ಸ್ವಾತಿ ಮಲಿವಾಲ್ ಮೂಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಷಡ್ಯಂತ್ರ; ಆಮ್ ಆದ್ಮಿ ಆರೋಪ

ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಎದೆ ಮತ್ತು ಹೊಟ್ಟೆಗೆ ಒದ್ದು ದೌರ್ಜನ್ಯವೆಸಗಿದ್ದಾರೆ ಎಂದು ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಆಮ್ ಆದ್ಮಿ ಪಕ್ಷ ಸ್ವಾತಿ ಮಲಿವಾಲ್ ವಿರುದ್ಧ ಕಿಡಿಕಾರಿದೆ.

ಸ್ವಾತಿ ಮಲಿವಾಲ್ ಮೂಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಷಡ್ಯಂತ್ರ; ಆಮ್ ಆದ್ಮಿ ಆರೋಪ
ಸ್ವಾತಿ ಮಲಿವಾಲ್
Follow us
|

Updated on: May 17, 2024 | 7:26 PM

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಬಿಜೆಪಿ ವ್ಯವಸ್ಥಿತವಾದ ಷಡ್ಯಂತ್ರ ರೂಪಿಸಿದೆ. ಸ್ವಾತಿ ಮಲಿವಾಲ್ (Swati Maliwal) ಅವರು ಆ ಪಿತೂರಿಯ ಒಂದು ದಾಳವಾಗಿದ್ದಾರೆ. ಸ್ವಾತಿ ಮಲಿವಾಲ್ ಮೂಲಕ ಬಿಜೆಪಿ ಕೇಜ್ರಿವಾಲ್ ವಿರುದ್ಧ ಷಡ್ಯಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ. ಸ್ವಾತಿ ಮಲಿವಾಲ್ ಅವರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಎಂದು ಆಮ್ ಆದ್ಮಿ ಪಕ್ಷದ ಅತಿಶಿ ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಹೊರಗೆ ಬಂದ ನಂತರ ಅವರ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಚಿಂತೆಗೀಡಾದ ಬಿಜೆಪಿ ಈ ಷಡ್ಯಂತ್ರವನ್ನು ರೂಪಿಸಿದೆ. “ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಾಗಿನಿಂದ ಬಿಜೆಪಿಯನ್ನು ಕೆಣಕುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಷಡ್ಯಂತ್ರ ರೂಪಿಸಿದೆ. ಅದರ ಅನ್ವಯ ಸ್ವಾತಿ ಮಲಿವಾಲ್ ಅವರನ್ನು ಮೇ 13ರಂದು ಬೆಳಿಗ್ಗೆ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ಕಳುಹಿಸಲಾಯಿತು. ಅವರು ಮುಖ್ಯಮಂತ್ರಿಯ ಮೇಲೆ ಆರೋಪ ಮಾಡುವ ಉದ್ದೇಶದಿಂದಲೇ ಅಲ್ಲಿಗೆ ಹೋಗಿದ್ದರು. ಆದರೆ, ಆ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಿಗದ ಕಾರಣದಿಂದ ಅವರನ್ನು ಬಿಟ್ಟು ಅವರ ಆಪ್ತನ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್​ಗೆ ವಿಶೇಷ ಉಪಚಾರ ನೀಡಲಾಗಿದೆ; ಮಧ್ಯಂತರ ಜಾಮೀನಿಗೆ ಅಮಿತ್ ಶಾ ಆಕ್ಷೇಪ

ಇಂದು ಸುದ್ದಿಗೋಷ್ಠಿಯನ್ನು ನಡೆಸಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್, ಬಿಭವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ನನಗೆ ಪಿರಿಯಡ್ಸ್​ ಆಗಿದೆ, ದಯವಿಟ್ಟು ಬಿಟ್ಟುಬಿಡಿ ಎಂದು ಹೇಳಿದ್ದರೂ ಕೇಳದೆ ನನ್ನ ಎದೆ, ಹೊಟ್ಟೆಗೆ ಒದ್ದು ದೌರ್ಜನ್ಯ ನಡೆಸಿದ್ದಾನೆ. ಅಲ್ಲಿಗೆ ಸೆಕ್ಯುರಿಟಿಯವರನ್ನು ಕರೆಸಿ ನನ್ನನ್ನು ಹೊರಗೆ ದಬ್ಬಿಸಿದ್ದಾನೆ ಎಂದು ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಪ್ ನಾಯಕರಾದ ಅತಿಶಿ, “ಸ್ವಾತಿ ಅವರ ಬಟ್ಟೆಗಳು ಹರಿದಿಲ್ಲ ಮತ್ತು ಅವರ ತಲೆಯ ಮೇಲೆ ಯಾವುದೇ ಗಾಯವಿಲ್ಲ.. ಆದರೂ ಪದೇಪದೆ ಕಪಾಳಮೋಕ್ಷ ಮಾಡಿ, ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ನಂಬಲು ಸಾಧ್ಯವಿಲ್ಲ” ಎಂದು ಅತಿಶಿ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿಗೆ ಮರಳಬೇಕಾಗಿಲ್ಲ ಎಂಬ ಕೇಜ್ರಿವಾಲ್ ಹೇಳಿಕೆ; ನಾವು ಯಾರಿಗೂ ವಿನಾಯಿತಿ ನೀಡಿಲ್ಲ ಎಂದ ಸುಪ್ರೀಂ

ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಮರುದಿನ ಆಮ್ ಆದ್ಮಿ ಪಕ್ಷವು ಕೇಜ್ರಿವಾಲ್ ನಿವಾಸದ ಡ್ರಾಯಿಂಗ್ ರೂಮಿನಲ್ಲಿ ಸ್ವಾತಿ ಮಲಿವಾಲ್ ಮೇಲೆ ಬಿಭವ್ ಕುಮಾರ್ ಹಲ್ಲೆ ನಡೆಸಿರುವುದನ್ನು ಒಪ್ಪಿಕೊಂಡಿತ್ತು. ಆದರೆ, ಈಗ ಸ್ವಾತಿ ಮಲಿವಾಲ್ ವಿರುದ್ಧವೇ ಆರೋಪ ಮಾಡುತ್ತಿದೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಇಂದು ತೀವ್ರ ವಾಗ್ದಾಳಿ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ