ಲೋಕಸಭೆ ಚುನಾವಣೆಗೆ 8 ಅಭ್ಯರ್ಥಿಗಳನ್ನು ಘೋಷಿಸಿದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ

|

Updated on: Mar 28, 2024 | 9:02 PM

ಶಿಂಧೆ ನೇತೃತ್ವದ ಶಿವಸೇನಾ ಮಹರಾಷ್ಟ್ರದ ಎಂಟು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ಏಳು ಹಾಲಿ ಸಂಸದರಿದ್ದಾರೆ.ರಾಮ್‌ಟೆಕ್ (SC) ಕ್ಷೇತ್ರದಿಂದ ಮಾಜಿ ಕಾಂಗ್ರೆಸ್ ಶಾಸಕ ರಾಜು ಪರ್ವೆಗೆ ಟಿಕೆಟ್ ನೀಡಲಾಗಿದೆ. ಪರ್ವೆ ಇತ್ತೀಚೆಗೆ ಶಿವಸೇನಾ ಸೇರಿದ್ದರು.

ಲೋಕಸಭೆ ಚುನಾವಣೆಗೆ 8 ಅಭ್ಯರ್ಥಿಗಳನ್ನು ಘೋಷಿಸಿದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ
ಏಕನಾಥ್ ಶಿಂಧೆ
Follow us on

ಮುಂಬೈ ಮಾರ್ಚ್ 28: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಶಿವಸೇನಾ (Shiv Sena) ಗುರುವಾರ ರಾಜ್ಯದ ಎಂಟು ಲೋಕಸಭಾ ಸ್ಥಾನಗಳಿಗೆ (Lok Sabha Elections) ಅಭ್ಯರ್ಥಿಗಳನ್ನು ಘೋಷಿಸಿದ್ದು, ಇದರಲ್ಲಿ ಏಳು ಹಾಲಿ ಸಂಸದರಿದ್ದಾರೆ. ಏಪ್ರಿಲ್ 19 ರಂದು ಮತದಾನ ನಡೆಯಲಿರುವ ರಾಮ್‌ಟೆಕ್ (SC) ಕ್ಷೇತ್ರದಿಂದ ಮಾಜಿ ಕಾಂಗ್ರೆಸ್ ಶಾಸಕ ರಾಜು ಪರ್ವೆಗೆ ಟಿಕೆಟ್ ನೀಡಲಾಗಿದೆ. ಪರ್ವೆ ಇತ್ತೀಚೆಗೆ ಶಿವಸೇನಾ ಸೇರಿದ್ದರು. ಶಿವಸೇನಾದ ಹಾಲಿ ಸಂಸದ ಕೃಪಾಲ್ ತುಮಾನೆ ಅವರನ್ನು ಬದಲಾಯಿಸಿ ರಾಜು ಪರ್ವೆಗೆ ಮಣೆ ಹಾಕಲಾಗಿದೆ.

ಪಟ್ಟಿಯಲ್ಲಿರುವ ಇತರ ಏಳು ಹೆಸರುಗಳು ಎಲ್ಲಾ ಹಾಲಿ ಸಂಸದರದ್ದು. ರಾಹುಲ್ ಶೆವಾಲೆ (ಮುಂಬೈ ಸೌತ್ ಸೆಂಟ್ರಲ್), ಸಂಜಯ್ ಮಾಂಡ್ಲಿಕ್ (ಕೊಲ್ಹಾಪುರ), ಸದಾಶಿವ ಲೋಖಂಡೆ (ಶಿರಡಿ (ಎಸ್‌ಸಿ)) ಪ್ರತಾಪ್ ರಾವ್ ಜಾಧವ್ (ಬುಲ್ಧಾನ), ಹೇಮಂತ್ ಪಾಟೀಲ್ (ಹಿಂಗೋಲಿ), ಶ್ರೀರಂಗ್ ಬರ್ನೆ ( ಮಾವಲ್) ಮತ್ತು ಧೈರ್ಯಶೀಲ ಮನೆ (ಹಟಕಣಂಗಲೆ) ಅವರಿಗೆ ಶಿವಸೇನಾ ಸೀಟು ನೀಡಿದೆ.


ಜೂನ್ 2022 ರಲ್ಲಿ, 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಡಿದ ಶಿವಸೇನಾ ವಿಭಜನೆಯಾಯಿತು. ರಾಜ್ಯದ 18 ಸಂಸದರಲ್ಲಿ 13 ಮಂದಿ ಶಿಂಧೆ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.

ಶಿವಸೇನಾ ಸೇರಿದ ಬಾಲಿವುಡ್ ನಟ ಗೋವಿಂದ

ಬಾಲಿವುಡ್ ನಟ ಮತ್ತು ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದ ಗೋವಿಂದ ಅವರು ಮಾರ್ಚ್ 28 ರಂದು ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನಾ ಸೇರಿದ್ದಾರೆ. 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಧೀಮಂತ ನಾಯಕ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು ಗೋವಿಂದ.

60 ವರ್ಷದ ನಟನನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ಶಿಂಧೆ ಅವರು ಗೋವಿಂದ, ಸಮಾಜದ ಎಲ್ಲಾ ವರ್ಗಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮತ್ತೆ ರಾಜಕೀಯಕ್ಕೆ ಮರಳಿದ ನಟ ಗೋವಿಂದ, ಕಾಂಗ್ರೆಸ್ ತೊರೆದು ಹೊಸ ಪಕ್ಷ ಸೇರಿದ್ದಾರೆ

1980ರ ದಶಕದಲ್ಲಿ ನಟನಾ ವೃತ್ತಿ ಆರಂಭಿಸಿದ  ಗೋವಿಂದ ಅವರು, 2004ರಿಂದ 2009ರವರೆಗೆ ರಾಜಕೀಯದಲ್ಲಿ ಮೊದಲ ಬಾರಿಗೆ ಕಾಲಿಟ್ಟ ನಂತರ ಮತ್ತೆ ಅದೇ ಕ್ಷೇತ್ರಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. “ನಾನು 14 ವರ್ಷಗಳ ಸುದೀರ್ಘ ವನವಾಸ ನಂತರ ರಾಜಕೀಯಕ್ಕೆ ಮರಳಿದ್ದೇನೆ.ಅವಕಾಶ ಸಿಕ್ಕರೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದು ಗೋವಿಂದ ಹೇಳಿದ್ದಾರೆ.

 

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Thu, 28 March 24