ಮಾರ್ಚ್​ನಿಂದ ದೆಹಲಿಯಲ್ಲಿ ಎರಡನೇ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ.. 60 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್

|

Updated on: Feb 25, 2021 | 6:53 AM

ಮೊದಲ ಹಂತದ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. 2ನೇ‌ ಹಂತದ ಲಸಿಕೆ ಅಭಿಯಾನಕ್ಕೂ ಕೇಂದ್ರ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಮಾರ್ಚ್ 1 ರಿಂದ‌ ಎರಡನೇ‌ ಹಂತದ ಲಸಿಕೆ ಅಭಿಯಾನ ಆರಂಭವಾಗಲಿದ್ದು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ‌ ಸಿಗಲಿದೆ. ಖಾಸಗಿಯಾಗಿಯೂ ಲಸಿಕೆ ಸಿಗುವಂತೆ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ಮಾರ್ಚ್​ನಿಂದ ದೆಹಲಿಯಲ್ಲಿ ಎರಡನೇ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ.. 60 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್
ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿರುವುದು
Follow us on

ದೆಹಲಿ: ದೇಶದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗೆ ಮೊದಲನೇ ಹಂತದಲ್ಲಿ 1ಕೋಟಿ 25 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇದೀಗ ಮಾರ್ಚ್​ನಿಂದ ಎರಡನೇ ಹಂತದ ಕೊರೊನಾ ಲಸಿಕಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕೌಂಟ್​ಡೌನ್ ಶುರುವಾಗಿದೆ.

60 ವರ್ಷ ಮೇಲ್ಪಟ್ಟವರಿಗೆ ಮಾರ್ಚ್ 1ರಿಂದ ಲಸಿಕೆ
ಹೌದು ದೇಶಾದ್ಯಂತ ಮಾರ್ಚ್‌ 1ರಿಂದ 2ನೇ ಹಂತದ ಕೋವಿಡ್‌ ಲಸಿಕಾ ಅಭಿಯಾನ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಮಾಹಿತಿ ನೀಡಿದ್ದಾರೆ. 2ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ‘ವ್ಯಾಕ್ಸಿನ್’ ಸಿಗಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಮೊದಲ ಹಂತದ ಲಸಿಕೆ ಅಭಿಯಾನದಲ್ಲಿ ಯಶಸ್ಸು ಸಾಧಿಸಲಾಗಿದ್ದು, 2ನೇ ಹಂತಕ್ಕೆ ಅಗತ್ಯವಿರುವ ಕ್ರಮಗಳನ್ನ ಕೈಗೊಳ್ಳಲಾಗಿದೆ.

10 ಸಾವಿರ ಸರ್ಕಾರಿ, 20 ಸಾವಿರ ಖಾಸಗಿ ಕೇಂದ್ರಗಳಲ್ಲಿ ವ್ಯಾಕ್ಸಿನ್
ಅಂದಹಾಗೆ ಮಾರ್ಚ್‌ 1ರಿಂದ 2ನೇ ಹಂತದ ವ್ಯಾಕ್ಸಿನ್ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರೂ ಸೇರಿದಂತೆ 45 ವರ್ಷ ಮೇಲ್ಪಟ್ಟ, ವಿವಿಧ ಖಾಯಿಲೆಗಳಿಂದ ಬಳಲುತ್ತಿರುವವರೂ ಲಸಿಕೆ ಪಡೆಯಬಹುದಾಗಿದೆ. 2ನೇ ಹಂತದಲ್ಲಿ ಲಸಿಕೆ ಅಭಿಯಾನ 10 ಸಾವಿರ ಸರ್ಕಾರಿ ಹಾಗೂ 20 ಸಾವಿರ ಖಾಸಗಿ ನಿಯಂತ್ರಣ ಕೇಂದ್ರಗಳ ಮೂಲಕ ನಡೆಯಲಿದೆ. ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ವಿತರಣೆ ಮಾಡಲು ನಿರ್ಧರಿಸಲಾಗಿದೆ‌.

ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರು ಎಷ್ಟು ಹಣ ಪಾವತಿಸಬೇಕೆನ್ನುವುದನ್ನು 3-4 ದಿನಗಳಲ್ಲಿ ಆರೋಗ್ಯ ಸಚಿವಾಲಯ ನಿರ್ಧರಿಸಲಿದೆ. ಇದರ ಜೊತೆಗೆ ಲಸಿಕೆ ವಿತರಣೆ ಹೇಗೆ? ಲಸಿಕೆ ಎಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.ದೇಶದಲ್ಲಿ 2ನೇ ಅಲೆ ಆತಂಕ ಎದುರಾಗಿರುವ ಬೆನ್ನಲ್ಲೇ 2ನೇ ಹಂತದ ಲಸಿಕೆ ಅಭಿಯಾನಕ್ಕೂ ಕೌಂಟ್​​ಡೌನ್ ಶುರುವಾಗಿದೆ. ಹೀಗಾಗಿ 2ನೇ ಹಂತದಲ್ಲಿ ವ್ಯಾಕ್ಸಿನ್ ವಿತರಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ. ಹಾಗೇ 2ನೇ ಅಲೆ ಹಬ್ಬದಂತೆ ತಡೆಯಲು ಬೇಕಾದ ಮುಂಜಾಗ್ರತೆ ಕ್ರಮಗಳನ್ನೂ ಅನುಸರಿಸುತ್ತಿದೆ.

ಇದನ್ನೂ ಓದಿ: ದೇಶದಲ್ಲಿ ಕೊರೊನಾ 2ನೇ ಅಲೆಯ ಆತಂಕ.. ಮತ್ತೊಮ್ಮೆ ತತ್ತರಿಸಿದ ಮಹಾರಾಷ್ಟ್ರ, ಕೇರಳ