
ಲಕ್ನೋ, ಜೂನ್ 18: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ಶಿವಸೇನೆ (UBT) ಪಕ್ಷಗಳಲ್ಲಿ ಸಂಭವಿಸಿರುವ ಭಾರಿ ಬಂಡಾಯದ ಬೆನ್ನಲ್ಲೇ, ಈಗ ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದಲ್ಲೂ (SP) ಅಂತಹದ್ದೇ ದೊಡ್ಡ ವಿಭಜನೆ ಉಂಟಾಗಲಿದೆ ಎಂಬ ಆಘಾತಕಾರಿ ಮುನ್ಸೂಚನೆಯನ್ನು ಉತ್ತರ ಪ್ರದೇಶದ ಸಚಿವ ಒ.ಪಿ. ರಾಜ್ಭರ್ ನೀಡಿದ್ದಾರೆ.
ಅಮಿತ್ ಶಾಗೆ ರಾಮ್ ಗೋಪಾಲ್ ಯಾದವ್ ಪತ್ರ?
ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥ ಹಾಗೂ ಯುಪಿ ಸಚಿವ ಒ.ಪಿ. ರಾಜ್ಭರ್ ಅವರು ಸಮಾಜವಾದಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಸ್ಪಿಯ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಹಸ್ಯ ಪತ್ರವೊಂದನ್ನು ಬರೆದಿದ್ದಾರೆ ಎಂದು ರಾಜ್ಭರ್ ಹೇಳಿದ್ದಾರೆ.
ನಿಮ್ಮ ಗಮನವನ್ನು ಕೇವಲ ಮಹಾರಾಷ್ಟ್ರದ ಮೇಲಷ್ಟೇ ಇಡಬೇಡಿ, ಈಗ ಉತ್ತರ ಪ್ರದೇಶದ ಸರದಿ ಬಂದಿದೆ. ರಾಮ್ ಗೋಪಾಲ್ ಅವರು ಅಮಿತ್ ಶಾ ಅವರಿಗೆ ಪತ್ರ ನೀಡಿ, ತಮ್ಮ ಪಕ್ಷದ ಕೆಲವು ಸಂಸದರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಆ ಸಂಸದರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ, ಆದರೆ ನಮ್ಮನ್ನು ಸುರಕ್ಷಿತವಾಗಿರಿಸಿ ಎಂದು ಕೋರಿದ್ದಾರೆ ಎಂದು ರಾಜ್ಭರ್ ಪ್ರತಿಪಾದಿಸಿದ್ದಾರೆ.
ಮತ್ತಷ್ಟು ಓದಿ:
ತನಿಖಾ ಸಂಸ್ಥೆಗಳ ಭೀತಿಯೇ ಕಾರಣವೇ?
ಅಖಿಲೇಶ್ ಯಾದವ್ ಅವರ ವಿರುದ್ಧ ಇರುವ ಹಳೆಯ ಗಣಿಗಾರಿಕೆ ಹಗರಣ ಮತ್ತು ಗೋಮತಿ ನದಿ ದಂಡೆ ಅಭಿವೃದ್ಧಿ ಪ್ರಕರಣಗಳ ತನಿಖೆಯನ್ನು ಉಲ್ಲೇಖಿಸಿರುವ ರಾಜ್ಭರ್, ರಾಮ್ ಗೋಪಾಲ್ ಯಾದವ್ ಅವರು ಆ ಪತ್ರದಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಸಿಬಿಐ ತನಿಖೆಯ ಭೀತಿಯಿಂದಾಗಿಯೇ ಎಸ್ಪಿ ಸಂಸದರು ಪಕ್ಷ ಬದಲಾಯಿಸಲು ಸಿದ್ಧರಾಗುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.
ವಿಡಿಯೋ
#WATCH | Lucknow | Uttar Pradesh Minister and founder of Suheldev Bhartiya Samaj Party, OP Rajbhar, says, “Only when someone is ready to be bought, people will buy them. Don’t keep your attention only on Maharashtra; it is UP’s number now. Didn’t you see that Ram Gopal ji has… pic.twitter.com/EYVM9CDXi0
— ANI UP/Uttarakhand (@ANINewsUP) June 17, 2026
ಆರೋಪವನ್ನು ಆಧಾರರಹಿತ ಎಂದ ಸಮಾಜವಾದಿ ಪಕ್ಷ
ವಿರೋಧ ಪಕ್ಷಗಳನ್ನು ಒಡೆಯಲಾಗುತ್ತಿದೆ ಎಂಬ ಊಹಾಪೋಹಗಳ ನಡುವೆ ಬಂದಿರುವ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷವು ಕಟ್ಟುನಿಟ್ಟಾಗಿ ನಿರಾಕರಿಸಿದೆ. ಎಸ್ಪಿ ರಾಷ್ಟ್ರೀಯ ವಕ್ತಾರ ಡಾ. ಅನುರಾಗ್ ಭದೌರಿಯಾ ಪ್ರತಿಕ್ರಿಯಿಸಿ, ಸಚಿವ ರಾಜ್ಭರ್ ಅವರಿಗೆ ಏನಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ಅವರು ಸಮಾಜವಾದಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಯಾವುದೇ ಆಧಾರವಿಲ್ಲದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಳ್ಳಿಹಾಕಿದ್ದಾರೆ.
ಶಿವಸೇನೆ (UBT): ಸಂಸದರು ಶಿಂಧೆ ಬಣಕ್ಕೆ ವಲಸೆ ಹೋಗುವುದನ್ನು ತಡೆಯಲು ಉದ್ಧವ್ ಠಾಕ್ರೆ ಮುಂಬೈನಲ್ಲಿ ತುರ್ತು ಸಭೆ ಕರೆದಿದ್ದು, ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ‘ವಿಪ್’ ಜಾರಿ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC): ಮಮತಾ ಬ್ಯಾನರ್ಜಿ ಅವರ ಪಕ್ಷದ 20 ಬಂಡಾಯ ಸಂಸದರು ಈಗಾಗಲೇ ಎನ್ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದು, ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಮಾನ್ಯತೆ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಅರ್ಜಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ