲಿದ್ದು, ಗಣರಾಜ್ಯೋತ್ಸವದ ಗಲಭೆಯಂದು ಅವರ ಮತ್ತು ಇನ್ನೂ ಮೂವರನ್ನು ಪತ್ತೆಹಚ್ಚಿದವರಿಗೆ 1 ಲಕ್ಷ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.

ಜನವರಿ 26ರಂದು ಪಂಜಾಬ್ ರೈತರು ಮತ್ತು ರೈತ ಮುಖಂಡರು ಟ್ರ್ಯಾಕ್ಟರ್ ಪರೇಡ್​ ಆಯೋಜಿಸಿದ್ದರು. ಶಾಂತಿಯುತವಾಗಿಯೇ ಮೆರವಣಿಗೆ ನಡೆಸುವುದಾಗಿ ಭರವಸೆ ನೀಡಿದ್ದರೂ ಸಹ ಪ್ರತಿಭಟನೆ ಉಗ್ರ ಹಿಂಸಾಚಾರಕ್ಕೆ ತಿರುಗಿತ್ತು. ನಿಗದಿತ ಸ್ಥಳದಿಂದ ಅನುಮತಿ ನೀಡದ ಕಡೆಯೂ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ಅಲ್ಲದೇ, ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜದ ಪಕ್ಕವೇ ಸಿಖ್ ಧಾರ್ಮಿಕ ಧ್ವಜ ಹಾರಿಸಲಾಗಿತ್ತು. ಈ ಕೃತ್ಯದ ಹಿಂದೆ ಪಂಜಾಬ್​ನ ದೀಪ್ ಸಿಧು ಪಾತ್ರವಿದೆಯೆಂದು ಆರೋಪಿಸಲಾಗಿತ್ತು. ಈ ಘಟನೆಯ ನಂತರ ದೀಪ್ ಸಿಧು ನಾಪತ್ತೆಯಾಗಿದ್ದರು.

ಗಣರಾಜ್ಯೋತ್ಸವಕ್ಕೆ ಕಪ್ಪುಚುಕ್ಕಿ

ದೇಶದ ಈವರೆಗಿನ ಗಣರಾಜ್ಯೋತ್ಸವಗಳಲ್ಲೇ ಈಬಾರಿ ನಡೆದ ಗಲಭೆ ಕಪ್ಪುಚುಕ್ಕಿಯಾಗಿತ್ತು. ಹಿಂಸಾಚಾರದ ನಂತರ, ರೈತ ಮುಖಂಡರಾದ ರಾಕೇಶ್ ಟಿಕಾಯತ್ ಸೇರಿ ಹಲವರು ಗಲಭೆ ಹಿಂದೆ ರೈತರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಗಲಭೆಗೆ ಸಂಬಂಧಿಸಿ ಪೊಲೀಸರು ಹಲವರನ್ನು ಬಂಧಿಸಿದ್ದರೂ ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಗಾಳ ಬೀಸಿದ್ದರು.

ಕೆಂಪುಕೋಟೆ ಸೇರಿದಂತೆ ದೆಹಲಿಯ ಪ್ರಮುಖ ಬೀದಿಗಳಲ್ಲಿ ದೆಹಲಿ ಚಲೋ ಪ್ರತಿಭಟನಾಕಾರರ ಸಾವಿರಾರು ಟ್ರ್ಯಾಕ್ಟರ್​ಗಳು ಮೆರವಣಿಗೆ ಸಾಗಿದ್ದವು. ಪೊಲೀಸರು ಅನುಮತಿ ನೀಡಿದ್ದ ನಿಗದಿತ ರಸ್ತೆಗಳನ್ನು ಬಿಟ್ಟು ಇತರ ಪ್ರದೇಶಗಳಿಗೂ ಸಾಗಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಘಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದ ಪರಿಣಾಮ ಹಲವರು ಗಾಯಗೊಂಡಿದ್ದರು. ಅಲ್ಲದೇ, ಪಂಜಾಬ್ ಸರ್ಕಾರ ಗಲಭೆಯಲ್ಲಿ ನಾಪತ್ತೆಯಾದವನ್ನು ಪತ್ತೆಹಚ್ಚಲು ಸಹಾಯವಾಣಿಯನ್ನು ಸಹ ಆರಂಭಿಸಿತ್ತು.

ಸುದ್ದಿಸಂಸ್ಥೆ ಎಎನ್​ಐ (ANI) ವರದಿಯಂತೆ ದೀಪ್ ಸಿಧು ತಮ್ಮ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ತಮ್ಮ ಗೆಳತಿಯ ಮೂಲಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಈಮೂಲಕ ಪ್ರತಿಭಟನಾಕಾರ ರೈತರಲ್ಲಿ ಆಕ್ರೋಶ ಹೆಚ್ಚಿಸುತ್ತಿದ್ದರು ಆದರೆ, ಈಗ ದೀಪ್ ಸಿಧುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಟ್ರ್ಯಾಕ್ಟರ್ ಪರೇಡ್​ನಂದು ನಡೆದ ಗಲಭೆಯ ಆಳ-ಅಗಲದ ಕುರಿತು ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ: ಪ್ರಕರಣ ಹಿಂದಿದೆ ಬಿಜೆಪಿ ಬೆಂಬಲಿಗ, ನಟ ದೀಪ್‌ ಸಿಧು ಕೈವಾಡ?

Published On - 11:06 am, Tue, 9 February 21