ತಪ್ಪು ಮಾಡಿದರೆ ಬೆಲೆ ತೆರಬೇಕಾಗುತ್ತದೆ: ಸುಪ್ರೀಂಕೋರ್ಟ್ ತೀರ್ಪು ನಂತರ ಅಧಿಕಾರಿಗಳಿಗೆ ಕೇಜ್ರಿವಾಲ್ ಎಚ್ಚರಿಕೆ

|

Updated on: May 11, 2023 | 5:01 PM

Arvind Kejriwal:ದೆಹಲಿ ಸರ್ಕಾರದ ಕೆಲಸಕ್ಕೆ ಅಡೆತಡೆಗಳನ್ನು ಉಂಟುಮಾಡುವ ಅಧಿಕಾರಿಗಳು ಅದಕ್ಕಾಗಿ ಬೆಲೆ ತೆರಬೇಕಾಗುತ್ತದೆ. ದಕ್ಷ, ಪ್ರಾಮಾಣಿಕ, ಸ್ಪಂದಿಸುವ ಮತ್ತು ಸಹಾನುಭೂತಿಯುಳ್ಳ ಅಧಿಕಾರಿಗಳಿಗೆ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು

ತಪ್ಪು ಮಾಡಿದರೆ ಬೆಲೆ ತೆರಬೇಕಾಗುತ್ತದೆ: ಸುಪ್ರೀಂಕೋರ್ಟ್ ತೀರ್ಪು ನಂತರ ಅಧಿಕಾರಿಗಳಿಗೆ ಕೇಜ್ರಿವಾಲ್ ಎಚ್ಚರಿಕೆ
ಅರವಿಂದ ಕೇಜ್ರಿವಾಲ್
Follow us on

ಕೇಂದ್ರ-ದೆಹಲಿ ಸೇವೆಗಳ ವಿವಾದದ ಕುರಿತು ಸುಪ್ರೀಂಕೋರ್ಟ್‌ನ (Supreme Court) ತೀರ್ಪು ಐತಿಹಾಸಿಕ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ .ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ಮೇಲೆ ನಿಯಂತ್ರಣವನ್ನು ಪ್ರತಿಪಾದಿಸುವ ಕೇಂದ್ರ ಗೃಹ ಸಚಿವಾಲಯದ 2015 ರ ಅಧಿಸೂಚನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಟೀಕಿಸಿದ ಕೇಜ್ರಿವಾಲ್, ಕೇಂದ್ರ ಸರ್ಕಾರ ಕೈ ಕಟ್ಟಿ ನೀರಿನಲ್ಲಿ ಎಸೆದರೂ ದೆಹಲಿ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ದೆಹಲಿ ಸರ್ಕಾರದ ಪರವಾಗಿ ಸರ್ವಾನುಮತದ ತೀರ್ಪು ನೀಡಿದ್ದಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ದೆಹಲಿ ಸಿಎಂ ಧನ್ಯವಾದ ಅರ್ಪಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಅಭಿವೃದ್ಧಿ ಕಾರ್ಯಗಳ ವೇಗವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ಭರವಸೆ ನೀಡಿದರು.

ನಾವು ದೇಶಕ್ಕೆ ಶಿಕ್ಷಣದ ಮಾದರಿಯನ್ನು ನೀಡಿದ್ದೇವೆ. ಈ ಕೆಲಸವು ಮೊದಲು ನಡೆಯುತ್ತಿದ್ದುದಕ್ಕಿಂತ 10 ಪಟ್ಟು ವೇಗದಲ್ಲಿ ನಡೆಯುತ್ತದೆ. ದೆಹಲಿಯು ಈಗ ಇಡೀ ದೇಶಕ್ಕೆ ಸಮರ್ಥ ಆಡಳಿತದ ಮಾದರಿಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಕೇಜ್ರಿವಾಲ್ ಅವರು ಮುಂದಿನ ದಿನಗಳಲ್ಲಿ ಪ್ರಮುಖ ಪುನರ್ರಚನೆಯನ್ನು ಸೂಚಿಸಿದ್ದಾರೆ. ಅದೇ ವೇಳೆ ದೆಹಲಿ ಸರ್ಕಾರದ ಕೆಲಸಕ್ಕೆ ಅಡೆತಡೆಗಳನ್ನು ಉಂಟುಮಾಡುವ ಅಧಿಕಾರಿಗಳು ಅದಕ್ಕಾಗಿ ಬೆಲೆ ತೆರಬೇಕಾಗುತ್ತದೆ. ದಕ್ಷ, ಪ್ರಾಮಾಣಿಕ, ಸ್ಪಂದಿಸುವ ಮತ್ತು ಸಹಾನುಭೂತಿಯುಳ್ಳ ಅಧಿಕಾರಿಗಳಿಗೆ ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಒತ್ತಿ ಹೇಳಿದರು.


ಆಡಳಿತ ವ್ಯವಸ್ಥೆಯ ಕೂಲಂಕುಷ ಪರೀಕ್ಷೆಯೂ ನಡೆಯಲಿದೆ. ಇಡೀ ವ್ಯವಸ್ಥೆಯೇ ಕೊಳೆತು ಹೋಗಿದೆ. ನಾವು ಸಾರ್ವಜನಿಕರಿಗೆ ಜವಾಬ್ದಾರಿಯುತ ವ್ಯವಸ್ಥೆಯನ್ನು ರಚಿಸುತ್ತೇವೆ ಎಂದು ಅವರು ಹೇಳಿದರು.

ಸಂಜೆ ಎಲ್‌ಜಿ ವಿಕೆ ಸಕ್ಸೇನಾ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆ, ಭೂಮಿ ಹೊರತುಪಡಿಸಿ ಇತರೆ ಸೇವೆಗಳ ಮೇಲೆ ನಿಯಂತ್ರಣ ಹೊಂದಬಹುದು: ಸುಪ್ರೀಂ

ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಕೇಳಿದ ಪ್ರಶ್ನೆಗೆ, ಎಸಿಬಿ ನಮ್ಮೊಂದಿಗಿಲ್ಲ ಆದರೆ ವಿಜಿಲೆನ್ಸ್ ಈಗ ನಮ್ಮೊಂದಿಗೆ ಇರುತ್ತದೆ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದಿದ್ದಾರೆ ಕೇಜ್ರಿವಾಲ್.

ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿ ಹೊರತುಪಡಿಸಿ ಸೇವೆಗಳ ಮೇಲೆ ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಕಾರಿ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ